ಕೊನೆಗೂ ಭಾರತಕ್ಕೆ ಬಂದ ಕಾರವಾರ ಮಹಿಳೆ: ವಂಚನೆಗೊಳಗಾಗಿದ್ದ ಪೂರ್ಣಿಮಾ ಬಾಂದೇಕರ್ ವಾಪಸ್
ಕಾರವಾರ(ಸೆ.27): ಸೌದಿ ಅರೇಬಿಯಾಕ್ಕೆ ಬ್ಯೂಟಿ ಪಾರ್ಲರ್ ಕೆಲಸಕ್ಕೆ ಎಂದು ತೆರಳಿದ ಕಾರವಾರ ಮೂಲದ ಪೂರ್ಣಿಮಾ ಬಾಂದೇಕರ್ ಎಂಬ ಮಹಿಳೆಗೆ ಅಲ್ಲಿನ ಮಾಲೀಕರು ಮನೆಗೆಲಸ ಮತ್ತು ಶೌಚಾಲಯ ಸ್ವಚ್ಛತೆಗೆ ಬಳಸಿಕೊಂಡಿದ್ದರು. ದುಬೈನಲ್ಲಿದ್ದ ಪೂರ್ಣಿಮಾ ರಾಜೇಂದ್ರ ಬಾಂದೇಕರ್ ಉತ್ತರಕನ್ನಡ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ರಿಗೆ ವ್ಯಾಟ್ಸ್ಯಾಪ್ಗೆ ತನ್ನ ನೋವಿನ ಸಂದೇಶ ಕಳುಹಿಸಿ, ತನ್ನನ್ನು ವಾಪಾಸ್ ಕಾರವಾರಕ್ಕೆ ಕರೆಯಿಸಿಕೊಳ್ಳುವಂತೆ ಮೊರೆಯಿಟ್ಟಿದ್ದಳು. ಈ ಬಗ್ಗೆ ಸುವರ್ಣನ್ಯೂಸ್ ವಿಸ್ತೃತ ವರದಿ ಪ್ರಸಾರ ಮಾಡಿತ್ತು.ಈಕೆಯ ನೋವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ನಕುಲ್ ಪೂರ್ಣಿಮಾ ಬಾಂದೇಕರ್ ಮರಳುವಂತೆ ವ್ಯವಸ್ಥೆ ಕಲ್ಪಿಸಿದ್ದಾರೆ.
ಜಿಲ್ಲಾಧಿಕಾರಿ ನಕುಲ್, ದೆಹಲಿಯ ಕರ್ನಾಟಕ ಭವನದ ಡೆಪ್ಯೂಟಿ ಕಮೀಷನರ್ ಅನೀಸ್ ಜಾಯ್ರ ಪ್ರಯತ್ನದ ಫಲವಾಗಿ ಪೂರ್ಣಿಮಾ ಇವತ್ತು ಮುಂಬೈ ತಲುಪಲಿದ್ದಾಳೆ.
ಕಾರವಾರದ ಶಿರವಾಡ ಗಾಂವ್ಕರ್ ವಾಡಾದ ನಿವಾಸಿಯಾಗಿರುವ ಪೂರ್ಣಿಮಾ ದುಡಿಯುವ ಇಚ್ಛೆಯಿಂದ ದುಬೈಗೆ ಮುಂಬೈನ ಏಜೆಂಟ್ ಸಮೀರ್ ಎಂಬಾತನ ಮೂಲಕ ವೀಸಾ ಪಡೆದು ತೆರಳಿದ್ದರು. ಆದ್ರೆ ಈಕೆಯನ್ನು ದುಬೈಗೆ ಕಳುಹಿಸಿದ ಏಜೆಂಟ್ ಬ್ಯೂಟಿ ಪಾರ್ಲರ್ ಕೆಲಸ ಬಿಟ್ಟು ಶೌಚಾಲಯ ತೊಳೆಯುವ ಕೆಲಸ ನೀಡಿದ್ದ. ಇದ್ರಿಂದ ಮಾನಸಿಕವಾಗಿ ನೊಂದ ಪೂರ್ಣಿಮಾ ಡಿ.ಸಿ.ಗೆ ವ್ಯಾಟ್ಸ್ಯಾಪ್ನಲ್ಲಿ ವಿಡಿಯೋ ಕಳುಹಿಸಿದ್ದಳು. ಇದರಿಂದ ಎಚ್ಚೆತ್ತ ಜಿಲ್ಲಾಧಿಕಾರಿ ನಕುಲ್ ಮಹಿಳೆಯನ್ನು ತಾಯ್ನಾಡಿಗೆ ಮರಳುವಂತೆ ವ್ಯವಸ್ಥೆ ಮಾಡಿದ್ದಾರೆ.