ದುಡಿಯೋ ಕೈಗಳ ಕೆಲಸಕ್ಕೆ ಅಲ್ಲಿ ಕೊಕ್ಕೆ ಬಿದ್ದಿದೆ. ಬಡಜನರಿಗೆ ಉದ್ಯೋಗ ಕೊಡಬೇಕಿದ್ದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಉದ್ಯೋಗಕ್ಕೆ ಕತ್ರಿ  ಹಾಕಿದೆ. ಕೋಟ್ಯಾಂತರ ಹಣ ಗುಳುಂ ಮಾಡೋ ಮೂಲಕ ಬಡಜನರಿಗೆ ಸೇರಬೇಕಾದ ಹಣವನ್ನು ನುಂಗಣ್ಣರು ನುಂಗಿ, ನೀರು ಕುಡಿದಿದ್ದಾರೆ ಅನ್ನೋದು ಸ್ಥಳೀಯರ ಆರೋಪ.

ಗದಗ(ಮಾ.23): ದುಡಿಯೋ ಕೈಗಳ ಕೆಲಸಕ್ಕೆ ಅಲ್ಲಿ ಕೊಕ್ಕೆ ಬಿದ್ದಿದೆ. ಬಡಜನರಿಗೆ ಉದ್ಯೋಗ ಕೊಡಬೇಕಿದ್ದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಉದ್ಯೋಗಕ್ಕೆ ಕತ್ರಿ ಹಾಕಿದೆ. ಕೋಟ್ಯಾಂತರ ಹಣ ಗುಳುಂ ಮಾಡೋ ಮೂಲಕ ಬಡಜನರಿಗೆ ಸೇರಬೇಕಾದ ಹಣವನ್ನು ನುಂಗಣ್ಣರು ನುಂಗಿ, ನೀರು ಕುಡಿದಿದ್ದಾರೆ ಅನ್ನೋದು ಸ್ಥಳೀಯರ ಆರೋಪ.

Add Asianetnews Kannada as a Preferred SourcegooglePreferred

ಗದಗ ಜಿಲ್ಲೆಯ ರೋಣ ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ಸತ್ತವರು ಬದುಕಿದ್ದಾರೆ. ಬಾಲಕರು ವಯಸ್ಕರಾಗಿದ್ದಾರಂತೆ. ಹೌದು ಇದು ಯಾವುದೇ ಅಂತೆ, ಕಂತೆಗಳ ಕಟ್ಟು ಕಥೆಯಲ್ಲ. ಬದಲಾಗಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಣ ನುಂಗಲು ನುಂಗಬಾಕರು ಸೃಷ್ಟಿಸಿದ ಕುತಂತ್ರ.

ಮಲ್ಲಾಪೂರ ಗ್ರಾಮ ಪಂಚಾಯತಿಯಲ್ಲಿ ನಡೆದಿರೋ ಎನ್.ಆರ್.ಎ.ಜಿ ಯೋಜನೆಯ ಅಕ್ರಮ. ಗ್ರಾಮದ ತಿಮ್ಮರಡ್ಡಿ ಕೆರೆ ಅಭಿವೃದ್ಧಿ ಹೆಸರಲ್ಲಿ 30 ಲಕ್ಷ, ಸರ್ಕಾರಿ ಹಾಗೂ ಖಾಸಗಿ ನೌಕರರ ಹೆಸರಲ್ಲೂ ಲಕ್ಷಾಂತರ ಹಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ, ಮೃತಪಟ್ಟು ವರ್ಷಗಟ್ಟಲೆ ಕಳೆದವರ ಹೆಸರಲ್ಲೂ ಲಕ್ಷಾಂತರ ಹಣ ಕೂಲಿ ಪಾವತಿಸಿರುವುದು ಬೆಳಕಿಗೆ ಬಂದಿದೆ. ಪಿಡಿಓ ಫಕ್ರುದ್ದೀನ್ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷ ದೊಡ್ಡನಗೌಡ್ ಹಾಗೂ ಆಡಳಿತ ಮಂಡಳಿ ಶಾಮೀಲಾಗಿ 5 ಕೋಟಿಗೂ ಅಧಿಕ ಹಣ ನುಂಗಿದ್ದಾರೆ ಅನ್ನೋದು ಸ್ಥಳೀಯರ ಆರೋಪ.

ಮೇಲ್ನೋಟಕ್ಕೆ 5 ಕೋಟಿಗೂ ಅಧಿಕ ಹಣದ ಅವ್ಯವಹಾರ ನಡೆದಿದೆ ಅನ್ನೋ ಆರೋಪವನ್ನು ಸ್ವತ: ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೇ ಒಪ್ಪಿಕೊಳ್ತಾರೆ. ನನ್ನಿಂದ ತಪ್ಪಾಗಿದೆ. ಈ ಬಗ್ಗೆ ಸರ್ಕಾರ ಏನೇ ಕ್ರಮ ತೆಗೆದುಕೊಂಡರೂ ನಾನೂ ಬದ್ಧವಾಗಿತ್ತೇನೆ ಎನ್ನುತ್ತಾರೆ ಪಿಡಿಓ.

ಇಂತಹ ಅಧಿಕಾರಿಗಳ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಂಡಾಗ ಮಾತ್ರ ಸರ್ಕಾರದ ಯೋಜನೆ ಪ್ರಾಮಾಣಿಕ ಫಲಾನುಭವಿಗಳಿಗೆ ದೊರೆಯಲು ಸಾಧ್ಯ.