ಮೋದಿ ಹತ್ಯೆ ಸಂಚು: ವರವರ ರಾವ್ ಮತ್ತೆ ವಶಕ್ಕೆ
ಐವರು ಎಡಪಂಥೀಯ ಮುಖಂಡರು ಹಾಗೂ ಇತರರ ವಿರುದ್ಧ ಪುಣೆ ಪೊಲೀಸರು ಸೆಷನ್ಸ್ ಕೋರ್ಟ್’ನಲ್ಲಿ ಗುರುವಾರವಷ್ಟ್ಟೇ ಆರೋಪಪಟ್ಟಿ ಸಲ್ಲಿಸಿದ್ದಾರೆ. ಈ ಆರೋಪ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ನಡೆದಿದ್ದು ನಿಜ ಎಂದು ಉಲ್ಲೇಖಿಸಲಾಗಿತ್ತು.
ಪುಣೆ[ನ.18]: ಭೀಮಾ ಕೋರೆಗಾಂವ್ ಹಿಂಸಾಚಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪ ಸಂಬಂಧ ಗೃಹ ಬಂಧನದಲ್ಲಿರುವ ಕ್ರಾಂತಿಕಾರಿ ಕವಿ ವರ ವರ ರಾವ್ ಅವರನ್ನು ಪುಣೆ ಪೊಲೀಸರು ಶನಿವಾರ ತಮ್ಮ ವಶಕ್ಕೆ ಪಡೆದಿದ್ದಾರೆ.
ಗೃಹ ಬಂಧನ ವಿಸ್ತರಣೆ ಅವಧಿ ಶನಿವಾರ ಮುಕ್ತಾಯಗೊಂಡಿದ್ದು ಹಾಗೂ ಹೈದರಾಬಾದ್ ಹೈಕೋರ್ಟ್ನಲ್ಲಿ ಸಲ್ಲಿಕೆಯಾದ ಅರ್ಜಿ ವಜಾಗೊಂಡ ಬೆನ್ನಲ್ಲೇ ಪುಣೆ ಪೊಲೀಸರು ಗಾಂಧಿನಗರದಲ್ಲಿರುವ ಅವರ ನಿವಾಸದಲ್ಲಿ ವರ ವರ ರಾವ್ ಅವರನ್ನು ವಶಕ್ಕೆ ಪಡೆದಿದ್ದು, ಪುಣೆ ಕೋರ್ಟ್ ಮುಂದೆ ಹಾಜರುಪಡಿಸುವ ನಿರೀಕ್ಷೆ ಇದೆ. ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿತ ಐವರು ಎಡಪಂಥೀಯ ಮುಖಂಡರು ಹಾಗೂ ಇತರರ ವಿರುದ್ಧ ಪುಣೆ ಪೊಲೀಸರು ಸೆಷನ್ಸ್ ಕೋರ್ಟ್’ನಲ್ಲಿ ಗುರುವಾರವಷ್ಟ್ಟೇ ಆರೋಪಪಟ್ಟಿ ಸಲ್ಲಿಸಿದ್ದಾರೆ. ಈ ಆರೋಪ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ನಡೆದಿದ್ದು ನಿಜ ಎಂದು ಉಲ್ಲೇಖಿಸಲಾಗಿತ್ತು.
ಆಗಸ್ಟ್’ನಲ್ಲಿ ವರ ವರರಾವ್, ಫೆರೀರಾ ಸೇರಿದಂತೆ ಐವರು ಎಡಪಂಥೀಯ ಕಾರ್ಯಕರ್ತರ ಮನೆಯ ಮೇಲೆ ದಾಳಿ ನಡೆಸಿದ್ದ ಪೊಲೀಸರು ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದಿದ್ದರು. ಬಳಿಕ ಅವರನ್ನು ಗೃಹ ಬಂಧನದಲ್ಲಿ ಇಡಲಾಗಿತ್ತು. ಡಿ.31ರಂದು ನಡೆದ ಭೀಮಾ ಕೋರೆಗಾಂವ್ ಪ್ರಕರಣದ ತನಿಖೆಯ ವೇಳೆ ಈ ಐವರು ಮೋದಿ ಹತ್ಯೆ ಸಂಚು ರೂಪಿಸಿದ್ದು ಬೆಳಕಿಗೆ ಬಂದಿತ್ತು.