Asianet Suvarna News Asianet Suvarna News

ಮೇಟಿ ಕಾಂಡ; ಅಟೆಂಡರ್ ಆಗಿದ್ದ ವಿಜಯಲಕ್ಷ್ಮೀ ಆಸ್ಪತ್ರೆಯ ವೈದ್ಯಾಧಿಕಾರಿಯನ್ನೇ ಹೆದರಿಸುವ ಮಟ್ಟಕ್ಕೆ ಬೆಳೆದದ್ದು ಹೇಗೆ?

ಗುತ್ತಿಗೆ ನೌಕರಳಾದ ವಿಜಯಲಕ್ಷ್ಮೀಯವರು ಈ ಮಟ್ಟಕ್ಕೆ ಬೆಳೆಯಲು ಹೆಚ್.ವೈ.ಮೇಟಿ ಕಾರಣರೇ?

story of growth of vijayalakshmi from being attender at ayush hospital

ಬೆಂಗಳೂರು(ಡಿ. 17): ಮಾಜಿ ಅಬಕಾರಿ ಸಚಿವ ಹೆಚ್.ವೈ.ಮೇಟಿಯವರು ತಮ್ಮನ್ನು ಲೈಂಗಿಕವಾಗಿ ದುರುಪಯೋಗಿಸಿಕೊಂಡರು ಎಂದು ಆರೋಪಿಸಿದ್ದ ವಿಜಯಲಕ್ಷ್ಮೀ ಸರೂರ ಅವರ ಬಗ್ಗೆ ಕೆಲ ಮಹತ್ವದ ವಿಚಾರಗಳು ಬಹಿರಂಗವಾಗುತ್ತಿವೆ. ಬಾಗಲಕೋಟೆಯ ಜಿಲ್ಲಾ ಸರಕಾರೀ ಆಯುರ್ವೇದ ಆಸ್ಪತ್ರೆಯಲ್ಲಿ ಖಾಲಿ ಅಟೆಂಡರ್ ಆಗಿದ್ದ ವಿಜಯಲಕ್ಷ್ಮೀ ಈಗ್ಗೆ ಕೆಲ ತಿಂಗಳಿನಿಂದ ಇಡೀ ಆಸ್ಪತ್ರೆಯ ಸಿಬ್ಬಂದಿಯ ಮೇಲೆ ಸವಾರಿ ಮಾಡುವಷ್ಟು ’ಪವರ್’ ಗಳಿಸಿಕೊಂಡಿದ್ದರೆಂಬ ಮಾತು ಕೇಳಿಬರುತ್ತಿದೆ. ಮೇಲಧಿಕಾರಿಗಳು, ವೈದ್ಯರು, ಅಷ್ಟೇ ಅಲ್ಲ ಕೊನೆಗೆ ವೈದ್ಯಾಧಿಕಾರಿಗಳೂ ಕೂಡ ವಿಜಯಲಕ್ಷ್ಮೀಗೆ ಹೆದರುತ್ತಿದ್ದರೆನ್ನಲಾಗಿದೆ. ಗುತ್ತಿಗೆ ನೌಕರಳಾದ ವಿಜಯಲಕ್ಷ್ಮೀಯವರು ಈ ಮಟ್ಟಕ್ಕೆ ಬೆಳೆಯಲು ಹೆಚ್.ವೈ.ಮೇಟಿ ಕಾರಣರೇ?

ಮೇಟಿ ಸಂಪರ್ಕ ಹೇಗೆ?
ಬೆನ್ನುನೋವಿನಿಂದ ಬಳಲುತ್ತಿದ್ದ ಹೆಚ್.ವೈ.ಮೇಟಿಯವರಿಗೆ ಬಾಗಲಕೋಟೆಯ ಆಯುಷ್ ಅಧಿಕಾರಿ ಡಾ. ಮಹೇಶ್ವರ ಎಸ್.ಗುಗ್ಗರಿ ಅವರು ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆಹ್ವಾನಿಸಿರುತ್ತಾರೆ. ಆ ಆಯುಷ್ ಆಸ್ಪತ್ರೆಯಲ್ಲಿ ವಿಜಯಲಕ್ಷ್ಮೀ ಸೇರಿದಂತೆ ಮೂವರು ಅಟೆಂಡರ್’ಗಳು ವೈದ್ಯರಿಗೆ ಸಹಾಯಕರಾಗಿರುತ್ತಾರೆ. ಮೇಟಿ ಆ ಆಸ್ಪತ್ರೆಗೆ ಮೊದಲು ಬಂದಾಗ ಪುರುಷ ನೌಕರರು ರಜೆಯಲ್ಲಿದ್ದುದ್ದರಿಂದ ವಿಜಯಲಕ್ಷ್ಮೀ ಅವರೇ ಚಿಕಿತ್ಸೆಗೆ ಅಟೆಂಡ್ ಮಾಡಿದ್ದರು. ಮೇಟಿಗೆ ಸರ್ವಾಂಗ ಅಭ್ಯಂಗ, ಸರ್ವಾಂಗ ಸ್ವೇದ ಹಾಗೂ ಬಸ್ತಿ ಚಿಕಿತ್ಸೆಗಳನ್ನು ನೀಡಲು ವಿಜಯಲಕ್ಷ್ಮೀ ನೆರವಾಗಿದ್ದರು. ಅದಾದ ಬಳಿಕ ಮೇಟಿ ಎರಡು ಮೂರು ಬಾರಿ ಆ ಆಸ್ಪತ್ರೆಗೆ ಬಂದು ಹೋಗಿದ್ದರು. ಆಗ ಅವರು ಮತ್ತು ವಿಜಯಲಕ್ಷ್ಮೀ ಮಧ್ಯೆ ಅಂಥದ್ದೇನೂ ವರ್ತನೆ ಕಂಡುಬಂದಿರುಲಿಲ್ಲ ಎಂದು ಡಾ. ಮಹೇಶ್ವರ್ ಅವರು ಹೇಳಿದ್ದಾರೆಂದು ಪ್ರಜಾವಾಣಿ ಪತ್ರಿಕೆಯಲ್ಲಿ ವರದಿಯಾಗಿದೆ. ಅವರ ಪ್ರಕಾರ ಅವರಿಬ್ಬರಿಗೆ ಆಗಲೇ ಮೊದಲ ಪರಿಚಯವಾಗಿದ್ದು. ಈ ಮಧ್ಯೆ, ಬೇರೆಲ್ಲಾದರೂ ಮೇಟಿಯವರನ್ನು ವಿಜಯಲಕ್ಷ್ಮೀ ಸಂಪರ್ಕ ಸಾಧಿಸಿದ್ದಿರಬಹುದೆಂಬ ಅನುಮಾನವಿದೆ. 

ಬದಲಾದ ವಿಜಯಲಕ್ಷ್ಮೀ
ಆಸ್ಪತ್ರೆಯ ಸಿಬ್ಬಂದಿ ಹೇಳುವ ಪ್ರಕಾರ, ಮೇಟಿಯವರು ಆಯುಷ್ ಆಸ್ಪತ್ರೆಗೆ ಬಂದುಹೋದಾಗಿನಿಂದ ವಿಜಯಲಕ್ಷ್ಮೀ ತನ್ನ ಪ್ರಭಾವ ಹೆಚ್ಚಿಸಿಕೊಳ್ಳತೊಡಗುತ್ತಾರೆ. ಮೇಲಧಿಕಾರಿ, ಸಹೋದ್ಯೋಗಿಗಳ ವಿರುದ್ಧ ವಿಜಯಲಕ್ಷ್ಮೀ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಮಾಡುವ ಮೂಲಕ ಬೆದರಿಕೆ ಹಾಕುತ್ತಾ ತನ್ನ ಪವರ್ ಹೆಚ್ಚಿಸಿಕೊಳ್ಳುತ್ತಿರುತ್ತಾರೆ. ಸಚಿವ ಮೇಟಿಯವರ ಆಪ್ತೆ ಎಂದು ಹೇಳಿಕೊಳ್ಳುತ್ತಾ ಎಲ್ಲರನ್ನೂ ತನ್ನ ಹದ್ದುಬಸ್ತಿನಲ್ಲಿಡಲು ಶುರುವಚ್ಚಿಕೊಳ್ಳುತ್ತಾರೆ. ಮೇಲಧಿಕಾರಿಗಳೂ ಕೂಡ ತನಗೆ ಗೌರವ ನೀಡಬೇಕೆಂದು ಈಕೆ ಬಲವಂತಪಡಿಸುತ್ತಿರುತ್ತಾರೆ. ವೈದ್ಯಾಧಿಕಾರಿಗಳು, ವೈದ್ಯರೂ ಕೂಡ ಈಕೆಗೆ ಹೆದರತೊಡಗುತ್ತಾರೆ. ಕೆಲ ವೈದ್ಯರು ಇಲ್ಲಿಂದ ವರ್ಗಾವಣೆ ಮಾಡಿಸಿಕೊಂಡು ಹೋಗುವ ಮಟ್ಟಕ್ಕೆ ಈಕೆಯ ಕಿರುಕುಳ ನಡೆಯುತ್ತಿರುತ್ತದೆ. ತನಗೆ ಇಷ್ಟ ಬಂದ ಸಮಯಕ್ಕೆ ಆಸ್ಪತ್ರೆಗೆ ಬರುತ್ತಿದ್ದ ವಿಜಯಲಕ್ಷ್ಮೀ, ತನ್ನ ಜವಾಬ್ದಾರಿ ನಿಭಾಯಿಸುವ ಬದಲು ಆರಾಮವಾಗಿ ಕುಳಿತುಕೊಂಡಿರುತ್ತಿದ್ದರಂತೆ.

ಭರ್ಜರಿ ಕಾರು?
ಸಾಧಾರಣ ಅಟೆಂಡರ್ ನೌಕರಿ ಮಾಡುತ್ತಿದ್ದ ವಿಜಯಲಕ್ಷ್ಮೀ ಮೂರು ತಿಂಗಳ ಹಿಂದೆ ಹ್ಯುಂಡೇ ಅಸೆಂಟ್ ಕಾರನ್ನು ತಮ್ಮ ಪತಿ ಹೆಸರಲ್ಲಿ ಖರೀದಿಸಿರುವ ವಿಷಯ ಬೆಳಕಿಗೆ ಬಂದಿದೆ. ಕಾರು ಕೊಂಡ ಆ ದಿನ ಅವರು ಆಸ್ಪತ್ರೆಯಲ್ಲಿ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದ್ದರೆಂದು ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆಂದು ಪ್ರಜಾವಾಣಿ ಪತ್ರಿಕೆ ತಿಳಿಸಿದೆ.

Follow Us:
Download App:
  • android
  • ios