ಅರಣ್ಯಕ್ಕೆ ಹೊಂದಿಕೊಂಡಂತಿರುವ ಪ್ರದೇಶದಲ್ಲಿ ಬಗರ್‌ಹುಕುಂ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ದೊಡ್ಡ ತೊಡಕಾಗಿದ್ದ ಡೀಮ್ಡ್ ಅರಣ್ಯದಿಂದ ಮುಕ್ತಿ ಪಡೆಯಲು ಸರ್ಕಾರ ಕೊನೆಗೂ ನಿರ್ಧಾರ ಮಾಡಿದೆ.ರಾಜ್ಯದಲ್ಲಿ ಅರಣ್ಯ ಲಕ್ಷಣವಿದ್ದು, ಅರಣ್ಯ ಎಂದು ಗುರುತಿಸಿದ್ದ 17 ಲಕ್ಷ ಹೆಕ್ಟೇರ್‌ ಪ್ರದೇಶದ ಪೈಕಿ 4.98 ಲಕ್ಷ ಹೆಕ್ಟೇರ್‌ ಪ್ರದೇಶವನ್ನು ಡೀಮ್ಡ್ ಅರಣ್ಯದಿಂದ ಹೊರಗಿಡಲು ಸರ್ಕಾರ ತೀರ್ಮಾನಿಸಿದೆ.

ಬೆಂಗಳೂರು: ಅರಣ್ಯಕ್ಕೆ ಹೊಂದಿಕೊಂಡಂತಿರುವ ಪ್ರದೇಶದಲ್ಲಿ ಬಗರ್‌ಹುಕುಂ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ದೊಡ್ಡ ತೊಡಕಾಗಿದ್ದ ಡೀಮ್ಡ್ ಅರಣ್ಯದಿಂದ ಮುಕ್ತಿ ಪಡೆಯಲು ಸರ್ಕಾರ ಕೊನೆಗೂ ನಿರ್ಧಾರ ಮಾಡಿದೆ.
ರಾಜ್ಯದಲ್ಲಿ ಅರಣ್ಯ ಲಕ್ಷಣವಿದ್ದು, ಅರಣ್ಯ ಎಂದು ಗುರುತಿಸಿದ್ದ 17 ಲಕ್ಷ ಹೆಕ್ಟೇರ್‌ ಪ್ರದೇಶದ ಪೈಕಿ 4.98 ಲಕ್ಷ ಹೆಕ್ಟೇರ್‌ ಪ್ರದೇಶವನ್ನು ಡೀಮ್ಡ್ ಅರಣ್ಯದಿಂದ ಹೊರಗಿಡಲು ಸರ್ಕಾರ ತೀರ್ಮಾನಿಸಿದೆ.

Add Asianetnews Kannada as a Preferred SourcegooglePreferred

ಉಳಿದ ಸುಮಾರು 12 ಲಕ್ಷ ಹೆಕ್ಟೇರ್‌ ಸೇರಿ ಒಟ್ಟಾರೆ 33 ಲಕ್ಷ ಹೆಕ್ಟೇರ್‌ ಪ್ರದೇಶವನ್ನು ರಾಜ್ಯದ ಅಧಿಸೂಚಿತ ಅರಣ್ಯ ಪ್ರದೇಶ ಎಂದು ಅಧಿಕೃತವಾಗಿ ಘೋಷಿಸಲು ಸರ್ಕಾರ ಮುಂದಾಗಿದೆ. ಅಷ್ಟೇ ಅಲ್ಲ. ಈ ಬಗ್ಗೆ ಸುಪ್ರೀಂಕೋರ್ಟ್‌ ಮತ್ತು ಕೇಂದ್ರ ಅಧಿಕಾರಸ್ಥ ಸಮಿತಿ ಮುಂದೆ ಪ್ರಮಾಣ ಪತ್ರ ಸಲ್ಲಿಸುವುದಕ್ಕೂ ನಿರ್ಧರಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ರಾಜ್ಯದ ಅರಣ್ಯ ಪ್ರದೇಶದ ಬಗ್ಗೆ ಕೇಂದ್ರ ಸರ್ಕಾರ ಪರಿಷ್ಕೃತ ಅಧಿಸೂಚನೆ ಹೊರಡಿಸಬೇಕಿದ್ದು, ಆ ಬಳಿಕ ಅರಣ್ಯಕ್ಕೆ ಹೊಂದಿಕೊಂಡಂತೆ ಇದ್ದ ಸುಮಾರು 5 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ವಾಸ, ಕೃಷಿ ಮಾಡಿಕೊಂಡಿರುವ ಜನತೆಗೆ ಹಕ್ಕುಪತ್ರ, ಮಾಲಿಕತ್ವ ಮತ್ತಿತರೆ ಸೌಲಭ್ಯ ಪಡೆಯುವುದು ಸುಲಭವಾಗಲಿದೆ.

ಸಭೆ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಡೀಮ್‌್ಡ ಅರಣ್ಯ ಎಷ್ಟಿದೆ, ಅದರಲ್ಲಿ ಕಂದಾಯ, ಅರಣ್ಯ ಭಾಗ ಎಷ್ಟಿದೆ ಎಂದು ಗುರುತಿಸಲಾಗಿದೆ. ಜತೆಗೆ ಡೀಮ್ಡ್ ಅರಣ್ಯದಿಂದ ಎಷ್ಟು ಪ್ರದೇಶ ಕೈಬಿಡಬೇಕೆಂದು ಶಿಫಾರಸು ಮಾಡಲು ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗಿದೆ. ಈ ಬಗ್ಗೆ ಸರ್ಕಾರ ಸದ್ಯದಲ್ಲೇ ಸುಪ್ರೀಂಕೋರ್ಟ್‌ನಲ್ಲಿ ಪ್ರಮಾಣ ಪತ್ರ ಸಲ್ಲಿಸಲಿದೆ. ಕೇಂದ್ರ ಅಧಿಕಾರಸ್ಥ ಸಮಿತಿ ಮುಂದೆಯೂ ಪ್ರಮಾಣ ಪತ್ರ ಸಲ್ಲಿಸಲಾಗುತ್ತದೆ ಎಂದು ವಿವರಿಸಿದರು.

ರಾಜ್ಯದಲ್ಲಿ ಡೀಮ್ಡ್ ಅರಣ್ಯ ಎಂದು ಗುರುತಿಸಲಾಗಿದ್ದ 17,62,919 ಹೆಕ್ಟೇರ್‌ ಪ್ರದೇಶದಲ್ಲಿ 4,98,991 ಹೆಕ್ಟೇರ್‌ ಪ್ರದೇಶದ ಅರಣ್ಯವನ್ನು ಹೊರಗಿಡಲಾಗುತ್ತಿದ್ದು, ಉಳಿದಂತೆ 33,23,854 ಹೆಕ್ಟೇರ್‌ ಪ್ರದೇಶವನ್ನು ಮಾತ್ರ ಅಧಿಕೃತ ಅರಣ್ಯ ಎಂದು ಪ್ರಕಟಿಸಲಾಗುತ್ತದೆ. ಇದನ್ನು ಕೋರ್ಟ್‌ಗೆ ಮನವರಿಕೆ ಮಾಡಲಾಗುವುದು ಎಂದರು.

ರಾಜ್ಯದಲ್ಲಿ ಸುಪ್ರೀಂಕೋರ್ಟ್‌ ಸೂಚನೆ ಮೇರೆಗೆ ಅರಣ್ಯ ಲಕ್ಷಣಗಳಿರುವ ಕಂದಾಯ ಪ್ರದೇಶವನ್ನೆಲ್ಲಾ ಸೇರಿಸಿ ಡೀಮ್ಡ್ ಪ್ರದೇಶ ಎಂದು ಗುರುತಿಸಲಾಗಿತ್ತು. ಇದಕ್ಕೆ ವ್ಯಾಪಕ ವಿರೋಧ ಬಂದಿದ್ದರಿಂದ ಎಲ್ಲಾ ಜಿಲ್ಲಾಧಿಕಾರಿಗಳ ಅರಣ್ಯ ಮತ್ತು ಕಂದಾಯ ಪ್ರದೇಶವನ್ನು ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಈ ವರದಿಗಳನ್ನು ಆಯಾ ಜಿಲ್ಲಾ ಮಂತ್ರಿಗಳು ಪರಿಶೀಲಿಸಿ ದೃಢೀಕರಿಸಬೇಕೆಂದು ಸೂಚಿಸಿಲಾಗಿತ್ತು ಎಂದರು.