ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಅಸ್ವಸ್ಥ
ರಾಜಕೀಯ ಮುತ್ಸದ್ಧಿ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಆರೋಗ್ಯ ಬಿಗಡಾಯಿಸಿದ್ದು, ಅವರ ನಿವಾಸದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಆಗಲೇ ಸಾಮಾಜಿಕ ಜಾಲತಾಣದಲ್ಲಿ ಅವರು ನಿಧನರಾಗಿದ್ದಾರೆಂಬ ಸುದ್ದಿ ಹರಿದಾಡುತ್ತಿದ್ದು, ಅವರ ಆರೋಗ್ಯ ಗಂಭೀರವಾಗಿಲ್ಲವೆಂದು ಕುಟುಂಬದ ಮೂಲಗಳು ಸ್ಪಷ್ಟಪಡಿಸಿದೆ.
ಚೆನ್ನೈ: ಡಿಎಂಕೆ ನಾಯಕ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಆರೋಗ್ಯ ಬಿಗಾಡಿಯಿಸಿದ್ದು, ಜ್ವರ ಹಾಗೂ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದಾರೆನ್ನಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಅವರು ಮೃತಪಟ್ಟಿರುವುದಾಗಿ ಸುದ್ದಿ ಹರಿದಾಡುತ್ತಿದ್ದು, ಇಲ್ಲ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಲ್ಲವೆಂದು ಕುಟುಂಬದ ಮೂಲಗಳು ಸ್ಪಷ್ಟಪಡಿಸಿವೆ.
ಗುರುವಾರ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು, ಕೂಡಲೇ ಗೋಪಾಲಪುರಂ ನಿವಾಸದಲ್ಲಿ ಚಿಕಿತ್ಸೆಯನ್ನು ಆರಂಭಿಸಲಾಗಿದೆ.
ಕರುಣಾನಿಧಿ ಆರೋಗ್ಯ ಹದಗೆಟ್ಟಿರುವ ಸುದ್ದಿ ಹಬ್ಬುತ್ತಿದ್ದಂತೆ, ರಾಜಕೀಯ ನಾಯಕರು, ಅಭಿಮಾನಿಗಳು ಕರುಣಾನಿಧಿ ನಿವಾಸಕ್ಕೆ ಧಾವಿಸಿದ್ದಾರೆ.
ಡಿಎಂಕೆಯ ಬದ್ಡ ರಾಜಕೀಯ ವೈರಿಯೂ,ತಮಿಳುನಾಡು ಮುಖ್ಯಮಂತ್ರಿಯೂ ಆಗಿರುವ ಒ. ಪನ್ನೀರ್ ಸೆಲ್ವಂ ಮೂವರು ಸಚಿವರೊಂದಿಗೆ ಕರುಣಾನಿಧಿ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಕರುಣಾನಿಧಿ ಪುತ್ರ, ತ.ನಾ. ವಿಪಕ್ಷ ನಾಯಕ ಎಂ.ಕೆ.ಸ್ಟಾಲಿನ್ ಜೊತೆ ಮಾತುಕತೆ ನಡೆಸಿದ ಪನ್ನೀರ್ ಸೆಲ್ವಂ ಕರುಣಾನಿಧಿಯವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಾವೇರಿ ಅಸ್ಪತ್ರೆಯ ತಜ್ಞ ವೈದ್ಯರ ತಂಡ ಕರುಣಾನಿಧಿಯವರಿಗೆ ಚಿಕಿತ್ಸೆ ನೀಡುತ್ತಿದ್ದು, ಅವರು ಮೂತ್ರನಾಳದ ಸೋಂಕು ಹಾಗೂ ಜ್ವರದಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ. ಕರುಣಾನಿಧಿಯವರಿಗೆ ಅವರ ನಿವಾಸದಲ್ಲೇ ತಜ್ಞ ವೈದ್ಯರ ತಂಡವು ಆಸ್ಪತ್ರೆ ಮಟ್ಟದ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಆಸ್ಪತ್ರೆಯ ಪ್ರಕಟಣೆಯೂ ಸ್ಪಷ್ಟಪಡಿಸಿದೆ.
ಖ್ಯಾತ ನಟ, ರಾಜಕಾರಣಿ ಕಮಲ್ ಹಾಸನ್ ಕೂಡಾ ಕರುಣಾನಿಧಿ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.