Asianet Suvarna News Asianet Suvarna News

ಸರ ಕದಿಯುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರ್ ಕೊನೆಗೂ ಸೆರೆಯಾದ

ಸಾಫ್ಟ್‌ವೇರ್ ಉದ್ದಿಮೆಯಲ್ಲಿ ಉಂಟಾದ ನಷ್ಟ ತುಂಬಿಕೊಳ್ಳಲು ಸರಗಳ್ಳತನಕ್ಕಿಳಿದಿದ್ದ ಸಾಫ್ಟ್ ವೇರ್ ಕಂಪೆನಿ ಮಾಲಿಕನೊಬ್ಬ ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. 
 

To clear loans, techie turns chain-snatcher
Author
Bengaluru, First Published Jul 15, 2018, 2:43 PM IST

ಬೆಂಗಳೂರು :  ಸಾಫ್ಟ್‌ವೇರ್ ಉದ್ದಿಮೆಯಲ್ಲಿ ಉಂಟಾದ ನಷ್ಟ ತುಂಬಿಕೊಳ್ಳಲು ಸರಗಳ್ಳತನಕ್ಕಿಳಿದಿದ್ದ ಸಾಫ್ಟ್ ವೇರ್ ಕಂಪೆನಿ ಮಾಲಿಕನೊಬ್ಬ ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. 

ಪರಪ್ಪನ ಅಗ್ರಹಾರ ನಿವಾಸಿ ಪ್ರಭಾಕರ್ (40 ) ಬಂಧಿತ ನಾಗಿದ್ದು, ಆರೋಪಿಯಿಂದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ಎಚ್‌ಎಸ್‌ಆರ್ ಲೇಔಟ್ ಸಮೀಪ ಸರಗಳ್ಳತನಕ್ಕೆ ಯತ್ನದ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳುವಾಗ ಬೈಕ್ ಅಪಘಾತ ಮಾಡಿಕೊಂಡಿದ್ದ. ಬಳಿಕ ಚೇತರಿಸಿಕೊಂಡ ಆತನನ್ನು ವಶಕ್ಕೆ ಪಡೆಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಭಾಕರ್ ಮೂಲತಃ ಆಂಧ್ರಪ್ರದೇಶದ ಮದನಪಲ್ಲಿ. 20 ವರ್ಷಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ಆತ, ಪತ್ನಿ ಮತ್ತು ಇಬ್ಬರ ಮಕ್ಕಳ ಜತೆ ಪರಪ್ಪನ ಅಗ್ರಹಾರದಲ್ಲಿ ವಾಸವಾಗಿದ್ದ. ಮೊದಲು ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಆತ, ಬಳಿಕ ಸ್ವಂತ ಸಾಫ್ಟ್ ವೇರ್ ಬೋರ್ಡ್‌ಗಳನ್ನು ಉತ್ಪಾದಿಸುವ ಕಂಪೆನಿ ಆರಂಭಿಸಿದ್ದ. ಈ ನಡುವೆ ಐಷಾರಾಮಿ ಜೀವನ ಕಡೆಗೆ ಆಕರ್ಷಿತನಾಗಿದ್ದ ಪ್ರಭಾಕರ್, ಮೋಜು ಮಸ್ತಿ ಮಾಡಲು ಅವನಿಗೆ ಹಣಕಾಸು ಸಮಸ್ಯೆ ಎದುರಾಗಿತ್ತು. ಇತ್ತ ಸಾಫ್ಟ್‌ವೇರ್ ಉದ್ಯಮದಲ್ಲಿ ಆತನಿಗೆ ನಿರೀಕ್ಷಿತ ಲಾಭ ಬರಲಿಲ್ಲ. ಇದರಿಂದ ಬೇಸರಗೊಂಡ ಆತ, ಕೊನೆಗೆ ಸುಲಭವಾಗಿ ಹಣ ಸಂಪಾದಿಸಲು ಸರಗಳ್ಳತನ ಕೃತ್ಯಕ್ಕಿಳಿದಿದ್ದ ಎಂದು ಪೊಲೀಸರು ವಿವರಿಸಿದ್ದಾರೆ. 

ಬೆನ್ನಹಟ್ಟಿ ಹಿಡಿದ ಪೊಲೀಸರು: ಕೆಲ ದಿನಗ ಳಿಂದ ಮುಂಜಾನೆ ಹೊತ್ತಿನಲ್ಲಿ ಎಚ್‌ಎಸ್‌ಆರ್ ಲೇಔಟ್, ಮಡಿವಾಳ ಹಾಗೂ ಜಯನಗರ ವ್ಯಾಪ್ತಿಯಲ್ಲಿ ಮಹಿಳೆಯರಿಂದ ಸರ ದೋಚಿ ಪ್ರಭಾಕರ್ ಪರಾರಿಯಾಗುತ್ತಿದ್ದ. ಈ ಕೃತ್ಯಗಳ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಘಟನಾ ಸ್ಥಳದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕೆಲವು ಕಡೆ ಆತನ ಚಲವಲನದ ದೃಶ್ಯಾವಳಿಗಳು ಪತ್ತೆಯಾಗಿದ್ದವು. ಈ ಮಾಹಿತಿ ಆಧರಿಸಿ ಪೊಲೀಸರು ಆರೋಪಿ ಪತ್ತೆಗೆ ಕಾರ್ಯ ಚರಣೆಗಿಳಿದಿದ್ದರು. ಜು.6 ರಂದು ಮುಂಜಾನೆ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಆರೋಪಿ ಸರಗಳ್ಳತನಕ್ಕೆ ಬಂದಿದ್ದ. 

ಆ ವೇಳೆ ಗಸ್ತಿನಲ್ಲಿದ್ದ ಹೆಡ್ ಕಾನ್‌ಸ್ಟೇಬಲ್ ಮಾಳಪ್ಪ ಅವರಿಗೆ ಆತ ಎದುರಾಗಿದ್ದಾನೆ. ಆಗ ಭಯದಿಂದ ತಪ್ಪಿಸಿಕೊಳ್ಳಲು ಪ್ರಭಾಕರ್  ಯತ್ನಿಸಿದ್ದಾನೆ. ಇತ್ತ ಆತನ ನಡವಳಿಕೆಯಿಂದ ಅನುಮಾನಗೊಂಡ ಪೊಲೀಸರು, ತಕ್ಷಣ ಪ್ರಭಾಕರ್ ಬೆನ್ನಹತ್ತಿದ್ದಾರೆ. ಈ ಹಂತದಲ್ಲಿ ಆತಂಕದಿಂದ ಬೈಕ್ ಓಡಿಸುವಾಗ ಆತ ರಸ್ತೆ ವಿಭಜಕಕ್ಕೆ ಗುದ್ದಿಸಿ ಕೆಳಗೆ ಬಿದ್ದಿದ್ದಾನೆ.  ಬಳಿಕ ಗಾಯಾಳು ಪ್ರಭಾಕರ್‌ನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಈ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ವಿವರಿಸಿದ್ದಾರೆ.

Follow Us:
Download App:
  • android
  • ios