Asianet Suvarna News Asianet Suvarna News

ಅಮೃತ ಮಹೋತ್ಸವ ಸಂಭ್ರಮ, ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ.. ಬನ್ನಿ ಅರಮನೆ ಮೈದಾನಕ್ಕೆ

ಅಖಿಲ ಹವ್ಯಕ ಮಹಾಸಭೆಗೆ 75ರ  ಪ್ರಾಯ. ಸಂಸ್ಥೆಯ ಅಮೃತ ಮಹೋತ್ಸವಕ್ಕೆ ಬೆಂಗಳೂರಿನ ಅರಮನೆ ಮೈದಾನ ಸಜ್ಜಾಗಿದೆ. ಸಾಧಕರಿಗೆ ಸನ್ಮಾನ, ರುಚಿಕರ ಅಡುಗೆ ತಿನಿಸು, ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರ-ವಿಮರ್ಶೆ ಎಲ್ಲದಕ್ಕೂ ಮೂರು ದಿನಗಳ ಕಾರ್ಯಕ್ರಮ ಸಾಕ್ಷಿಯಾಗಲಿದೆ.

sri akhila havyaka mahasabha Platinum jubilee 2nd-viswha-havyaka-sammelana
Author
Bengaluru, First Published Dec 25, 2018, 6:45 PM IST

ಬೆಂಗಳೂರು[ಡಿ.25]  ಹವ್ಯಕರ ಪ್ರಾತಿನಿಧಿಕ ಸಂಸ್ಥೆಯಾದ ಶ್ರೀ ಅಖಿಲ ಹವ್ಯಕ ಮಹಾಸಭಾ ಇತ್ತೀಚಿನ ದಿನಗಳಲ್ಲಿ ತನ್ನ ನೆಲ ಸಂಸ್ಕೃತಿಯ ತೆರೆ ಸರಿಸಿ, ಹೊಸ ಹೊಸ ಕಾರ್ಯಕ್ರಮಗಳನ್ನು ಹುಟ್ಟುಹಾಕಿ ಹವ್ಯಕ ಸಾಂಸ್ಕೃತಿಕ ಬದುಕನ್ನು ಸಮೃದ್ಧವಾಗಿ, ಸುಂದರವಾಗಿ ಕಟ್ಟಿಕೊಡುತ್ತಿದೆ. ಇಂತಹ ಮಹಾಸಭೆಗೆ ಈಗ 75 ರ ಅಮೃತ ಮಹೋತ್ಸವ ಸಂಭ್ರಮ. ಈ ಸಂಭ್ರಮವನ್ನು ಹವ್ಯಕ ಮಹಾಸಭಾ ಅದ್ದೂರಿಯಾಗಿ ಆಚರಿಸಲು ಸಿದ್ಧತೆ ಮಾಡಿಕೊಂಡಿದೆ.

ಡಿಸೆಂಬರ್ 28, 29 ಮತ್ತು 30 ರಂದು ಅಮೃತ ಮಹೋತ್ಸವ ಆಚರಣೆ ಹಾಗೂ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.  ಮೊದಲ ದಿನ ಬೆಳಗ್ಗೆ 9 ಗಂಟೆಗೆ ರಾಜ್ಯಪಾಲ ವಿ.ಆರ್‌. ವಾಲಾ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್‌ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. 

ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಮತ್ತು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ಸಚಿವ ಆರ್‌.ವಿ.ದೇಶಪಾಂಡೆ, ಮಾಜಿ ಸಚಿವ ಪಿಜಿಆರ್‌ ಸಿಂಧ್ಯಾ ಅತಿಥಿಗಳಾಗಿ ಆಗಮಿಸಲಿದ್ದಾರೆ. 

ಶಾಸಕ  ಶಿವರಾಮ ಎಮ್ ಹೆಬ್ಬಾರ್,  ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ ಏನ್. ವೆಂಕಟನಾರಾಯಣ ಭಾಗವಹಿಸಲಿದ್ದಾರೆ.

 29 ನೇ ತಾರೀಕಿನ ಕಾರ್ಯಕ್ರಮವನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಉದ್ಘಾಟಿಸಲಿದ್ದಾರೆ. ಸೋಂದಾ ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಜಗದೀಶ ಶೆಟ್ಟರ್‌ ಪಾಲ್ಗೊಳ್ಳಲಿದ್ದಾರೆ. 

ಕೈಗಾ 5,6 ನೇ ಘಟಕಕ್ಕೆ ವೇದಿಕೆ ಸಿದ್ಧ, ಉತ್ತರಕನ್ನಡದಲ್ಲಿ ಮತ್ತೆ ಮರಗಳ ಮಾರಣಹೋಮ?

ಅಮೃತ ಮಹೋತ್ಸವದ ಗುರುತಾಗಿ 75 ಪುಸ್ತಕಗಳ ಬಿಡುಗಡೆ ಹಾಗೂ 75 ಸಾಹಿತಿಗಳಿಗೆ ಸನ್ಮಾನ, 75 ಕೃಷಿಕರಿಗೆ ‘ಹವ್ಯಕ ಕೃಷಿರತ್ನ’ ಪ್ರಶಸ್ತಿ ಪ್ರದಾನ, 75 ಯೋಧರಿಗೆ ‘ಹವ್ಯಕ ದೇಶರತ್ನ’ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ‘ಹವ್ಯಕರು ಸಾಗಿ ಬಂದ ದಾರಿ’, ‘ಹವ್ಯಕರ ಇತಿಹಾಸ’ ಮೊದಲಾದ ವಿಷಯಗಳ ಕುರಿತು ಚರ್ಚಾ ಗೋಷ್ಠಿ ಏರ್ಪಡಿಸಲಾಗಿದೆ.

ಹವ್ಯಕರ ಕೈ ರುಚಿ ಬಗ್ಗೆ ತಿಳಿಸಲು ‘ಹವ್ಯಕ ಪಾಕೋತ್ಸವ’, 75 ಮಳಿಗೆಗಳಲ್ಲಿ ವಸ್ತು ಪ್ರದರ್ಶನ, ಯಕ್ಷಗಾನ, ರಾಮಕಥಾ, ಅಡಿಕೆ ಕೃಷಿ ಪ್ರದರ್ಶನ, ಕಬ್ಬಿನ ಹಾಲು ನೀಡುವ ಆಲೆಮನೆ ಪ್ರಾತ್ಯಕ್ಷಿಕೆ, ಜಾದೂ ಕಾರ್ಯಕ್ರಮ, ಕಲಾವಿದರಿಂದ ನೃತ್ಯ, ಸಂಗೀತ ಸೇರಿದಂತೆ ಹಲವಾರು ಆಕರ್ಷಕ ಕಾರ್ಯಕ್ರಮಗಳು ನಡೆಯಲಿವೆ.  ಒಟ್ಟಿನಲ್ಲಿ ಮೂರು ದಿನಗಳ ಕಾಲ ಅರಮನೆ ಮೈದಾನದಲ್ಲಿ ಹವ್ಯಕ ಪರಂಪರೆ ಅನಾವರಣಗೊಳ್ಳಲಿದೆ.

 

Follow Us:
Download App:
  • android
  • ios