ಕರ್ಕರೆ ಹುತಾತ್ಮ ಹೌದು, ಆದ್ರೆ ಸರಿ ಕೆಲ್ಸ ಮಾಡಿಲ್ಲ: ಸುಮಿತ್ರಾ ಮಹಾಜನ್!
ಹುತಾತ್ಮ ಕರ್ಕರೆ ಕುರಿತು ಸುಮಿತ್ರಾ ಮಹಾಜನ್ ಹೇಳಿದ್ದೇನು?| ಎಟಿಎಸ್ ಮುಖ್ಯಸ್ಥರಾಗಿ ಕರ್ಕರೆ ಸರಿಯಾಗಿ ಕೆಲಸ ಮಾಡಿಲ್ಲ ಎಂದ ಸುಮಿತ್ರಾ| 'ಕರ್ಕರೆ ದೇಶಕ್ಕಾಗಿ ಹುತಾತ್ಮರಾದರೂ ಪೊಲೀಸ್ ಅಧಿಕಾರಿಯಾಗಿ ಸರಿ ಕೆಲಸ ಮಾಡಿಲ್ಲ'| ಕರ್ಕರೆ ದಿಗ್ವಿಜಯ್ ಸಿಂಗ್ ಸ್ನೇಹಿತರಾಗಿದ್ದರು ಎಂದ ಮಹಾಜನ್|
ನವದೆಹಲಿ(ಏ.30): ಮುಂಬೈ ದಾಳಿಯಲ್ಲಿ ಹುತಾತ್ಮರಾಗಿದ್ದ ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಕುರಿತು ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹೇಮಂತ್ ಕರ್ಕರೆ ಹುತಾತ್ಮ ಹೌದಾದರೂ ಅವರು ಎಟಿಎಸ್ ಮುಖ್ಯಸ್ಥರಾಗಿ ಸರಿಯಾಗಿ ಕೆಲಸ ನಿರ್ವಹಿಸಿಲ್ಲ ಎಂದು ಸುಮಿತ್ರಾ ಮಹಜಾನ್ ಅಭಿಪ್ರಾಯಪಟ್ಟಿದ್ದಾರೆ.
ಎಟಿಎಸ್ ಮುಖ್ಯಸ್ಥರಾಗಿ ಮತ್ತು ಓರ್ವ ಪೊಲೀಸ್ ಅಧಿಕಾರಿಯಾಗಿ ಕರ್ಕರೆ ಮಾಲೇಂಗಾವ್ ಬಾಂಬ್ ಬ್ಲಾಸ್ಟ್ ಪ್ರಕರಣವನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಸುಮಿತ್ರಾ ಮಹಾಜನ್ ಹೇಳಿದ್ದಾರೆ.
ತಮ್ಮ ಬಳಿ ಸ್ಪಷ್ಟ ಪುರಾವೆ ಇಲ್ಲವಾದರೂ, ಭೋಪಾಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಅವರು ಕರ್ಕರೆ ತಮ್ಮ ಉತ್ತಮ ಸ್ನೇಹಿತರಾಗಿದ್ದರು ಎಂದು ಹೇಳಿದ್ದರು ಎಂದು ಸುಮಿತ್ರಾ ಹೇಳಿದ್ದಾರೆ.
ತಮ್ಮ ಶಾಪದ ಪರಿಣಾಮವಾಗಿಯೇ ಹೇಮಂತ್ ಕರ್ಕರೆ ಮುಂಬೈ ದಾಳಿಯಲ್ಲಿ ಮೃತಪಟ್ಟರು ಎಂದು, ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಮಾಲೇಂಗಾವ್ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಇತ್ತೀಚಿಗೆ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.