ಆಂಧ್ರ ಭವನದಲ್ಲಿ ತೃತೀಯ ರಂಗದ ನಾಯಕರ ಸಭೆಕುಮಾರಸ್ವಾಮಿ, ಪಿಣರಾಯಿ, ಚಂದ್ರಬಾಬು, ಮಮತಾ ಸಭೆಮುಂದಿನ ರಾಜಕೀಯ ನಡೆ ಕುರಿತು ಮಾತುಕತೆ?
ನವದೆಹಲಿ(ಜೂ.16): ನಾಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನೀತಿ ಆಯೋಗದ ಸಭೆ ನಡೆಯಲಿದ್ದು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ರಾಷ್ಟ್ರ ರಾಜಧಾನಿ ನವದೆಹಲಿಗೆ ಬಂದಿಳಿದಿದ್ದಾರೆ. ಈ ಮಧ್ಯೆ ತೃತೀಯ ರಂಗದ ನಾಯಕರೆಲ್ಲಾ ಆಂಧ್ರ ಪ್ರದೇಶ ಭವನದಲ್ಲಿ ಸಭೆ ಸೇರಿರುವುದು ಭಾರೀ ಕುತೂಹಲ ಮೂಡಿಸಿದೆ.
ತೃತೀಯ ರಂಗದ ನಾಯಕರಾದ ಕರ್ನಾಟಕ ಸಿಎಂ ಕುಮಾರಸ್ವಾಮಿ, ಕೇರಳ ಸಿಎಂ ಪಿಣರಾಯಿ ವಿಜಯನ್, ಆಂದ್ರ ಸಿಎಂ ಚಂದ್ರಬಾಬು ನಾಯ್ಡು, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ನಾಯಕರು ನವದೆಹಲಿಯಲ್ಲಿರುವ ಆಂಧ್ರ ಪ್ರದೇಶ ಭವನದಲ್ಲಿ ಸಭೆ ಸೇರಿ ಮಾತುಕತೆ ನಡೆಸಿದರು.
ಸದ್ಯ ಮಾತುಕತೆಯ ವಿವರ ಬಹಿರಂಗವಾಗಿಲ್ಲವಾದರೂ, ಮುಂದಿನ ರಾಜಕೀಯ ನಡೆ ಕುರಿತು ಈ ಎಲ್ಲ ನಾಯಕರು ಮಾತುಕತ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಾಳಿನ ನೀತಿ ಆಯೋಗದ ಸಭೆಯಲ್ಲಿ ಎಲ್ಲ ರಾಜ್ಯಗಳೂ ತಮ್ಮ ಬೇಡಿಕೆಗಳನ್ನು ಮಂಡಿಸಲಿದ್ದು, ಕೇಂದ್ರ ಸರ್ಕಾರ ಈ ಬೇಡಿಕೆಗಳಿಗೆ ಹೇಗೆ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ ನಾಳಿನ ಸಭೆಗೂ ಮೊದಲೇ ತೃತೀಯ ರಂಗದ ನಾಯಕರೆಲ್ಲಾ ಒಂದೆಡೆ ಸೇರಿರುವುದು ಭಾರೀ ಮಹತ್ವ ಪಡೆದುಕೊಂಡಿದೆ.
