ಬಿಜೆಪಿ ಶಾಸಕಿ ಭೇಟಿ : ಗಂಗಾ ಜಲ ಹಾಕಿ ದೇವಾಲಯ ಶುದ್ಧಿ
ಬಿಜೆಪಿ ಶಾಸಕಿಯೋರ್ವಳು ದೇವಾಲಯಕ್ಕೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಗಂಗಾ ಜಲ ಹಾಕಿ ಶುದ್ಧ ಮಾಡಿದ ಘಟನೆಯೊಂದು ನಡೆದಿದೆ.
ಲಕ್ನೋ : ಉತ್ತರ ಪ್ರದೇಶದ ದೇವಾಲಯವೊಂದರಲ್ಲಿ ಮಹಿಳಾ ಎಂಎಲ್ ಎ ಪ್ರವೇಶಿಸಿದ್ದಕ್ಕೆ ಗಂಗಾ ಜಲವನ್ನು ಹಾಕಿ ಶುದ್ಧ ಮಾಡಿದ ಘಟನೆಯೊಂದು ನಡೆದಿದೆ.
ಇಲ್ಲಿನ ಹಮೀರ್ ಪುರ್ ಪ್ರದೇಶದಲ್ಲಿ ಧರ್ಮ್ ರಿಶಿ ದೇವಾಲಯಕ್ಕೆ ಬಿಜೆಪಿ ಶಾಸಕಿ ಅನುರಾಗಿ ಭೇಟಿ ನೀಡಿದ್ದರಿಂದ ದೇವಾಲಯ ಅಪವಿತ್ರವಾಗಿದೆ ಎಂದು ಶುದ್ಧ ಮಾಡಲಾಗಿದೆ. ಈ ದೇವಾಲಯಕ್ಕೆ ಮಹಿಳಾ ಪ್ರವೇಶವನ್ನು ನಿಷೇಧಿಸಲಾಗಿದ್ದು ಈ ನಿಟ್ಟಿನಲ್ಲಿ ಈ ರೀತಿ ಮಾಡಲಾಗಿದೆ.
ಕಳೆದ ಜುಲೈ 12 ರಂದು ರಥೋತ್ಸವದ ವೇಳೆ ಈ ಮಹಿಳೆ ದೇವಾಲಯವನ್ನು ಪ್ರವೇಶ ಮಾಡಿದ್ದರು. ಶಾಲಾ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ದೇವಾಲಯಕ್ಕೂ ತೆರಳಿ ಪ್ರಾರ್ಥನೆ ಸಲ್ಲಿಸಿದ್ದರು.
ದೇವಾಲಯಕ್ಕೆ ಮಹಿಳೆ ಪ್ರವೇಶ ಮಾಡಿದ್ದರಿಂದ ಸ್ಥಳೀಯರು ಸೇರಿ ಗಂಗಾ ಜಲ ಹಾಕಿ ಶುದ್ಧ ಮಾಡಿದ್ದಾರೆ. ಅಲ್ಲದೇ ಆಕೆಗೆ ದೇವಾಲಯಕ್ಕೆ ಹೇಗೆ ಪ್ರವೇಶ ನೀಡಲಾಯಿತು ಎನ್ನುವುದನ್ನು ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಇದೀಗ ಶಾಸಕಿ ಅನುರಾಗಿ ಪ್ರತಿಕ್ರಿಯೆ ನೀಡಿದ್ದು ಈ ಘಟನೆಯಿಂದ ತಮಗೆ ಅತ್ಯಂತ ನೋವಾಗಿದೆ ಎಂದು ಹೇಳಿದ್ದಾರೆ.