'ಮಾತಿನಂತೆ ಜಮೀನು ದಾನ ಮಾಡಿದ್ದೇನೆ, ಯಾವ ಷರತ್ತೂ ಹಾಕಿಲ್ಲ'
ಯೋಧ ಗುರು ಪತ್ನಿಗೆ ಸುಮಲತಾ ಅರ್ಧ ಎಕರೆ ದಾನ| ದಾಖಲೆ ಹಸ್ತಾಂತರಿಸಿದ ಅಂಬರೀಷ್ ಪತ್ನಿ| ಶೀಘ್ರದಲ್ಲೇ ನೋಂದಣಿ ಮಾಡಿಕೊಡುವೆ
ಮಂಡ್ಯ[ಮಾ.05]: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿಗೆ ಬಲಿಯಾದ ಮಂಡ್ಯ ಜಿಲ್ಲೆ ಮದ್ದೂರಿನ ಸಿಆರ್ಪಿಎಫ್ ಯೋಧ ಎಚ್. ಗುರು ಕುಟುಂಬಕ್ಕೆ ಮಾಜಿ ಸಚಿವ ದಿ. ಅಂಬರೀಷ್ ಪತ್ನಿ ಸುಮಲತಾ ಅವರು ಈ ಹಿಂದೆ ಕೊಟ್ಟಮಾತಿನಂತೆ 20 ಗುಂಟೆ ಜಮೀನು ದೇಣಿಗೆ ಕೊಟ್ಟಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸೋಮವಾರ ಹಸ್ತಾಂತರಿಸಿದ್ದಾರೆ.
ಹುತಾತ್ಮ ಯೋಧ ಗುರು ಪತ್ನಿಗೆ ಉಚಿತ ಆರೋಗ್ಯ ವಿಮೆ
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸುಮಲತಾ ಅವರು ಹುತಾತ್ಮ ಯೋಧನ ಕುಟುಂಬಕ್ಕೆ ಈ ದಾನಪತ್ರವನ್ನು ನೀಡಿದರು. ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದ ಜಮೀನು ಅಂಬರೀಷ್ ಅವರಿಗೆ ಪಿತ್ರಾರ್ಜಿತವಾಗಿ ಬಂದಿತ್ತು. ಈ ಜಮೀನನ್ನು ಅಂಬರೀಷ್ ತಮ್ಮ ಪುತ್ರ ಅಭಿಷೇಕ್ಗೆ ಪಾಲು ಮಾಡಿ ಖಾತೆ ಮಾಡಿಕೊಟ್ಟಿದ್ದರು. ಈಗ ಅದರಲ್ಲಿ 20 ಗುಂಟೆಯಷ್ಟುಜಾಗವನ್ನು ಹುತಾತ್ಮ ಯೋಧನ ಪತ್ನಿ ಹೆಸರಿಗೆ ಸುಮಲತಾ ಅವರು ದಾನಪತ್ರ ಮಾಡಿಸಿದ್ದಾರೆ.
ಯಾವ ಷರತ್ತೂ ಹಾಕಿಲ್ಲ:
ನಂತರ ಮಾತನಾಡಿದ ಸುಮಲತಾ, ನಾನು ಈ ಹಿಂದೆ ಹೇಳಿದಂತೆ ಜಮೀನು ದಾನ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಕುಟುಂಬದವರ ನಿರ್ಧಾರದಂತೆ ನೋಂದಣಿ ಮಾಡಿಕೊಡುತ್ತೇವೆ. ಅದರಲ್ಲಿ ಸ್ಮಾರಕ ಮಾಡ್ತಾರೋ, ವ್ಯವಸಾಯ ಮಾಡ್ತಾರೋ ಎನ್ನುವುದು ಅವರಿಗೆ ಬಿಟ್ಟವಿಚಾರ ಎಂದರು.
15 ಕೋಟಿ ಬಂದಿಲ್ಲ, ಕಿತ್ತಾಟವೂ ನಡೆದಿಲ್ಲ: ಯೋಧ ಗುರು ಪತ್ನಿ
ಜಮೀನಿಗೆ ಸಂಬಂಧಿಸಿ ಯಾವುದೇ ಷರತ್ತನ್ನೂ ಹಾಕಿಲ್ಲ. ಜಮೀನನ್ನು ಅವರಿಗೆ ನೀಡಿದ ಬಳಿಕ ಅದರ ಮೇಲೆ ನನಗೆ ಯಾವುದೇ ಅಧಿಕಾರವಿಲ್ಲ. ಅವರಿಗೆ ಯಾವ ರೀತಿ ಅನುಕೂಲವಾಗುತ್ತದೋ ಅದರಂತೆ ಬಳಸಿಕೊಳ್ಳಲಿ. ನೋವಿನಲ್ಲಿರುವ ಕುಟುಂಬದವರಿಗೆ ಈ ಜಮೀನನ್ನು ಇದೇ ಉದ್ದೇಶಕ್ಕೆ ಬಳಸಿಕೊಳ್ಳುವಂತೆ ಒತ್ತಡ ಹೇರುವುದಿಲ್ಲ ಎಂದು ನುಡಿದರು.