500 ದಿನ ವಾಸ, ಆಹಾರ ಕ್ರಮ ಬದಲಿಸಿ ತ್ರಿಪುರ ಗೆದ್ದುಕೊಟ್ಟ ದೇವಧರ್
ತ್ರಿಪುರದಲ್ಲಿ ಬಿಜೆಪಿ ಗೆಲುವಿನ ರೂವಾರಿಗಳಲ್ಲಿ ಸುನಿಲ್ ದೇವಧರ್ ಕೂಡ ಒಬ್ಬರು. ಮೂಲತಃ ಮಹಾರಾಷ್ಟ್ರದ ದೇವಧರ್ ದವರಾದ ಸುನಿಲ್ ದೇವಧರ್ 500 ದಿನಗಳ ಕಾಲ ಅಗರ್ತಲಾದಲ್ಲೇ ನೆಲೆಯೂರಿದ್ದರು.
ಅಗರ್ತಲಾ: ತ್ರಿಪುರದಲ್ಲಿ ಬಿಜೆಪಿ ಗೆಲುವಿನ ರೂವಾರಿಗಳಲ್ಲಿ ಸುನಿಲ್ ದೇವಧರ್ ಕೂಡ ಒಬ್ಬರು. ಮೂಲತಃ ಮಹಾರಾಷ್ಟ್ರದ ದೇವಧರ್ ದವರಾದ ಸುನಿಲ್ ದೇವಧರ್ 500 ದಿನಗಳ ಕಾಲ ಅಗರ್ತಲಾದಲ್ಲೇ ನೆಲೆಯೂರಿದ್ದರು.
ಅಲ್ಲದೇ ಸ್ಥಳೀಯ ಭಾಷೆಯನ್ನು ಕಲಿತು, ಇಲ್ಲಿನ ಆಹಾರ ಪದ್ಧತಿಗೆ ತಮ್ಮನ್ನು ಒಗ್ಗಿಸಿಕೊಂಡಿದ್ದರು. 2005ರಲ್ಲಿ ಬಿಜೆಪಿಗೆ ಸೇರ್ಪಡೆಯಾದ ದೇವಧರ್, ವಲಸೆ ಮಕ್ಕಳ ಪುನರ್ವಸತಿಗಾಗಿ ಕಾರ್ಯನಿರ್ವಹಿಸುತ್ತಿರುವ ಎನ್ಜಿಒ ‘ಮೈ ಹೋಮ್ ಇಂಡಿಯಾ’ದ ಮೂಲಕ ಜನರನ್ನು ತಲುಪಿದ್ದಾರೆ.
ದೇವಧರ್ ಅವರನ್ನು ತ್ರಿಪುರ ಉಸ್ತುವಾರಿಯಾಗಿ ನೇಮಿಸಿದಾಗ ಬಿಜೆಪಿ ಗೆಲುವು ಅಸಾಧ್ಯವೆಂದೇ ಹೇಳಲಾಗುತ್ತಿತ್ತು. ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 50 ಬಿಜೆಪಿ ಅಭ್ಯರ್ಥಿಗಳ ಪೈಕಿ ಒಬ್ಬನನ್ನು ಹೊರತುಪಡಿಸಿ ಉಳಿದವರೆಲ್ಲಾ ಠೇವಣಿ ಕಳೆದುಕೊಂಡಿದ್ದರು.
ತಿಂಗಳಿನಲ್ಲಿ 15 ದಿನ ತ್ರಿಪುರಾದಲ್ಲಿ ಕಳೆಯುತ್ತಿದ್ದ ದೇವಧರ್ ಕೋಕ್ಬೊರೊಕ್ ಭಾಷೆಯನ್ನು ಕಲಿತು ಸ್ಥಳೀಯರ ವಿಶ್ವಾಸ ಗಳಿಸಿದ್ದರು. ಅಲ್ಲದೇ ತ್ರಿಪುರಕ್ಕೆ ಕೇಂದ್ರ ಸಚಿವರು ಆಗಾಗ ಭೇಟಿ ನೀಡುವಂತೆ ನೋಡಿಕೊಂಡಿದ್ದರು.
ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಕೂಡ ತ್ರಿಪುರಕ್ಕೆ ಭೇಟಿ ನೀಡುವ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದರು. ಇದರ ಫಲವಾಗಿ ಬಿಜೆಪಿಗೆ ಗೆಲುವ ತಂದುಕೊಡುವಲ್ಲಿ ದೇವಧರ್ ಯಶಸ್ವಿಯಾಗಿದ್ದಾರೆ.