ಕಬಿನಿಯ ಹಿನ್ನೀರಿನಲ್ಲಿ ಹುಲಿಯ ಮೃತದೇಹ ಪತ್ತೆಯಾಗಿದ್ದು  ವಿದ್ಯುತ್ ತಗುಲಿ ಮೃತಪಟ್ಟಿದೆ ಎಂದು ಮರಣೊತ್ತರ ಪರೀಕ್ಷೆಯಿಂದ ತಿಳಿದುಬಂದಿದೆ.

ಎಚ್.ಡಿ. ಕೋಟೆ/ಹುಣಸೂರು: ಆಹಾರವನ್ನರಸಿ ಬಂದ ಹುಲಿಯೊಂದು ವಿದ್ಯುತ್ ತಗುಲಿ ಮೃತಪಟ್ಟಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಅಂತರ ಸಂತೆ ವಲಯದಲ್ಲಿ ನಡೆದಿದೆ. ಅಂತರಸಂತೆ ವಲಯದ ಎನ್. ಬೆಳ್ತೂರು ಬಳಿ ಘಟನೆ ಬುಧವಾರ ಮಧ್ಯಾಹ್ನ 11 ರ ಸಮಯದಲ್ಲಿ ಬೆಳ್ತೂರು ಗ್ರಾಮದ ಸಮೀಪದ ಕೆರೆ ನೀರಿನಲ್ಲಿ 3 ರಿಂದ 4 ವರ್ಷದ ಹೆಣ್ಣುಹುಲಿಯ ಶವ ಪತ್ತೆಯಾಗಿದೆ. 

Add Asianetnews Kannada as a Preferred SourcegooglePreferred

ಕಳೆದೆರಡು ದಿನಗಳಿಂದ ಈ ಭಾಗದಲ್ಲಿ ಹುಲಿಯೊಂದು ಅಡ್ಡಾಡುತ್ತಿದೆ ಎಂಬ ಮಾಹಿತಿ ಇಲಾಖೆಗೆ ಇತ್ತು. ಈ ನಿಟ್ಟಿನಲ್ಲಿ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸಿದ್ದರು. ಆದರೆ ಬುಧವಾರ ಹುಲಿಯ ಶವ ಪತ್ತೆಯಾಗಿದೆ. ಹುಲಿ ವಿದ್ಯುತ್ ತಗುಲಿ ಮೃತಪಟ್ಟಿದೆ ಎಂದು ಮರಣೋತ್ತರ
ಪರೀಕ್ಷೆಯಿಂದ ಗೊತ್ತಾಗಿದೆ. 

ಈ ಭಾಗದಲ್ಲಿರುವ ಯಾವುದೋ ತೋಟದ ಬಳಿ ನುಗ್ಗಿದಾಗ ವಿದ್ಯುತ್ ತಂತಿ ತಗುಲಿ ಸತ್ತಿರಬಹುದೆಂದು ಶಂಕಿಸಲಾಗುತ್ತಿದೆ. ಅವಘಡ ಎಲ್ಲಿ ನಡೆದಿದೆ ಎನ್ನುವುದು ತನಿಖೆಯಿಂದ ತಿಳಿದುಬರಬೇಕಿದೆ. ಸ್ಥಳಕ್ಕೆ ಸಿಎಫ್ ಆರ್. ರವಿಶಂಕರ್, ಎಸಿಎಫ್ ಪೌಲ್ ಆಂಟೋನಿ, ಆರ್‌ಎಫ್‌ಒ ವಿನಯ್ ಭೇಟಿ ನೀಡಿದ್ದರು. ಪಶುವೈದ್ಯ ಡಾ. ಮುಜೀಬ್ ರೆಹಮಾನ್ ಮರಣೋತ್ತರ ಪರೀಕ್ಷೆ ನಡೆಸಿದರು.