'ಕಾಂಗ್ರೆಸ್ನಲ್ಲಿ ಯಾರ್ಯಾರು ಉಳಿದಿದ್ದಾರೆ ನೋಡಿ ಹೇಳಿ!'
ಪಕ್ಷದಲ್ಲಿ ಯಾರಾರಯರು ಉಳಿದಿದ್ದಾರೆ ನೋಡಿ ಹೇಳಿ?| ಪಕ್ಷದ ರಾಜ್ಯ ಘಟಕಗಳಿಗೆ ಕಾಂಗ್ರೆಸ್ ಹೈಕಮಾಂಡ್ ತುರ್ತು ನಿರ್ದೇಶನ| ಮಾಜಿ ಸಂಸದರ ಪೈಕಿ ಪಕ್ಷದಲ್ಲಿ ಹಾಲಿ ಉಳಿದವರ ಪಟ್ಟಿನೀಡಲು ಸೂಚನೆ
ನವದೆಹಲಿ[ಸೆ.15]: ಕಳೆದ 2 ಲೋಕಸಭಾ ಚುನಾವಣೆಗಳಲ್ಲಿ ಹೀನಾಯ ಸೋಲಿನ ಮೂಲಕ ಭಾರೀ ಸಂಕಷ್ಟದಲ್ಲಿರುವ ಕಾಂಗ್ರೆಸ್, ಇದೀಗ ಪಕ್ಷದಲ್ಲಿ ಯಾವ್ಯಾವ ಹಿರಿ- ಕಿರಿಯ ನಾಯಕರು ಉಳಿದಿದ್ದಾರೆ ಎಂದು ಹುಡುಕಾಡುವ ಸ್ಥಿತಿ ತಲುಪಿದೆ. ಅಷ್ಟೇ ಏಕೆ ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆ ಎಂದರೆ, ನಮ್ಮ ಪಕ್ಷದಲ್ಲಿ ಇನ್ನೂ ಉಳಿದಿರುವ ಮಾಜಿ ಸಂಸದರ ಪಟ್ಟಿಯನ್ನು ತಯಾರಿಸಿ ಕೊಡಿ ಎಂದು ಅದು ರಾಜ್ಯ ಘಟಕಗಳಿಗೆ ತುರ್ತು ಸಂದೇಶವೊಂದನ್ನು ರವಾನಿಸಿದೆ.
2004, 2009, 2014ರ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಮತ್ತು 2004ರ ಬಳಿಕ ರಾಜ್ಯಸಭೆಗೆ ಆಯ್ಕೆಯಾಗಿದ್ದವರ ಪೈಕಿ ಯಾರಾರಯರು ಇನ್ನೂ ಪಕ್ಷದಲ್ಲಿ ಉಳಿದುಕೊಂಡಿದ್ದಾರೆ ಎಂದು ಬೇಗ ಹುಡುಕಿ ಮಾಹಿತಿ ನೀಡಿ ಎಲ್ಲಾ ರಾಜ್ಯ ಘಟಕಗಳಿಗೂ ದೆಹಲಿ ನಾಯಕರು ಸೂಚನೆ ರವಾನಿಸಿದ್ದಾರೆ ಎನ್ನಲಾಗಿದೆ.
ಸತತ ಸೋಲಿನ ಹಿನ್ನೆಲೆಯಲ್ಲಿ ಹಲವು ನಾಯಕರು ಬಿಜೆಪಿ ಸೇರಿದಂತೆ ಇತರೆ ಹಲವು ಪಕ್ಷಗಳನ್ನು ಸೇರಿಕೊಂಡಿದ್ದಾರೆ. ಅಂಥವರ ನಿಖರ ಪಟ್ಟಿಇದೀಗ ಪಕ್ಷದ ಹೈಕಮಾಂಡ್ ಬಳಿ ಇಲ್ಲ. ಜೊತೆಗೆ ಪಕ್ಷದಲ್ಲಿ ಇನ್ನೂ ಯಾರಾರಯರು ಉಳಿದುಕೊಂಡಿದ್ದಾರೆ ಎಂಬುದರ ಬಗ್ಗೆಯೂ ಹೈಕಮಾಂಡ್ ಬಳಿ ಮಾಹಿತಿ ಇಲ್ಲ. ಇದು ಮುಂದಿನ ದಿನಗಳಲ್ಲಿ ವಿವಿಧ ರಾಜ್ಯಗಳಲ್ಲಿ ಪಕ್ಷ ಪುನರ್ ಸಂಘಟನೆ ಯತ್ನಕ್ಕೆ ದೊಡ್ಡ ತೊಡಕಾಗಿದೆ. ಯಾರನ್ನಾದರೂ ಯಾವುದಾದರೂ ಹುದ್ದೆಗೆ ನೇಮಿಸಬೇಕೆಂದಲ್ಲಿ ಅವರು ಪಕ್ಷದಲ್ಲಿ ಇನ್ನೂ ಉಳಿದುಕೊಂಡಿರುವ ಬಗ್ಗೆಯೇ ಮಾಹಿತಿ ಇಲ್ಲದೇ ಹೋದಲ್ಲಿ ತೀವ್ರ ಮುಜುಗರ ಎದುರಿಸಬೇಕಾಗಿ ಬರುತ್ತದೆ. ಹೀಗಾಗಿ ಪಕ್ಷವನ್ನು ಹೊಸದಾಗಿ ಸಂಘಟಿಸಲು ಅಗತ್ಯವಾಗುವಂತೆ ಕೂಡಲೇ, ಪಕ್ಷದಲ್ಲಿ ಇನ್ನೂ ಉಳಿದುಕೊಂಡ ಮಾಜಿ ಸಂಸದರ ಪಟ್ಟಿರವಾನಿಸುವಂತೆ ರಾಜ್ಯ ಘಟಕಗಳಿಗೆ ಸೂಚಿಸಲಾಗಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆ ಹಿನ್ನೆಲೆ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲು ಇತ್ತೀಚೆಗೆ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ನೇತೃತ್ವದಲ್ಲಿ ಇತ್ತೀಚೆಗೆ ದಿಲ್ಲಿಯಲ್ಲಿ ಸಭೆಯೊಂದನ್ನು ಆಯೋಜಿಸಲಾಗಿತ್ತು. ಈ ಸಭೆಯ ವೇಳೆ ಪಕ್ಷದ ಸಂಘಟನಾ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು, ರಾಜ್ಯ ಘಟಕಗಳಿಂದ ಮಾಹಿತಿ ಪಡೆಯುವ ಬಗ್ಗೆ ಪ್ರಸ್ತಾಪ ಮಾಡಿದರು ಎನ್ನಲಾಗಿದೆ.