ಮಹಿಳಾ ಜಡ್ಜ್’ಗೆ ಮಹಿಳೆಯರ ಕೇಸ್’ಗೆ ಅವಕಾಶವಿಲ್ಲ
ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಣೆ ನಡೆಸಬೇಕಾದ ಸಾಂವಿಧಾನಿಕ ಪೀಠಗಳಿಂದ ಏಕೈಕ ಮಹಿಳಾ ನ್ಯಾಯಮೂರ್ತಿ ಆರ್. ಭಾನುಮತಿ ಅವರನ್ನು ಸುಪ್ರೀಂ ಕೋರ್ಟ್ ಹೊರಗಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.
ನವದೆಹಲಿ(ಜ.15): ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಣೆ ನಡೆಸಬೇಕಾದ ಸಾಂವಿಧಾನಿಕ ಪೀಠಗಳಿಂದ ಏಕೈಕ ಮಹಿಳಾ ನ್ಯಾಯಮೂರ್ತಿ ಆರ್. ಭಾನುಮತಿ ಅವರನ್ನು ಸುಪ್ರೀಂ ಕೋರ್ಟ್ ಹೊರಗಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.
ಮಹತ್ವದ ಪ್ರಕರಣಗಳನ್ನು ಸರಿಯಾಗಿ ಹಂಚಿಕೆ ಮಾಡುತ್ತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ನಾಲ್ವರು ನ್ಯಾಯಮೂರ್ತಿಗಳು ಬಂಡಾಯದ ಬಾವುಟ ಹಾರಿಸಿದ ಬೆನ್ನಲ್ಲೇ ಇಂತಹದ್ದೊಂದು ಬೆಳವಣಿಗೆ ನಡೆದಿದೆ.
ಎಂಟು ಸಾಂವಿಧಾನಿಕ ಪೀಠದಲ್ಲಿನ ಪ್ರಕರಣಗಳ ವಿಚಾರಣೆ ಜ.17ರಿಂದ ನಡೆಯಲಿದೆ ಎಂದು ಸುಪ್ರೀಂಕೋರ್ಟ್ನ ರಿಜಿಸ್ಟ್ರಿ ಪ್ರಕಟಿಸಿದೆ. ಆ ಎಂಟು ಪ್ರಕರಣಗಳಲ್ಲಿ ಋತುಚಕ್ರದಲ್ಲಿರುವ ಮಹಿಳೆಯರಿಗೆ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಪ್ರವೇಶ ಕಲ್ಪಿಸುವುದು ಹಾಗೂ ಅಕ್ರಮ ಸಂಬಂಧ ಪ್ರಕರಣಗಳಲ್ಲಿ ಮಹಿಳೆಯರನ್ನೂ ಅಪರಾಧಿ ಎಂದು ಘೋಷಿಸುವುದಕ್ಕೆ ಸಂಬಂಧಿಸಿದ ಮಹಿಳಾ ಕೇಂದ್ರಿತ ವಿಚಾರಗಳಿವೆ.
ಸುಪ್ರೀಂಕೋರ್ಟಿನಲ್ಲಿ ಏಕೈಕ ಮಹಿಳಾ ನ್ಯಾಯಮೂರ್ತಿ ಇದ್ದರೂ ಅವರನ್ನು ಮಹಿಳಾ ಕೇಂದ್ರಿತ ಪ್ರಕರಣಗಳಿಂದ ಹೊರಗಿಟ್ಟಿರುವುದು ಚರ್ಚೆಗೆ ಕಾರಣವಾಗಿದೆ. ತ್ರಿವಳಿ ತಲಾಖ್ ಹಾಗೂ ಖಾಸಗಿತನದ ಹಕ್ಕಿಗೆ ಸಂಬಂಧಿಸಿದಂತೆ ರಚನೆಯಾಗಿದ್ದ ಸಾಂವಿಧಾನಿಕ ಪೀಠಗಳಿಂದಲೂ ಭಾನುಮತಿ ಅವರನ್ನು ಹೊರಗಿಡಲಾಗಿತ್ತು ಎಂಬುದು ಗಮನಾರ್ಹ.