ಮೃತಪಟ್ಟಿದ್ದಾನೆಂದು ಕುಟುಂಬಸ್ಥರು ಅಂತ್ಯಸಂಸ್ಕಾರ ನಡೆಸಿ ವ್ಯಕ್ತಿಯೊಬ್ಬ ಮೂರು ದಿನಗಳ ನಂತರ ಜೀವಂತವಾಗಿ ಮನೆಗೆ ಮರಳಿದ್ದಾನೆ. ಈ ಅನಿರೀಕ್ಷಿತ ಘಟನೆಯಿಂದ ಕುಟುಂಬ ಮತ್ತು ಪೊಲೀಸರು ದಂಗಾಗಿದ್ದು, ಅಂತ್ಯಕ್ರಿಯೆ ನಡೆಸಿದ್ದು ಯಾರ ಶವಕ್ಕೆ ಎಂಬ ಪ್ರಶ್ನೆ ಉದ್ಭವಿಸಿದೆ.

ಮೃತಪಟ್ಟಿದ್ದಾನೆ ಎಂದು ನಂಬಿ, ಕುಟುಂಬಸ್ಥರೆಲ್ಲ ಸೇರಿ ಚಿತೆಗೆ ಬೆಂಕಿ ಹಚ್ಚಿ ಅಂತ್ಯಕ್ರಿಯೆ ಪೂರೈಸಿದ ವ್ಯಕ್ತಿಯೊಬ್ಬ, ಕೇವಲ ಮೂರೇ ದಿನಗಳಲ್ಲಿ ಜೀವಂತವಾಗಿ ಮನೆಗೆ ಹಿಂತಿರುಗಿದರೆ ಹೇಗಿರುತ್ತದೆ? ಕೇಳುವುದಕ್ಕೇ ಕಲ್ಪನೆಯಂತೆ ಅನಿಸಿದರೂ, ಇಂತಹದ್ದೊಂದು ನಂಬಲಾಗದ ಘಟನೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ಅಜಿತ್ಮಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಇಡೀ ಗ್ರಾಮವೇ ದಂಗಾಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಘಟನೆಯ ಹಿನ್ನೆಲೆ ಏನು?

ಜುಲೈ 18 ರಂದು ಉತ್ತರ ಪ್ರದೇಶದ ಭಿಖೇಪುರ್ ಗ್ರಾಮದ ಬಳಿ ಹೆದ್ದಾರಿ ಪಕ್ಕದಲ್ಲಿದ್ದ ಶಿಹಿತಲಗೊಂಡ ಹೋಟೆಲ್ ಒಂದರ ಅವಶೇಷಗಳಲ್ಲಿ ತೀವ್ರ ದುರ್ವಾಸನೆ ಬರುತ್ತಿತ್ತು. ಅಲ್ಲಿಗೆ ತೆರಳಿದ ಪೊಲೀಸರಿಗೆ ಮುಖ ನಜ್ಜುಗುಜ್ಜಾಗಿದ್ದ, ಕೊಳೆತ ಸ್ಥಿತಿಯಲ್ಲಿದ್ದ ಯುವಕನ ಶವವೊಂದು ಪತ್ತೆಯಾಗಿತ್ತು. ಮೃತನ ಮೆರೂನ್ ಶರ್ಟ್, ನೀಲಿ ಪ್ಯಾಂಟ್ ಹಾಗೂ ಮಣಿಕಟ್ಟಿನ ಬಳೆಯನ್ನು ಆಧರಿಸಿ ಯಾರಾದರೂ ಕೊಲೆ ಮಾಡಿರಬಹುದು ಎಂದು ಶಂಕಿಸಿದ ಪೊಲೀಸರು, ಶವವನ್ನು 72 ಗಂಟೆಗಳ ಕಾಲ ಶವಾಗಾರದಲ್ಲಿರಿಸಿದ್ದರು.

ತಪ್ಪು ಗುರುತಿಸುವಿಕೆಯಿಂದ ನಡೆದ ಅಂತ್ಯಕ್ರಿಯೆ!

ಸೈದ್‌ಪುರ ಗ್ರಾಮದ ನಿವಾಸಿ ದಶರಥ್ ಸಿಂಗ್ ಎಂಬುವರ ಸಹೋದರ ಕಮಲ್ ಸಿಂಗ್ ಜೂನ್ 25 ರಿಂದ ಕೌಟುಂಬಿಕ ಕಲಹದ ಕಾರಣದಿಂದ ಮನೆಯಿಂದ ಕಾಣೆಯಾಗಿದ್ದರು. ಜುಲೈ 21 ರಂದು ಶವಾಗಾರದಲ್ಲಿದ್ದ ದೇಹವನ್ನು ನೋಡಿದ ದಶರಥ್, ಬಟ್ಟೆ ಮತ್ತು ದೇಹದ ವಿನ್ಯಾಸವನ್ನು ನೋಡಿ ಅದು ತನ್ನ ಸಹೋದರ ಕಮಲ್ ಸಿಂಗ್ ಎಂದೇ ನಂಬಿದರು. ಪೊಲೀಸರು ಕಾನೂನು ಪ್ರಕ್ರಿಯೆ ಮುಗಿಸಿ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು. ಕುಟುಂಬಸ್ಥರು ಹಿಂದೂ ಧರ್ಮದ ವಿಧಿವಿಧಾನಗಳಂತೆ ಅಂತ್ಯಸಂಸ್ಕಾರವನ್ನೂ ನೆರವೇರಿಸಿದರು.

ಮೂರನೇ ದಿನಕ್ಕೇ 'ಸತ್ತ' ವ್ಯಕ್ತಿ ಪ್ರತ್ಯಕ್ಷ!

ಮನೆಯಲ್ಲಿ ಅಂತಿಮ ಕಾರ್ಯಗಳ ಭಾಗವಾಗಿ ಶುದ್ಧೀಕರಣ ಸಮಾರಂಭದ ಸಿದ್ಧತೆಗಳು ನಡೆಯುತ್ತಿದ್ದವು. ಅಷ್ಟರಲ್ಲಿ, ಸತ್ತಿದ್ದಾನೆ ಎನ್ನಲಾದ ಕಮಲ್ ಸಿಂಗ್ ಸ್ವಂತ ಕಾಲಿನ ಮೇಲೆ ನಡೆದುಕೊಂಡು ಮನೆಗೆ ಬಂದೇ ಬಿಟ್ಟರು! ಕಣ್ಣೆದುರೇ 'ಸತ್ತ' ವ್ಯಕ್ತಿ ಪ್ರತ್ಯಕ್ಷವಾದದ್ದನ್ನು ಕಂಡು ಕುಟುಂಬಸ್ಥರು ಮತ್ತು ಗ್ರಾಮಸ್ಥರು ಆಘಾತ ಮತ್ತು ಸಂತೋಷದ ನಡುವೆ ತತ್ತರಿಸಿಹೋದರು. ತಮ್ಮದೇ ತಿಥಿ ಸಿದ್ಧತೆಯನ್ನು ನೋಡಿ ಕಮಲ್ ಸಿಂಗ್ ಕೂಡ ಆಶ್ಚರ್ಯಚಕಿತರಾದರು. ನಾನು ಹರಿಯಾಣದ ಪಾಣಿಪತ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾಗ ಅಪಘಾತ ಸಂಭವಿಸಿ ಕಾಲು ಮುರಿದಿತ್ತು. ಮೊಬೈಲ್ ಕೂಡ ಇರದ ಕಾರಣ ಕುಟುಂಬ ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

ಪೋಲೀಸರಿಗೆ ಎದುರಾದ ದೊಡ್ಡ ಸವಾಲು!

ಕಮಲ್ ಸಿಂಗ್ ಜೀವಂತವಾಗಿ ಬಂದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, ಈಗ ಪೋಲೀಸರಿಗೆ ಅತಿ ದೊಡ್ಡ ಪ್ರಶ್ನೆ ಎದುರಾಗಿದೆ. ಹಾಗಾದರೆ ಕುಟುಂಬಸ್ಥರು ದಹನ ಮಾಡಿದ್ದು ಯಾರ ಮೃತದೇಹವನ್ನು? ಎನ್ನುವುದು. ಅಜಿತ್ಮಲ್ ಪೊಲೀಸ್ ಅಧಿಕಾರಿ (ಸಿಒ) ಮನೋಜ್ ಗಂಗ್ವಾರ್ ಮಾತನಾಡಿ, ಕಮಲ್ ಸಿಂಗ್ ಜೀವಂತವಾಗಿ ಹಿಂತಿರುಗಿದ್ದು ಸತ್ಯ. ಈಗ ದಹನಗೊಂಡ ಆ ಗುರುತು ಸಿಗದ ಶವ ಯಾರದ್ದು ಎಂಬುದನ್ನು ಪತ್ತೆಹಚ್ಚಲು ಮರುತನಿಖೆ ಆರಂಭಿಸಿದ್ದೇವೆ" ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ, 'ಸತ್ತವ' ಬದುಕಿ ಬಂದ ಈ ವಿಸ್ಮಯಕಾರಿ ಘಟನೆ ಔರೈಯಾದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.