15 ಕೋಟಿ ಬಂದಿಲ್ಲ, ಕಿತ್ತಾಟವೂ ನಡೆದಿಲ್ಲ: ಯೋಧ ಗುರು ಪತ್ನಿ
15 ಕೋಟಿ, ಕುಟುಂಬದಲ್ಲಿ ಕಿತ್ತಾಟ, ಎಂಬುದೆಲ್ಲ ಸುಳ್ಳು | ಸ್ಪಷ್ಟನೆ ನೀಡಿದ ಹುತಾತ್ಮ ಯೋಧ ಗುರು ಕುಟುಂಬ | ಯೋಧನ ಪತ್ನಿಯಾಗಿ ಹಣದ ಬಗ್ಗೆ ಯೋಚಿಸಿಲ್ಲ: ಕಲಾವತಿ
ಮಂಡ್ಯ (ಮಾ. 03): ನಮ್ಮ ಕುಟುಂಬಕ್ಕೆ .15 ಕೋಟಿ ಹಣವೂ ಬಂದಿಲ್ಲ, ಹಣಕ್ಕಾಗಿ ಕುಟುಂಬದ ಯಾವ ಸದಸ್ಯರು ಕಿತ್ತಾಟವನ್ನೂ ನಡೆಸಿಲ್ಲ. ಕುಟುಂಬ ಸದಸ್ಯರೆಲ್ಲ ಚೆನ್ನಾಗಿದ್ದೇವೆ, ಮುಂದೆಯೂ ಚೆನ್ನಾಗಿರುತ್ತೇವೆ ಎಂದು ಪುಲ್ವಾಮಾದಲ್ಲಿ ಹುತಾತ್ಮ ಯೋಧ ಎಚ್.ಗುರು ಪತ್ನಿ ಕಲಾವತಿ ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಎಂಜಿನೀಯರಿಂಗ್ ಕಾಲೇಜುಗಳ ಸರ್ಕಾರಿ ಕೋಟಾ ಸೀಟು ದರ ಹೆಚ್ಚಳ
ಹುತಾತ್ಮ ಯೋಧನ ಕುಟುಂಬದಲ್ಲಿ ಹಣದ ವಿಚಾರದಲ್ಲಿ ತಿಕ್ಕಾಟ ಆರಂಭವಾಗಿದೆ ಎನ್ನುವ ಸುದ್ದಿಗಳಿಗೆ ಸಂಬಂಧಿಸಿ ಅವರು ಈ ಸ್ಪಷ್ಟನೆ ನೀಡಿದರು. ಗುರು ಅವರ ತಾಯಿ ಚಿಕ್ಕತಾಯಮ್ಮ ಜತೆಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಕಲಾವತಿ, ನಮ್ಮ ಕುಟುಂಬಕ್ಕೆ .15 ಕೋಟಿ ಬಂದಿದೆ ಎನ್ನುವುದೇ ಶುದ್ಧ ಸುಳ್ಳು. ನನ್ನ ಬ್ಯಾಂಕ್ ಖಾತೆ ಪರಿಶೀಲಿಸಿ, ಸ್ಟೇಟ್ಮೆಂಟ್ ತೆಗೆಸಿ ನೋಡಿ. ದೇಶಭಕ್ತನ ಪತ್ನಿಯಾಗಿ ನಾನು ಹಣದ ಬಗ್ಗೆ ಎಂದೂ ಯೋಚನೆ ಮಾಡಿಲ್ಲ. ಹಾಗೆ ಮಾಡುವುದರಿಂದ ಅವರಿಗೆ ಹಾಗೂ ನನ್ನ ಆತ್ಮಕ್ಕೆ ವಂಚನೆ ಮಾಡಿಕೊಂಡಂತಾಗುತ್ತದೆ ಎಂದು ಬೇಸರ ತೋಡಿಕೊಂಡರು.
‘ಅಭಿನಂದನ್’ ಹೆಸರಿನ ಸೀರೆ ಬಿಡುಗಡೆ!
ಗುರು ನನ್ನ ಸ್ವಂತ ಅತ್ತೆಯ ಮಗ. ಅತ್ತೆಯವರು ನನ್ನನ್ನು ಮಗಳಂತೆ ನೋಡಿಕೊಳ್ಳುತ್ತಿದ್ದಾರೆ. ನನ್ನ ಪತಿ ಮಾಡಬೇಕಾದ ಕನಸುಗಳನ್ನು, ನನಸು ಮಾಡುವ ದಿಕ್ಕಿನಲ್ಲಿ ನಾನು ಹಾಗೂ ನನ್ನ ಕುಟುಂಬದ ಹಿರಿಯರು-ಕಿರಿಯರು ನಡೆದುಕೊಳ್ಳುತ್ತೇವೆ. ವಿನಾಕಾರಣ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿದರು.
ಚಿಕ್ಕತಾಯಮ್ಮ ಮಾತನಾಡಿ, ನಾನು ಮಗನನ್ನು ಕಳೆದುಕೊಂಡು ನೋವಿನಲ್ಲಿದ್ದೇವೆ. ದುಡಿದು ತಿನ್ನುವುದನ್ನು ದೇವರು ಕಲಿಸಿದ್ದಾನೆ. ಊರವರ ಬಟ್ಟೆಒಗೆದು ನನ್ನ ಮಕ್ಕಳನ್ನು ಬೆಳೆಸಿದ್ದೇನೆ. ಕಂಡವರ ದುಡ್ಡು ಬೇಡ. ನಾನು ನನ್ನ ಸೊಸೆ ಚೆನ್ನಾಗಿದ್ದರೂ ಕೆಲವರು ಹುಳಿ ಹಿಂಡುತ್ತಿದ್ದಾರೆ ಎಂದು ನೋವು ತೋಡಿಕೊಂಡರು.