ಲಿಂಗಾಯತರು ಅಲ್ಪಸಂಖ್ಯಾತರೆಂದು ಮಾನ್ಯತೆ ನೀಡಿದ ರಾಜ್ಯ ಸರಕಾರ
ರಾಜ್ಯ ಸರಕಾರ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಧರ್ಮವೆಂದು ಮಾನ್ಯತೆ ನೀಡಿದ್ದು, ಕೇಂದ್ರ ಸರಕಾರ ಧರ್ಮಕ್ಕೆ ಅನುಮೋದನೆ ನೀಡಿದಂದಿನಿಂದ ಈ ಮಾನ್ಯತೆ ಜಾರಿಯಾಗಲಿದೆ.
ಬೆಂಗಳೂರು: ಪರ ವಿರೋಧಗಳ ನಡುವೆ ರಾಜ್ಯ ಸರಕಾರ ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪಿಸಲು ಕೇಂದ್ರಕ್ಕೆ ಶಿಫಾರಸು ಮಾಡುತ್ತಿದ್ದು, ಈ ಬೆನ್ನಲ್ಲೇ ರಾಜ್ಯ ಸರಕಾರ ಈ ಧರ್ಮಕ್ಕೆ ಅಲ್ಪಸಂಖ್ಯಾತ ಧರ್ಮವೆಂದು ಮಾನ್ಯತೆ ನೀಡಿದೆ. ಕೇಂದ್ರ ಸರಕಾರ ಧರ್ಮಕ್ಕೆ ಅನುಮೋದನೆ ನೀಡಿದಂದಿನಿಂದ ಈ ಮಾನ್ಯತೆ ಜಾರಿಯಾಗಲಿದೆ.
ರಾಜ್ಯ ಅಲ್ಪಸಂಖ್ಯಾತ ಆಯೋಗವು ರಾಜ್ಯ ಸರಕಾರಕ್ಕೆ ಮಾಡಿರುವ ಶಿಫರಸ್ಸನ್ನು ಪರಿಗಣಿಸಿ, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಅಧಿನಿಯಮದಂತೆ ಈ ಮಾನ್ಯತೆ ನೀಡಲಾಗಿದೆ, ಎಂದು ಸರಕಾರದ ಅಧಿಸೂಚನೆ ಹೇಳಿದೆ.
ರಾಜ್ಯ ಸರಕಾರವು ಪ್ರಸ್ತುತ ಇರುವ ಧಾರ್ಮಿಕ ಅಲ್ಪಸಂಖ್ಯಾತರ ಮೀಸಲಾತಿ ಸೌಲಭ್ಯಗಳನ್ನು ಒಳಗೊಂಡಂತೆ ಹಕ್ಕು ಹಾಗೂ ಆಸಕ್ತಿಗಳಿಗೆ ಧಕ್ಕೆ ಬಾರದಂತೆ, ಲಿಂಗಾಯತ ಹಾಗೂ ಬಸವ ತತ್ವಗಳನ್ನು ನಂಬುವ ವೀರಶೈವ ಲಿಂಗಾಯತ ಸಮುದಾಯವನ್ನು ಧಾರ್ಮಿಕ ಅಲ್ಪಸಂಖ್ಯಾತರೆಂದು ಮಾನ್ಯತೆ ನೀಡಲಾಗಿದೆ, ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.