ನಗದು ಬಿಕ್ಕಟ್ಟು ಎದುರಿಸುತ್ತಿರುವ ಸಂದರ್ಭದಲ್ಲೇ ಮುಖ್ಯಮಂತ್ರಿ 9 ಎಕರೆ ಪ್ರದೇಶದಲ್ಲಿ ಅಧಿಕೃತ ನಿವಾಸ ನಿರ್ಮಾಣಕ್ಕೆ ಕೋಟ್ಯಂತರ ರುಪಾಯಿ ಬಳಕೆ ಮಾಡಿರುವ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗುರಿಯಾಗಿದೆ.

ತೆಲಂಗಾಣ(ನ.24): ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಬೇಗಂಪೇಟೆಯಲ್ಲಿ ಸುಮಾರು 50 ಕೋಟಿ ರುಪಾಯಿ ವೆಚ್ಚದಲ್ಲಿ ವಾಸ್ತು ಪ್ರಕಾರವಾಗಿ ನಿರ್ಮಾಣವಾಗಿರುವ ನೂತನ ಅಧಿಕೃತ ನಿವಾಸ (ಪ್ರಗತಿ ಭವನ)ಕ್ಕೆ ಗೃಹ ಪ್ರವೇಶ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಶ್ರೀ ತ್ರದಂಡಿ ಶ್ರೀಮಾನ್ ನಾರಾಯಣ ರಾಮಾನುಜ ಚಿನ್ನ ಜೀಯರ್ ಸ್ವಾಮೀಜಿ ನೇತೃತ್ವದಲ್ಲಿ ವೇದ ಮಂತ್ರಗಳ ಘೋಷಣೆಯೊಂದಿಗೆ ಪೂಜಾ ವಿಧಿವಿಧಾನಗಳ ಬಳಿಕ ಬೆಳ್ಳಂಬೆಳಗ್ಗೆ 5.30ಕ್ಕೆ ಸಿಎಂ ಚಂದ್ರಶೇಖರ್ ರಾವ್ ಮತ್ತು ಅವರ ಪತ್ನಿ ಗೃಹ ಪ್ರವೇಶ ಮಾಡಿದರು.

ನಗದು ಬಿಕ್ಕಟ್ಟು ಎದುರಿಸುತ್ತಿರುವ ಸಂದರ್ಭದಲ್ಲೇ ಮುಖ್ಯಮಂತ್ರಿ 9 ಎಕರೆ ಪ್ರದೇಶದಲ್ಲಿ ಅಧಿಕೃತ ನಿವಾಸ ನಿರ್ಮಾಣಕ್ಕೆ ಕೋಟ್ಯಂತರ ರುಪಾಯಿ ಬಳಕೆ ಮಾಡಿರುವ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗುರಿಯಾಗಿದೆ. ಅಲ್ಲದೆ, ಇಡೀ ರಾಷ್ಟ್ರದಲ್ಲೆ ಸಿಎಂ ಚಂದ್ರಶೇಖರ್ ರಾವ್ ತಮ್ಮ ನಿವಾಸ ನಿರ್ಮಾಣಕ್ಕಾಗಿ ಅತಿಹೆಚ್ಚು ವೆಚ್ಚ ಮಾಡಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಸರಳವಾಗಿ ಆಯೋಜಿಸಲಾದ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಪತ್ನಿ ಶೋಭಾ ರಾವ್, ಪುತ್ರ ಕೆ ಟಿ ರಾಮರಾವ್, ಕ್ಯಾಬಿನೆಟ್ ಸಚಿವರು ಸೇರಿದಂತೆ ಕೆಲವೇ ಕೆಲವು ವ್ಯಕ್ತಿಗಳು ಭಾಗಿಯಾಗಿದ್ದರು.

ಪವಿತ್ರ ಗ್ರಂಥಗಳಲ್ಲಿ ಉಲ್ಲೇಖಿಸಿರುವಂತೆ ಸಿಎಂ ಚಂದ್ರಶೇಖರ್ ಮತ್ತು ಅವರ ಪತ್ನಿ ದೈವ ಪ್ರವೇಶ, ಯತಿ ಪ್ರವೇಶ, ಗೋ ಪ್ರವೇಶದ ಬಳಿಕ ಗೃಹ ಪ್ರವೇಶ ಮಾಡಿದರು. ರಾಜ್ಯಪಾಲ ಇಸಿಎಲ್ ನರಸಿಂಹನ್, ಅವರ ಪತ್ನಿ ವಿಮಲಾ ನರಸಿಂಹನ್, ಕೆಸಿಆರ್ ಪುತ್ರಿ ಕೆ ಕವಿತಾ, ಅಳಿಯ ಮತ್ತು ಸಚಿವ ಹರೀಶ್ ರಾವ್ ಮತ್ತು ಹಿರಿಯ ಅಧಿಕಾರಿಗಳು ಸೇರಿದಂತೆ ಇತರರು ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.