'ಹುಷಾರ್....! ನನ್ನ ಕ್ಷೇತ್ರದಲ್ಲಿ ಜಾತಿ ವಿಚಾರ ಎತ್ತಿದ್ರೆ ಸುಮ್ನಿರಲ್ಲ'
ಯಾವತ್ತೂ ತಮ್ಮ ಹೇಳಿಕೆಗಳಿಂದಲೇ ಸೌಂಡ್ ಮಾಡುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತೊಮ್ಮೆ ಜಾತಿ ವಿಚಾರವಾಗಿ ನೀಡಿರುವ ಹೇಳಿಕೆಯಿಂದ ಚರ್ಚೆಯಲ್ಲಿದ್ದಾರೆ.
ನವದೆಹಲಿ[ಫೆ.11]: ಕೇಂದ್ರ ಹೆದ್ದಾರಿ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ತಮ್ಮ ಹೇಳಿಕೆಗಳಿಂದ ಸದ್ದು ಮಾಡುತ್ತಿದ್ದಾರೆ. ಇದೀಗ ಎಚ್ಚರಿಕೆಯೊಂದನ್ನು ನೀಡಿರುವ ನಿತಿನ್ ಗಡ್ಕರಿ ತಾನು ಜಾತಿವಾದವನ್ನು ವಿರೋಧಿಸುತ್ತೇನೆ ಎಂಬ ಖಡಕ್ ಸಂದೇಶ ರವಾನಿಸಿದ್ದಾರೆ. ಅಲ್ಲದೇ ಸಮಾಜವನ್ನು ಆರ್ಥಿಕ ಹಾಗೂ ಸಾಮಾಜಿಕ ಸಮಾನತೆಯ ಆಧಾರದ ಮೇಲೆ ಒಂದು ಮಾಡಬೇಕು ಎಂದಿದ್ದಾರೆ.
ಪಿಂಪಡೀ ಚಿಂಚ್ವಾಡಾದಲ್ಲಿ ಮಾತನಾಡಿದ ಗಡ್ಕರಿ ತನ್ನ ಕ್ಷೇತ್ರದ ಮಂದಿ ಹಾಗೂ ಜಾತಿ ವಿಚಾರವಾಗಿ ಕಚ್ಚಾಡುವವರೆಲ್ಲರಿಗೂ ಎಚ್ಚರಿಕೆ ನೀಡಿರುವ ನೀಡಿದ್ದಾರೆ. ''ನಾನು ಜಾತಿವಾದದಲ್ಲಿ ನಂಬಿಕೆ ಇಡುವುದಿಲ್ಲ. ಇಲ್ಲಿ ಪರಿಸ್ಥಿತಿ ಹೇಗಿದೆ ಎಂದು ನನಗೆ ತಿಳಿದಿಲ್ಲ. ಆದರೆ ನ್ಮಮ 5 ಜಿಲ್ಲೆಗಳಲ್ಲಿ ಜಾತಿವಾದಕ್ಕೆ ಯಾವುದೇ ಮಹತ್ವವಿಲ್ಲ, ಅಂತಹ ಪ್ರಕರಣಗಳಿಗೆ ಆಸ್ಪದವೂ ನೀಡುವುದಿಲ್ಲ. ನಾನು ಈಗಾಗಲೇ ಜಾತಿವಾದದಲ್ಲಿ ತೊಡಗುವವರಿಗೆ ತಕ್ಕ ಶಿಕ್ಷೆ ನೀಡುತ್ತೇನೆಂದು ಎಚ್ಚರಿಕೆ ನೀಡಿದ್ದೇನೆ. ಹೀಗಾಗಿ ಅಲ್ಲಿ ಎಲ್ಲವೂ ಶಾಂತವಾಗಿದೆ" ಎಂದಿದ್ದಾರೆ.
ಇತ್ತೀಚೆಗಷ್ಟೇ ನಿತಿನ್ ಗಡ್ಕರಿಯವರು ತಮ್ಮ ಹೇಳಿಕೆಗಳಿಂದ ವಿವಾದಕ್ಕೀಡಾಗಿದ್ದರು. ಅವರು ತಮ್ಮದೇ ಪಕ್ಷದ ನಾಯಕರ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆಂಬ ವಿಚಾರವೂ ಸದ್ದು ಮಾಡಿತ್ತು. ಸಾಲದೆಮಬಂತೆ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರೂ ಗಡ್ಕರಿಯವರನ್ನು ಪ್ರಶಂಸಿಸಿದ್ದರು.