ಉಳುಮೆ ಮಾಡುವಾಗ ಈ ರೈತನಿಗೆ ಸಿಕ್ಕಿದ್ದೇನು ಗೊತ್ತಾ?
ಉಳುಮೆ ಮಾಡುವಾಗ ಈ ರೈತನಿಗೆ ಸಿಕ್ಕಿದ್ದೇನು?
ಬಿಹಾರದ ರೈತನ ಜಮೀನಿನಲ್ಲಿ ಅಪೂರ್ವ ಕಲಾಕೃತಿ
ಪಂಚಮುಖಿ ಶಿವನ ಅಪರೂಪದ ಮೂರ್ತಿ ಪತ್ತೆ
ಗುಪ್ತರ ಕಾಲದ ಅಪರೂಪದ ಕಲಾಕೃತಿ ಪತ್ತೆ
ಪಾಟ್ನಾ(ಜು.4): ಜಗತ್ತಿನಲ್ಲಿ ಏನೆಲ್ಲಾ ವಿಸ್ಮಯಗಳು ಸಂಭವಿಸುತ್ತವೆ ನೋಡಿ. ರೈತನೊಬ್ಬ ತನ್ನ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ೨ನೇ ಶತಮಾನದ ಪಂಚಮುಖಿ ಶಿವನ ಮೂರ್ತಿ ದೊರೆತಿದ್ದು, ಇದನ್ನು ನೋಡಲು ಸಹಸ್ರಾರು ಜನರು ರೈತನ ಜಮೀನಿಗೆ ಭೇಟಿ ನೀಡುತ್ತಿದ್ದಾರೆ.
ಬಿಹಾರದ ಭಗವಾನ್ ಪುರ್ ಸಮೀಪದ ಓರ್ ಗಾಂವ್ ನಲ್ಲಿ ರೈತ ಕಮಲೇಶ್ ತಿವಾರಿ ತಮ್ಮ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದರು. ಈ ವೇಳೆ ಮಣ್ಣನ್ನು ಅಗೆಯುತ್ತಿರುವಾಗ ಕಬ್ಬಿಣದ ವಸ್ತುವೊಂದು ಅವರ ಗುದ್ದಲಿ ಗೆ ಬಡಿದಿದೆ. ಮೊದಲು ಇದನ್ನು ದೊಡ್ಡ ಕಲ್ಲು ಎಂದು ಭಾವಿಸಿದ್ದ ಕಮಲೇಶ್, ಅಗೆಯುತ್ತಾ ಹೋದಂತೆ ಕಮಲೇಶ್ ಅವರಿಗೆ ಭಾರೀ ಗಾತ್ರದ ಮೂರ್ತಿ ಎಂಬುದು ಗೊತ್ತಾಗಿದೆ.
ಕೂಡಲೇ ಅದನ್ನು ಹೊರ ತೆಗೆದ ಕಮಲೇಶ್, ಇತರರಿಗೆ ಮಾಹಿತಿ ನೀಡಿದ್ದು, ಈ ಮೂರ್ತಿಯನ್ನು ನೋಡಲು ಜನ ತಂಡೋಪತಂಡವಾಗಿ ಬರುತ್ತಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಪುರಾತತ್ವ ಇಲಾಖೆ ಅಧಿಕಾರಿಗಳು, ಕಮಲೇಶ್ ಜಮೀನಿನಲ್ಲಿ ದೊರೆತಿದ್ದು ಪಂಚಮುಖಿ ಶಿವನ ಮೂರ್ತಿ ಎಂದು ತಿಳಿಸಿದ್ದಾರೆ.
ಈ ಮೂರ್ತಿ ಎರಡನೇ ಶತಮಾನಕ್ಕೆ ಸೇರಿದ್ದಾಗಿದ್ದು, ಗುಪ್ತರ ಕಾಲದಲ್ಲಿ ಇದನ್ನು ಕೆತ್ತಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಏಕೆಂದರೆ ಗುಪ್ತರ ಕಾಲದಲ್ಲಿ ವಾರಾಣಸಿ ಮತ್ತು ಸಾರನಾಥ ಬಳಿ ಕೆಂಪು ಮಣ್ಣಿನಿಂದ ಪ್ರತಿಮೆಗಳನ್ನು ತಯಾರಿಸುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.