ಪಾಕ್’ನಲ್ಲೀಗ ಉಗ್ರರಿಗೂ ತಟ್ಟಿತು ಆಡಿಟ್ ಬಿಸಿಬಿಸಿ..!
ಕಳೆದ ಒಂದೂವರೆ ವರ್ಷದಿಂದ ಜಮ್ಮು-ಕಾಶ್ಮೀರ ಮತ್ತು ಗಡಿರೇಖೆಗಳಲ್ಲಿ ಉಗ್ರರನ್ನು ಭಾರತೀಯ ಸೇನೆ ಸದೆಬಡಿಯುತ್ತಿರುವ ಹಿನ್ನೆಲೆಯಲ್ಲಿ, ಉತ್ತಮ ಸಾಧನೆ ತೋರದ ಉಗ್ರ ಕಮಾಂಡರ್ ಗಳನ್ನು ಬದಲಾಯಿಸಲಾಗುತ್ತಿದೆ.
ಇಸ್ಲಾಮಾಬಾದ್(ಆ.16): ಸಾಮಾನ್ಯವಾಗಿ ಕಾರ್ಪೊರೇಟ್ ವಲಯದಲ್ಲಿ ತಮ್ಮ ಸಿಬ್ಬಂದಿಯ ‘ಸಾಧನೆಯ ವರದಿ’ ಸಿದ್ಧಪಡಿಸಲಾಗುತ್ತದೆ. ಆದರೆ, ಇದೀಗ ಭಾರತ-ಪಾಕಿಸ್ತಾನ ಗಡಿ ರೇಖೆ ಬಳಿ ಕಾರ್ಯ ನಿರ್ವಹಿಸುವ ಉಗ್ರ ಸಂಘಟನೆಗಳೂ ತಮ್ಮ ಕಾರ್ಯಕರ್ತರ ‘ಸಾಧನೆಯ ವರದಿ’ ಸಿದ್ಧಪಡಿಸುತ್ತಿದ್ದು, ಸರಿಯಾಗಿ ಕಾರ್ಯ ನಿರ್ವಹಿಸದವರನ್ನು ನಿರ್ದಾಕ್ಷಿಣ್ಯವಾಗಿ ಬದಲಾಯಿಸುತ್ತಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಗುಪ್ತಚರ ವರದಿಯಲ್ಲಿ ಮಾಹಿತಿ ಲಭ್ಯವಾಗಿದೆ. ಕಳೆದ ಒಂದೂವರೆ ವರ್ಷದಿಂದ ಜಮ್ಮು-ಕಾಶ್ಮೀರ ಮತ್ತು ಗಡಿರೇಖೆಗಳಲ್ಲಿ ಉಗ್ರರನ್ನು ಭಾರತೀಯ ಸೇನೆ ಸದೆಬಡಿಯುತ್ತಿರುವ ಹಿನ್ನೆಲೆಯಲ್ಲಿ, ಉತ್ತಮ ಸಾಧನೆ ತೋರದ ಉಗ್ರ ಕಮಾಂಡರ್ ಗಳನ್ನು ಬದಲಾಯಿಸಲಾಗುತ್ತಿದೆ.
ಗಡಿರೇಖೆಯುದ್ದಕ್ಕೂ ಇರುವ ಲಷ್ಕರೆ ತೊಯ್ಬಾ ಮತ್ತು ಜೈಷೆ ಮೊಹಮ್ಮದ್ ಉಗ್ರ ಸಂಘಟನೆಗಳ 30 ಕಾರ್ಯಾಚರಣಾ ನೆಲೆಗಳಲ್ಲಿ ಬಹುತೇಕ ನೆಲೆಗಳ ಮುಖ್ಯಸ್ಥರನ್ನು ಮೂರು ತಿಂಗಳಿಗೊಮ್ಮೆ ಬದಲಾಯಿಸಲಾಗಿದೆ.