ಮಮತಾ ವಿರುದ್ಧ ಮೋದಿ ಗುಡುಗು | ಟಿಎಂಸಿ ರಾಜ್ಯಸಭೆಯಲ್ಲಿ ಪೌರತ್ವ ಮಸೂದೆ ಬೆಂಬಲಿಸಲಿ | ಸಹಸ್ರಾರು ಮಂದಿ ದೇಶದಲ್ಲಿ ಬದುಕಲು ಬಯಸುತ್ತಿದ್ದಾರೆ |  ಮಮತಾ ವಿರೋಧ ದುರುದ್ದೇಶದಿಂದ ಕೂಡಿದೆ: ಪ್ರಧಾನಿ

ಠಾಕೂರ್‌ನಗರ (ಫೆ. 03): ವಾರದ ಹಿಂದಷ್ಟೇ ಇಪ್ಪತ್ತು ಬೇರೆ ಬೇರೆ ಪಕ್ಷಗಳ ನಾಯಕರನ್ನು ಒಂದೇ ವೇದಿಕೆಯ ಮೇಲೆ ಸೇರಿಸಿ ತಮ್ಮ ಹಾಗೂ ಎನ್‌ಡಿಎ ಸರ್ಕಾರದ ವಿರುದ್ಧ ಟೀಕೆಗಳ ಸುರಿಮಳೆ ಗೈದಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಬಹಿರಂಗವಾಗಿ ಹರಿಹಾಯ್ದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಶ್ಚಿಮಬಂಗಾಳ ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ಪರಿಶಿಷ್ಟಪಂಗಡಕ್ಕೆ ಸೇರಿದ ಮಟುವಾ ಸಮುದಾಯದ ರಾರ‍ಯಲಿಯಲ್ಲಿ ಪಾಲ್ಗೊಂಡು ಪ್ರಧಾನಿ ಮೋದಿ ಮಾತನಾಡಿದರು.

‘ಸ್ವಾತಂತ್ರ್ಯಾನಂತರ ನೆರೆಯ ದೇಶಗಳಲ್ಲಿ ಜೀವನ ಸಾಗಿಸುತ್ತಿರುವ ಸಹಸ್ರಾರು ಭಾರತೀಯರು ಈಗ ದೇಶದಲ್ಲಿ ತಮ್ಮ ಬದುಕು ಕಟ್ಟಿಕೊಳ್ಳಬೇಕೆಂದು ಬಯಸುತ್ತಿದ್ದಾರೆ. ಹೀಗಾಗಿ ದೇಶಕ್ಕೆ ವಲಸೆ ಬರುತ್ತಿದ್ದಾರೆ. ಅವರೆಲ್ಲರೂ ದೇಶದ ಪ್ರಜೆ ಎನಿಸಿಕೊಳ್ಳಬೇಕೆಂದರೆ ಪೌರತ್ವ (ತಿದ್ದುಪಡಿ) ಮಸೂದೆ ಜಾರಿಗೆ ಬರಬೇಕು. ಇಂಥವರಲ್ಲಿ ಹಿಂದೂಗಳು, ಸಿಖ್ಖರು, ಜೈನರು ಹಾಗೂ ಪಾರ್ಸಿಗಳೂ ಇದ್ದಾರೆ. ಅವೆರಲ್ಲರಿಗೆ ಭಾರತ ಬಿಟ್ಟು ಬೇರೆ ದೇಶಗಳಲ್ಲಿ ವಾಸಿಸುವ ಹಕ್ಕು ಪಡೆದುಕೊಳ್ಳಲು ಅವಕಾಶವಿಲ್ಲ. ಈ ಮಸೂದೆ ಜಾರಿಯಿಂದ ದೇಶದಲ್ಲಿ ಬದಕಲು ಕನಸು ಕಾಣುತ್ತಿರುವವರೆಲ್ಲ ಪೌರತ್ವದ ಹಕ್ಕನ್ನು ಪಡೆದುಕೊಳ್ಳಲಿದ್ದಾರೆ’ ಎಂದರು.

ರಾಜ್ಯಸಭೆಯಲ್ಲಿ ಬೆಂಬಲಿಸಲಿ:

ಅಲ್ಲದೆ, ‘ಈಗಾಗಲೇ ಪೌರತ್ವ ಮಸೂದೆಗೆ ಲೋಕಸಭೆಯಲ್ಲಿ ಬೆಂಬಲ ವ್ಯಕ್ತವಾಗಿದೆ. ಆದರೆ ರಾಜ್ಯಸಭೆಯಲ್ಲಿ ಟಿಎಂಸಿ ಈ ಮಸೂದೆಯನ್ನು ಬೆಂಬಲಿಸಬೇಕು. ಪೌರತ್ವ ಬಯಸಿ, ದೇಶಕ್ಕೆ ವಾಪಸ್‌ ಬರಲು ಕನಸುಕಾಣುತ್ತಿರುವವರನ್ನು ಗೌರವಿಸುವ ಔದಾರ್ಯತೆ ತೋರಬೇಕು. ಈ ಭಾಗದಲ್ಲಿ ನಡೆಯುತ್ತಿರುವ ಹಿಂಸಾಚಾರಗಳಿಗೆ ಕಡಿವಾಣ ಬೀಳಬೇಕಿದೆ. ಈ ನಿಟ್ಟಿನಲ್ಲಿ ಟಿಎಂಸಿ ನಾಯಕರು ಯೋಚಿಸಬೇಕು’ ಎಂದು ಹೇಳಿದರು. ಈ ವಿಚಾರದಲ್ಲಿ ಮಮತಾ ನಡೆ ದುರುದ್ದೇಶದಿಂದ ಕೂಡಿದೆ ಎಂದು ಆರೋಪಿಸಿದರು.

ಬಾಂಗ್ಲಾದೇಶ, ಅಷ್ಘಾನಿಸ್ತಾನ ಸೇರಿದಂತೆ ನೆರೆ ರಾಷ್ಟ್ರಗಳಲ್ಲಿರುವ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವುದು ಪೌರತ್ವ (ತಿದ್ದುಪಡಿ) ಮಸೂದೆಯ ಉದ್ದೇಶವಾಗಿದೆ.