ವ್ಯವಹಾರದಲ್ಲಿ ಉಂಟಾದ ನಷ್ಟವನ್ನು ಭರಿಸಿಕೊಳ್ಳಲು ಮನೆಗಳ್ಳತನಕ್ಕೆ ಇಳಿದ ವ್ಯಕ್ತಿಯೋರ್ವನನ್ನು ಗಿಇನಗರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು : ಬೇಕರಿ ಹಾಗೂ ಟ್ರಾವೆಲ್ಸ್ ಏಜೆನ್ಸಿಯಲ್ಲಿ ಉಂಟಾದ ನಷ್ಟದ ಭರಿಸಿಕೊಳ್ಳಲು ಮನೆಗಳ್ಳತನ ಕೃತ್ಯಕ್ಕಿಳಿದಿದ್ದ ವ್ಯಕ್ತಿಯೊಬ್ಬನನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮತ್ತಿಕೆರೆ ಸಮೀಪದ ಮುತ್ಯಾಲನಗರದ ನಿವಾಸಿ ಪ್ರಕಾಶ್ ಅಲಿಯಾಸ್ ಜಂಗ್ಲಿ ಬಂಧಿತನಾಗಿದ್ದು, ಆರೋಪಿಯಿಂದ 18 ಲಕ್ಷ ಮೌಲ್ಯದ 620 ಗ್ರಾಂ ಚಿನ್ನಾಭರಣ ಹಾಗೂ ಬೈಕ್ ವಶಪಡಿಸಿ ಕೊಳ್ಳಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚಿಗೆ ಗಿರಿನಗರದಲ್ಲಿ ಖಾಸಗಿ ಕಂಪನಿ ಉದ್ಯೋಗಿ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಘಟನಾ ಸ್ಥಳದಲ್ಲಿ ಪತ್ತೆಯಾದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸುಳಿವು ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕಾರು ಚಾಲಕ ಜಂಗ್ಲಿ ಕತೆ: ಪ್ರಕಾಶ್ ವೃತ್ತಿಪರ ಕಳ್ಳನಾಗಿದ್ದು, ಮೂರು ವರ್ಷಗಳಿಂದ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಹಗಲು ಹೊತ್ತಿನಲ್ಲಿ ಬೀಗ ಹಾಕಿದ ಮನೆಗಳನ್ನು ಗುರುತಿಸುತ್ತಿದ್ದ ಆರೋಪಿ, ಬಳಿ ಮನೆಗಳ ಬೀಗ ಮುರಿದು ಕೈಗೆ ಸಿಕ್ಕಿದ್ದನ್ನು ದೋಚುತ್ತಿದ್ದ. ಕೆಲ ದಿನಗಳ ಹಿಂದೆ ಗಿರಿನಗರ ದಲ್ಲಿ ಮನೆಗಳ್ಳತನ ಕೃತ್ಯ ಎಸಗಿ ಪರಾರಿಯಾಗುವಾಗ ಆ ದೃಶ್ಯವು ಸಮೀಪದ ಕಟ್ಟಡದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆದರೆ ಮುಖಚಹರೆ ಸ್ಪಷ್ಟವಾಗಿರಲಿಲ್ಲ. ಆಗ ತಮ್ಮ ಸಂಗ್ರಹದಲ್ಲಿದ್ದ ಹಳೇ ಆರೋಪಿ ಮಹೇಶ್ ಎಂಬುವವನ ಫೋಟೋ ಪೊಲೀಸರ ಬಳಿಯಿತ್ತು. 

ಆತನನ್ನು ಈ ಬಗ್ಗೆ ವಿಚಾರಿಸಿದಾಗ ನಾನು ಮನೆಗಳ್ಳತನ ಮಾಡಲಿಲ್ಲ ಎಂದಿದ್ದ. ಕೊನೆಗೆ ಸಿಸಿಟಿವಿ ದೃಶ್ಯ ಮಹೇಶ್‌ಗೆ ತೋರಿಸಿದಾಗ ಇದು ಪ್ರಕಾಶ್ ಎಂಬಾತನಿರಬಹುದು ಎಂದು ಶಂಕಿಸಿದ್ದ. ಈ ಮಾಹಿತಿ ಆಧರಿಸಿ ಪ್ರಕಾಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಗಿರಿನಗರ ಠಾಣೆ ವ್ಯಾಪ್ತಿ ನಡೆದಿದ್ದ 8 ಮನೆಗಳ್ಳತನ ಪ್ರಕರಣಗಳು ಪತ್ತೆಯಾಗಿವೆ. 

ಮೊದಲು ಕಾರು ಚಾಲಕನಾಗಿದ್ದ ಪ್ರಕಾಶ್, ಸಾಲ ಮಾಡಿ 2 ಕಾರು ಖರೀದಿಸಿ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ. ಅದರಲ್ಲಿ ನಷ್ಟ ಉಂಟಾದ ಪರಿಣಾಮ ಕಾರು ಮಾರಾಟ ಮಾಡಿದ ಆತ, ಕೆಲ ದಿನಗಳು ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ನಂತರ ಬೇಕರಿ ಆರಂಭಿಸಿಅದರಲ್ಲೂ ಕೈ ಸುಟ್ಟುಗೊಂಡ. ಹೀಗೆ ಸಾಲು ಸಾಲು ಆರ್ಥಿಕ ನಷ್ಟದಿಂದ ಸಂಕಷ್ಟಕ್ಕೆ ತುತ್ತಾದ ಪ್ರಕಾಶ್, ಸುಲಭವಾಗಿ ಹಣ ಸಂಪಾದನೆಗೆ ಅಡ್ಡ ಮಾರ್ಗ ತುಳಿದಿದ್ದ. ನಗರದಲ್ಲೆಡೆ ಆತನ ಅಲೆದಾಟ ನೋಡಿ ಗೆಳೆಯರು ಜಂಗ್ಲಿ ಅಂತಾ ಅಡ್ಡ ಹೆಸರಿಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.