ಬೆಂಗಳೂರು(ಸೆ.20): ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯದ ಮೇಲೆ ಅನ್ಯಾಯವಾಗುತ್ತಲೇ ಇದೆ. ಸೆ.5ರಂದು ಕರ್ನಾಟಕ ವಿರುದ್ಧ ಬಂದ ತೀರ್ಪು ರಾಜ್ಯಕ್ಕೆ ಬೆಂಕಿ ಇಟ್ಟಿದೆ. ಸಂಕಷ್ಟದಲ್ಲಿರೋ ರಾಜ್ಯ ಸರ್ಕಾರಕ್ಕೆ ಈಗ ಮತ್ತೊಂದು ಆಘಾತ ಎದುರಾಗಿದೆ. ಇಂದು ಸುಪ್ರೀಂಕೋರ್ಟ್​ನಲ್ಲೂ ಇದರ ಬಗ್ಗೆ ವಿಚಾರಣೆ ಇದೆ. ಸುಪ್ರೀಂಕೋರ್ಟ್​​ನಲ್ಲಿ ಏನಾಗುತ್ತೋ ಗೊತ್ತಿಲ್ಲ. ಆದ್ರೆ ಸೆ.5ರಿಂದ ಇದುವರೆಗೂ ಏನೇನಾಯಿತು? ಇಲ್ಲಿದೆ ವಿವರ

ಸೆ.5 - ತಮಿಳುನಾಡಿಗೆ 13 ಟಿಎಂಸಿನೀರುಹರಿಸಲುಆದೇಶ

ಕಾವೇರಿ ನೀರು ಹರಿಸಲು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ತಮಿಳುನಾಡು ಪರ ತೀರ್ಪು ನೀಡಿದ ಕೋರ್ಟ್, ಮುಂದಿನ 10 ದಿನಗಳ ಕಾಲದಲ್ಲಿ 13.5 ಟಿಎಂಸಿ ನೀರನ್ನು ಕರ್ನಾಟಕ ತಮಿಳುನಾಡಿಗೆ ಬಿಡಬೇಕು ಎಂದು ಆದೇಶ ಕೊಟ್ಟಿತು. ಅಂದರೆ, ಪ್ರತಿದಿನ 15 ಸಾವಿರ ಕ್ಯೂಸೆಕ್ ನೀರನ್ನು ಕರ್ನಾಟಕ ಹರಿಸಬೇಕಿತ್ತು.

ಸೆ.6 - ಮಂಡ್ಯದಲ್ಲಿಭುಗಿಲೆದ್ದಆಕ್ರೋಶ

ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಕಾವೇರಿ ಸೀಮೆಯಲ್ಲಿ ರೈತರು ಉಗ್ರ ಪ್ರತಿಭಟನೆ ಆರಂಭಿಸಿದರು. 2 ದಿನಗಳ ಕಾಲ ಮಂಡ್ಯ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಯಿತು. ಮಂಡ್ಯ ರೈತರ ಸಿಟ್ಟಿಗೆ ಅಂಬಿ ಕಟೌಟ್ ಪೀಸ್ ಪೀಸ್​​ ಆಗಿತ್ತು. ಬಸ್, ಲಾರಿ​ಗಳಿಗೆ ಕಲ್ಲು ತೂರಿದರು. KRSಗೆ ಮುತ್ತಿಗೆ ಹಾಕಲು ಬಂದ ರೈತರು ಅರೆಸ್ಟ್ ಆಗಿದ್ದರು.

ಸೆ.7-ಮಂಡ್ಯದಕೃಷಿಭೂಮಿಗೂನೀರುಹರಿಸಲುನಿರ್ಧಾರ

ಸೆ.7ರಂದು ಕಾವೇರಿ ಪ್ರತಿಭಟನೆಗೆ ಮಣಿದ ರಾಜ್ಯ ಸರ್ಕಾರ ಕೃಷಿ ಭೂಮಿಗೆ ನೀರು ಒದಗಿಸುವ ಭರವಸೆ ನೀಡಿದರು. 2.92 ಲಕ್ಷ ಎಕರೆ ಬೆಳಗೆ ನೀರು ಒದಗಿಸಲು ಸಿಎಂ ಒಪ್ಪಿಗೆ ಸೂಚಿಸಿದರು.

ಸೆ.8 - ಕರ್ನಾಟಕಬಂದ್

ಇನ್ನು, ತಮಿಳುನಾಡಿಗೆ ನೀರು ಬಿಟ್ಟಿದ್ದನ್ನ ಖಂಡಿಸಿ ಸೆ.8ರಂದು ಕರ್ನಾಟಕ ಬಂದ್​ ಆಚರಿಸಲಾಯಿತು. ಕನ್ನಡ ಪರ ಸಂಘಟನೆಗಳು ಆಚರಿಸಿದ ಬಂದ್‌'ಗೆ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಸೆ.9ರಂದು- ವಿರೋಧದನಡುವೆತಮಿಳುನಾಡಿಗೆನೀರು

ಸೆ.9ರಂದು ಕಾವೇರಿ ಕೊಳ್ಳದ ರೈತರ ತೀವ್ರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸಿತ್ತು.. ಇದನ್ನ ಖಂಡಿಸಿ ರೈತರು ಕೆ ಆರ್ ಎಸ್ ಜಲಾಶಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ರು. ಈ ವೇಳೆ ಪೊಲೀಸರು ರೈತರ ಮೇಲೆ ಲಾಠಿ ಚಾರ್ಜ್ ಮಾಡಿ ಅಶ್ರುವಾಯು ಸಿಡಿಸಿದ್ರು. ಇದರಿಂದ ಸಿಟ್ಟಿಗೆದ್ದ ರೈತರಿಬ್ಬರು ಆತ್ಮಹತ್ಯೆಗೂ ಯತ್ನಿಸಿದ್ರು.

ಸೆ.12 - ಕರ್ನಾಟಕಸರ್ಕಾರಕ್ಕೆಹೆಚ್ಚುವರಿನೀರುಹರಿಸುವಶಿಕ್ಷೆ

ರಾಜ್ಯದಲ್ಲಿನ ಪ್ರತಿಭಟನೆಗಳಿಂದ ಒತ್ತಡಕ್ಕೆ ಒಳಗಾದ ರಾಜ್ಯ ಸರ್ಕಾರ, ಸೆಪ್ಟೆಂಬರ್ 05ರ ಆದೇಶ ಮಾರ್ಪಾಡು ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಕೋರಿತು. ಇರೋ ಭಾರ ಕಡಿಮೆ ಮಾಡಿ ಅಂತ ಸಲ್ಲಿಸಿದ್ದ ಅರ್ಜಿಗೆ ವ್ಯತಿರಿಕ್ತ ತೀರ್ಪು ಬಂತು. ರಾಜ್ಯದ ಅರ್ಜಿ ತಿರಸ್ಕರಿಸಿದ ದ್ವಿಸದಸ್ಯ ಪೀಠ, ಈ ಹಿಂದೆ ಹತ್ತು ದಿನಗಳ ಕಾಲ ನೀರು ಹರಿಸಿ ಎಂದಿದ್ದ ತೀರ್ಪನ್ನ ಮಾರ್ಪಡಿಸಿ, ಸೆ.20 ರವರೆಗೂ 12 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡುವಂತೆ ಆದೇಶಿಸಿತು. ಈ ಮೂಲಕ ಇನ್ನೂ 4 ದಿನ ಹೆಚ್ಚುವರಿಯಾಗಿ ನೀರು ಹರಿಸಲು ಆದೇಶ ನೀಡಿದಂತಾಯ್ತು. ಈ ಮೂಲಕ ರಾಜ್ಯ ಸರ್ಕಾರಕ್ಕೆ ಮತ್ತೆ ತೀವ್ರ ಹಿನ್ನಡೆಯಾಗಿದೆ.

ಸೆ.12 - ತಮಿಳುನಾಡಿನಲ್ಲಿಕನ್ನಡಿಗರಮೇಲೆಹಲ್ಲೆ : ಬೆಂಗಳೂರುಪ್ರಕ್ಷುಬ್ಧ- ವ್ಯಕ್ತಿಬಲಿ

ಸೆ.12ರಂದು ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೇ ನಡೆಯಿತು. ಇದರ ಬೆನ್ನಲ್ಲೇ ಬೆಂಗಳೂರಿನಲ್ಲೂ ತಮಿಳುನಾಡು ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಹಲವು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯ್ತು. ಗೋಲಿಬಾರ್‌'ನಲ್ಲಿ ಉಮೇಶ್​​ಗೌಡ ಎಂಬಾತ ಮೃತಪಟ್ಟ. ಸಂಜೆಯಿಂದಲೇ ನಿಷೇಧಾಜ್ಞೆ ಜಾರಿಯಾಯಿತು. 16 ಪ್ರದೇಶಗಳಲ್ಲೂ ಕರ್ಪ್ಯೂ ಜಾರಿಯಾಯಿತು.

ಸೆ.13 - ಕಾವೇರಿಮೇಲುಸ್ತುವಾರಿಸಮಿತಿಸಭೆ

ಕೇಂದ್ರದ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಶಶಿಶೇಖರ್‌ ನೇತೃತ್ವದಲ್ಲಿ ಕಾವೇರಿ ಮೇಲುಸ್ತುವಾರಿ ಸಮಿತಿ ನಡೆಯಿತು. ಜಲಾಶಯಗಳಲ್ಲಿ ಸಾಕಷ್ಟು ನೀರಿದ್ದರೂ ಕರ್ನಾಟಕ ನೀರು ಹರಿಸುತ್ತಿಲ್ಲ ಎಂದು ತಮಿಳುನಾಡು ಆರೋಪಿಸಿತು. ಹೀಗಾಗಿ ನೀರಿನ ಕುರಿತ ಸಮಗ್ರ ಮಾಹಿತಿ ಇರುವ ದಾಖಲೆಗಳನ್ನು ಸಲ್ಲಿಸುವಂತೆ ಕಾವೇರಿ ಕಣಿವೆ ಪ್ರದೇಶ ವ್ಯಾಪ್ತಿಯ ಎಲ್ಲ ನಾಲ್ಕೂ ರಾಜ್ಯಗಳಿಗೆ ಸೂಚಿಸಿತ್ತು.

ಸೆ.14 - ಮತ್ತೊಬ್ಬವ್ಯಕ್ತಿಸಾವು

ಬೆಂಗಳೂರು ಗಲಾಟೆ ವೇಳೆ ಮಹಡಿಯಿಂದ ಬಿದ್ದು ಗಾಯಗೊಂಡಿದ್ದ ಕುಮಾರ್ ಎಂಬಾತ ಮೃತಪಟ್ಟ.

ಸೆ.19- ಮೇಲುಸ್ತುವಾರಿಸಮಿತಿಯಿಂದಮತ್ತೆಅನ್ಯಾಯ

ಸೆ.21 ತಿಂದ ತಮಿಳುನಾಡಿಗೆ 10 ದಿನಗಳ ಕಾಲ 3 ಸಾವಿರ ಕ್ಯೂಸೆಕ್‌ ನೀರು ಬಿಡಲು ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಆದೇಶ ನೀಡಿದೆ.

ಒಟ್ಟಿನಲ್ಲಿ ರಾಜ್ಯಕ್ಕೆ ಸೆ.5ರಿಂದ ಬರೀ ಅನ್ಯಾಯದ್ದೇ ಸುದ್ದಿ ಬಂದೆರಗುತ್ತಿದೆ. ಇಂದು ಸುಪ್ರೀಂಕೋರ್ಟ್​ನಲ್ಲಿ ಕಾವೇರಿ ನೀರು ಹಂಚಿಕೆ ಬಗ್ಗೆ ಮತ್ತೆ ವಿಚಾರಣೆ ನಡೆಯಲಿದೆ. ಸುಪ್ರೀಂಕೋರ್ಟ್​ ಮತ್ತೆ ಏನು ಹೇಳುತ್ತೋ ಎನ್ನುವ ಆತಂಕ ರಾಜ್ಯದ ಸರ್ಕಾರಕ್ಕೆ ಇದೆ. ಈಗಲಾದ್ರೂ ನ್ಯಾಯ ಸಿಗುತ್ತದಾ ಎಂದು ಕಾದು ಕುಳಿತಿದೆ.