Asianet Suvarna News Asianet Suvarna News

ತಲೈವಾಸ್’ಗೆ ಜಯತಂದ ಅಜಯ್ ಆಟ

ಪಂದ್ಯದ ಕೊನೆಯ ಕ್ಷಣದಲ್ಲಿ ಪವಾಡಗಳು ಬೇಕಾದರೂ ಸಂಭವಿಸಬಹುದು ಎನ್ನುವುದಕ್ಕೆ ತಮಿಳ್ ತಲೈವಾಸ್ ಹಾಗೂ ಬೆಂಗಾಲ್ ವಾರಿಯರ್ಸ್ ನಡುವಿನ ಪಂದ್ಯವೇ ಸಾಕ್ಷಿ. ನಾಯಕ ಅಜಯ್ ಠಾಕೂರ್ ಅವರ ಕಡೆ ನಿಮಿಷದ ಮಿಂಚಿನ ದಾಳಿಯ ನೆರವಿನಿಂದ ತಮಿಳ್ ತಲೈವಾಸ್’ಗೆ ರೋಚಕ ಗೆಲುವು ತಂದಿತ್ತರು.

Talaivas Won the Pro kabaddi

ನವದೆಹಲಿ(ಸೆ.24): ಪಂದ್ಯದ ಕೊನೆಯ ಕ್ಷಣದಲ್ಲಿ ಪವಾಡಗಳು ಬೇಕಾದರೂ ಸಂಭವಿಸಬಹುದು ಎನ್ನುವುದಕ್ಕೆ ತಮಿಳ್ ತಲೈವಾಸ್ ಹಾಗೂ ಬೆಂಗಾಲ್ ವಾರಿಯರ್ಸ್ ನಡುವಿನ ಪಂದ್ಯವೇ ಸಾಕ್ಷಿ. ನಾಯಕ ಅಜಯ್ ಠಾಕೂರ್ ಅವರ ಕಡೆ ನಿಮಿಷದ ಮಿಂಚಿನ ದಾಳಿಯ ನೆರವಿನಿಂದ ತಮಿಳ್ ತಲೈವಾಸ್’ಗೆ ರೋಚಕ ಗೆಲುವು ತಂದಿತ್ತರು.
ಇಲ್ಲಿನ ತ್ಯಾಗರಾಜ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ತಮಿಳ್ ತಲೈವಾಸ್ ಹಾಗೂ ಬೆಂಗಾಲ್ ವಾರಿಯರ್ಸ್ ಮುಖಾಮುಖಿಯಾಗಿದ್ದವು. ಮೊದಲಾರ್ಧದ 11ನೇ ನಿಮಿಷದಲ್ಲಿ 8-8 ಅಂಕಗಳ ಸಮಬಲ ಸಾಧಿಸಿದ್ದವು. 13ನೇ ನಿಮಿಷದಲ್ಲಿ ಬೆಂಗಾಲ್ ವಾರಿಯರ್ಸ್ ಪಡೆಯನ್ನು ಆಲೌಟ್ ಮಾಡಿದ ತಮಿಳ್ ತಲೈವಾಸ್ ಅಂಕವನ್ನು 13-9ಕ್ಕೆ  ಹೆಚ್ಚಿಸಿಕೊಂಡಿತು. ಆದರೆ ಆ ಬಳಿಕ ದೀಪಕ್ ನರ್ವಾಲ್ ಮಾಡಿದ ಸೂಪರ್ ರೈಡ್’ನಿಂದಾಗಿ 3 ಅಂಕ ಕಲೆಹಾಕಿದರು. ಈ ವೇಳೆ ಆಲೌಟ್ ಆಗುವ ಭೀತಿಯಲ್ಲಿದ್ದ ಅಜಯ್ ಠಾಕೂರ್ ಪಡೆ ವಾರಿಯರ್ಸ್’ಗೆ ತಿರುಗೇಟು ನೀಡಿತು. ಇದರ ಬೆನ್ನಲ್ಲೇ ತಲೈವಾಸ್ ಪರ ವರಣ್ ಸೂಪರ್ ಟ್ಯಾಕಲ್ ಮಾಡುವಲ್ಲಿ ಯಶಸ್ವಿಯಾದರು. ಮೊದಲಾರ್ಧ ಮುಕ್ತಾಯದ ವೇಳೆಗೆ ತಮಿಳ್ ತಲೈವಾಸ್ 18-15ರ ಮುನ್ನಡೆ ಕಾಯ್ದುಕೊಂಡಿತ್ತು.
ದ್ವಿತಿಯಾರ್ಧದ ಆರಂಭದಲ್ಲಿ ಅಜಯ್ ಠಾಕೂರ್ ಅವರನ್ನು ಟ್ಯಾಕಲ್ ಮಾಡುವ ವಾರಿಯರ್ಸ್ ಮುನ್ನಡೆ ಸಾಧಿಸುವ ಮುನ್ಸೂಚನೆ ನೀಡಿತಾದರೂ ಎರಡನೇ ಅವಧಿಯಲ್ಲಿ ಎರಡು ಬಾರಿ ಸೂಪರ್ ಟ್ಯಾಕಲ್ ಮಾಡಿದ ಅರುಣ್ ಮತ್ತೆ ಎರಡು ಬಾರಿ ತಮಿಳ್ ತಲೈವಾಸ್ ತಂಡವು ಆಲೌಟ್ ಆಗುವುದರಿಂದ ಬಚಾವ್ ಮಾಡಿದರು. ದ್ವಿತಿಯಾರ್ಧದ 10ನೇ ನಿಮಿಷದಲ್ಲಿ ಚೆನ್ನೈ 24-20ಅಂಕಗಳ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ಮುಕ್ತಾಯಕ್ಕೆ ಕೊನೆಯ ಎಂಟು
ನಿಮಿಷಗಳಿದ್ದಾಗ ತಲೈವಾಸ್ ತಂಡವನ್ನು ಆಲೌಟ್ ಮಾಡಿದ ಬೆಂಗಾಲ್ ವಾರಿಯರ್ಸ್ ಪಂದ್ಯದಲ್ಲಿ ಮೊದಲ ಬಾರಿಗೆ ಮುನ್ನಡೆ ಸಾಧಿಸಿತು. ಈ ವೇಳೆ ವಾರಿಯರ್ಸ್ 26-24 ಅಂಕಗಳ ಮುನ್ನಡೆ ಸಾಧಿಸಿತು. ಆರಂಭದಿಂದಲೂ ಹಿನ್ನಡೆ ಅನುಭವಿಸಿದ್ದ ವಾರಿಯರ್ಸ್ ಅಂತಿಮ ಕ್ಷಣದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಲು ಯತ್ನಿಸಿತು. ಪಂದ್ಯ ಮುಕ್ತಾಯಕ್ಕೆ ಕೊನೆಯ ಎರಡು ನಿಮಿಷಗಳಿದ್ದಾಗ ವಾರಿಯರ್ಸ್ 30-29 ಅಂಕಗಳ ಮುನ್ನಡೆ ಸಾಧಿಸಿತು. ಪಂದ್ಯದ ಕೊನೆ ನಿಮಿಷದಲ್ಲೂ ವಾರಿಯರ್ಸ್ 32-31 ಅಂಕಗಳೊಂದಿಗೆ ಒ0ದು ಅಂಕಗಳ ಮುನ್ನಡೆ ಕಾಯ್ದುಕೊಂಡಿತ್ತು. ಈ ವೇಳೆ ಪಂದ್ಯ ಮುಕ್ತಾಯಕ್ಕೆ ಕೊನೆಯ 5 ಸೆಕೆಂಡ್’ಗಳಿದ್ದಾಗ ಮಿಂಚಿನ ದಾಳಿ ನಡೆಸುವ ಮೂಲಕ ಸೂಪರ್ ರೈಡ್ ನಡೆಸಿದ ನಾಯಕ ಅಜಯ್ ಠಾಕೂರ್ ತಲೈವಾಸ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೊದಲು ಸೋನೆಪತ್ ಚರಣದಲ್ಲೂ ಯು.ಪಿ ಯೋಧಾ ವಿರುದ್ಧ ಅಜಯ್ ಠಾಕೂರ್ ಕಡೇ ಕ್ಷಣದಲ್ಲಿ ಇದೇ ರೀತಿಯ ಗೆಲುವನ್ನು ತಂದುಕೊಟ್ಟಿದ್ದರು.

ಟರ್ನಿಂಗ್ ಪಾಯಿಂಟ್:
ಪಂದ್ಯದ ಕೊನೆಯ ರೈಡ್’ನಲ್ಲಿ ಅಜಯ್ ಠಾಕೂರ್ ಮಾಡಿದ ಸೂಪರ್ ರೈಡ್
ಪಂದ್ಯದ ಫಲಿತಾಂಶವನ್ನೇ ಬದಲಿಸಿತು. ಕೊನೆ ನಿಮಿಷದಲ್ಲಿ ಒಂದು ಅಂಕ
ಮುನ್ನಡೆ ಸಾಧಿಸಿದ್ದ ವಾರಿಯರ್ಸ್ ರಕ್ಷಣಾತ್ಮಕ ಆಟಕ್ಕೆ ಮುಂದಾಗಿದ್ದು
ತಲೈವಾಸ್’ಗೆ ವರದಾನವಾಯಿತು.
ಶ್ರೇಷ್ಠ ರೈಡರ್: ಮಣೀಂದರ್(13 ಅಂಕ)
ಶ್ರೇಷ್ಠ ಡಿಫೆಂಡರ್: ಅರುಣ್(8 ಅಂಕ)

ವರದಿ: ನವೀನ್ ಕೊಡಸೆ

 

Follow Us:
Download App:
  • android
  • ios