ಅಧಿಕಾರಿಗಳಿಗೆ ರಾಜ್ಯ ಸರ್ಕಾರದಿಂದ ಲಗಾಮು
ಸರ್ಕಾರಿ ಅಧಿಕಾರಿಗಳಿಗೆ ಇದೀಗ ರಾಜ್ಯ ಸರ್ಕಾರ ಲಗಾಮು ಹಾಕಿದೆ. ಅಧಿಕಾರಿಗಳು ವಿದೇಶ ಪ್ರವಾಸಕ್ಕೆ ತೆರಳಲು ಕೆಲ ನಿಯಮಗಳನ್ನು ವಿಧಿಸಿದ್ದು ಮಾರ್ಗ ಸೂಚಿಗಳನ್ನು ಅನುಸರಿಸಬೇಕು ಎಂದು ಹೇಳಿದೆ.
ಬೆಂಗಳೂರು: ನಿಯಮ ಅನುಸರಿಸದೆ ವಿದೇಶ ಪ್ರವಾಸಕ್ಕೆ ಹಾರುತ್ತಿದ್ದ ಅಧಿಕಾರಿಗಳ ಕ್ರಮಕ್ಕೆ ಕಡಿವಾಣ ಹಾಕಿರುವ ರಾಜ್ಯ ಸರ್ಕಾರ, ಕೆಲವೊಂದು ಮಾರ್ಗಸೂಚಿಗಳ ಲಗಾಮು ಹಾಕಿದೆ. ವಿದೇಶ ಪ್ರವಾಸಕ್ಕೆ ಹೋಗುವಾಗ ಸಂಬಂಧಿಸಿದ ಇಲಾಖೆ ಸಚಿವರ ಅನುಮತಿ ಪಡೆಯಬೇಕು. ಸಚಿವರ ನಿಯೋಗದೊಂದಿಗೆ ವಿದೇಶ ಪ್ರವಾಸಕ್ಕೆ ಹೋಗಲು ಅನುಮತಿ ಕೋರಿ ನೇರವಾಗಿ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸುವಂತಿಲ್ಲ ಎಂದು ಹೇಳಿರುವ ಸರ್ಕಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮೂಲಕವೇ ಮುಖ್ಯಮಂತ್ರಿಯವರ ಅನುಮತಿ ಪಡೆಯಬೇಕು ಎಂದು ತಿಳಿಸಿದೆ.
ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅಂಜುಂ ಪರ್ವೇಜ್, ನೇರವಾಗಿ ವಿದೇಶ ಪ್ರವಾಸ ಪ್ರಸ್ತಾವನೆ ಮುಖ್ಯಮಂತ್ರಿ ಯವರ ಅನುಮೋದನೆಗೆ ಸಲ್ಲಿಸಿದರೆ ಅಂತಹ ಪ್ರಸ್ತಾವನೆ ಪರಿಗಣಿಸು ವುದಿಲ್ಲ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮೂಲಕವೇ ಅನುಮತಿ ಪಡೆಯಬೇಕು ಎಂದು ಎಚ್ಚರಿಸಿದ್ದಾರೆ.
ಅಲ್ಲದೆ, ವಿದೇಶ ಪ್ರವಾಸ ಸಂದರ್ಭದಲ್ಲಿ ಸಾರಿಗೆ, ವಸತಿ ವೆಚ್ಚ ಮತ್ತು ಇತರೆ ವಿದೇಶಿ ಆತಿಥ್ಯ ಸ್ವೀಕರಿಸುವ ಪ್ರಸ್ತಾವನೆ ಇದ್ದರೆ, ಆತಿಥ್ಯ ಪಡೆದುಕೊಳ್ಳಲು ಅನುಮತಿಗಾಗಿ ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಜತೆ ಸಮಾಲೋಚನೆ ನಡೆಸಬೇಕು. ಸಂಬಂಧಿಸಿದ ವಿದೇಶ ಪ್ರವಾಸದ ಉದ್ದೇಶ ಹಾಗೂ ಆ ಪ್ರವಾಸದ ಪರಿಣಾಮವಾಗಿ ಸರ್ಕಾರಕ್ಕೆ, ಅಧಿಕಾರಿಗೆ ಆಗುವ ಅನುಕೂಲ, ಉದ್ದೇಶಿತ ಪ್ರವಾಸದ ಅನುಭವ ಬಳಕೆಯಿಂದ ರಾಜ್ಯ ಸರ್ಕಾರಕ್ಕೆ ಆಗುವ ಪ್ರತಿಫಲದ ವಿವರಣೆ ಒದಗಿಸಬೇಕು ಎಂದು ತಿಳಿಸಲಾಗಿದೆ.