ಮೈದಾನದ ಬಳಿ ವಿದ್ಯುತ್ ತಂತಿ ಕಿತ್ತು ಬಿದ್ದಿದೆ ಎಂಬ ಗಾಳಿಸುದ್ದಿಯು ಜನರನ್ನು ಆತಂಕಗೊಳಿಸಿತು. ಇದರಿಂದ ಗಾಬರಿಗೊಂಡು ಜನರು ಸಿಕ್ಕಸಿಕ್ಕ ಕಡೆ ಓಡಲು ಆರಂಭಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು ಎಂದು ಹೇಳಲಾಗುತ್ತಿದೆ.

ಲಕ್ನೋ(ಅ. 09): ಬಿಎಸ್'ಪಿ ಮುಖ್ಯಸ್ಥೆ ಮಾಯಾವತಿ ಆಯೋಜಿಸಿದ್ದ ಸಮಾವೇಶದಲ್ಲಿ ನೂಕುನುಗ್ಗಲಾಗಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ. ಬಿಎಸ್'ಪಿ ಸಂಸ್ಥಾಪಕ ಕಾನ್ಷಿ ರಾಮ್ ಅವರ 10ನೇ ಪುಣ್ಯತಿಥಿ ಅಂಗವಾಗಿ ಕಾನ್ಷಿರಾಮ್ ಸ್ಮಾರಕ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯುತ್ತಿತ್ತು. ಈ ವೇಳೆ ಸಂಭವಿಸಿದ ಈ ದುರ್ಘಟನೆಯಲ್ಲಿ 12ಕ್ಕೂ ಹೆಚ್ಚು ಜನರು ಗಾಯಗೊಂಡಿರುವುದೂ ವರದಿಯಾಗಿದೆ. ಸ್ಟೇಡಿಯಂನ ಸ್ಟೇರ್'ಕೇಸ್ ಬಳಿ ನಡೆದು ಬರುವ ವೇಳೆ ಕೆಲ ಜನರು ಆಯತಪ್ಪಿ ಕೆಳಗೆ ಬಿದ್ದದ್ದು ಅವಘಡಕ್ಕೆ ಕಾರಣವೆನ್ನಲಾಗಿದೆ. ಇಬ್ಬರು ಮಹಿಳೆಯರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.. ಮೃತಪಟ್ಟವರಲ್ಲಿ ಒಬ್ಬಾಕೆಯನ್ನು ಬಿಜ್ನೋರ್ ಜಿಲ್ಲೆಯ ಶಾಂತಿ ದೇವಿ(68) ಎಂದು ಗುರುತಿಸಲಾಗಿದೆ.

ಮೈದಾನದ ಬಳಿ ವಿದ್ಯುತ್ ತಂತಿ ಕಿತ್ತು ಬಿದ್ದಿದೆ ಎಂಬ ಗಾಳಿಸುದ್ದಿಯು ಜನರನ್ನು ಆತಂಕಗೊಳಿಸಿತು. ಇದರಿಂದ ಗಾಬರಿಗೊಂಡು ಜನರು ಸಿಕ್ಕಸಿಕ್ಕ ಕಡೆ ಓಡಲು ಆರಂಭಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು ಎಂದು ಹೇಳಲಾಗುತ್ತಿದೆ. ಆದರೆ, ಬಹುಜನ ಸಮಾಜ ಪಕ್ಷದ ಉತ್ತರ ಪ್ರದೇಶ ಘಟಕದ ಮುಖ್ಯಸ್ಥ ರಾಮ್ ಅಚಲ್ ರಾಜಭರ್ ಹೇಳುವ ಪ್ರಕಾರ ಸುಡುಬಿಸಿಲ ಬೇಗೆಯಿಂದ ಮಹಿಳೆಯರು ಮೃತಪಟ್ಟಿದ್ದು, ಯಾವುದೇ ನೂಕುನುಗ್ಗಲಿನಿಂದಲ್ಲ ಎಂದಿದ್ದಾರೆ.