ದೇಶವನ್ನು ಅಪಾಯಕಾರಿ ಆಡಳಿತದಿಂದ ರಕ್ಷಿಸಬೇಕು: ಸೋನಿಯಾ!
ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಸೋನಿಯಾ ಭಾಷಣ
ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಸೋನಿಯಾ
ಅಪಾಯಕಾರಿ ಆಡಳಿತದಿಂದ ದೇಶ ರಕ್ಷಿಸಬೇಕು
ಭಯದ ವಾತಾವರಣದಲ್ಲಿ ಬದುಕುತ್ತಿರುವ ಜನತೆ
ಪ್ರಜಾಪ್ರಭುತ್ವ ರಕ್ಷಿಸುವ ಹೊಣೆ ಕಾಂಗ್ರೆಸ್ ಮೇಲೆ
ನವದೆಹಲಿ(ಜು. 22): ಪ್ರಜಾಪ್ರಭುತ್ವದ ಮೌಲ್ಯಗಳೊಡನೆ ರಾಜಿ ಮಾಡಿಕೊಳ್ಳುವ ಅಪಾಯಕಾರಿ ಆಡಳಿತದಿಂದ ದೇಶವನ್ನು ರಕ್ಷಿಸುವ ಜವಾಬ್ದಾರಿ ಕಾಂಗ್ರೆಸ್ ಪಕ್ಷದ ಮೇಲಿದೆ ಎಂದು ಪಕ್ಷದ ಮಾಜಿ ಅಧ್ಯಕ್ಷೆ, ಹಿರಿಯ ನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.
ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಹೊಸದಾಗಿ ರಚನೆಯಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಸೋನಿಯಾ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.
ದೇಶದ ಬಡಜನತೆ ಭಯ ಹಾಗೂ ಹತಾಶೆಯ ಜೀವನ ನಡೆಸುವ ವಾತಾವರಣ ನಿರ್ಮಾಣವಾಗಿದೆ. ಈ ಕುರಿತಂತೆ ಕಾಂಗ್ರೆಸ್ ಎಚ್ಚರ ವಹಿಸಬೇಕಿದೆ ಎಂದ ಸೋನಿಯಾ, ಅಧಿಕಾರಕ್ಕಾಗಿ ಸಮಾಜದಲ್ಲಿ ದ್ವೇಷ ಬಿತ್ತುತ್ತಿರುವ ಬಿಜೆಪಿಯನ್ನು ಸೋಲಿಸುವ ಜವಾಬ್ದಾರಿಯನ್ನು ಪಕ್ಷ ಹೊರಬೇಕು ಎಂದು ಹೇಳಿದರು,
ಪ್ರಧಾನಿ ನರೇಂದ್ರ ಮೋದಿ ಅವರ ವಾಕ್ಚಾತುರ್ಯವು ಕೇಂದ್ರ ಸರ್ಕಾರದ ಪತನ ಪ್ರಾರಂಭವಾಗಿರುವುದನ್ನು ಸೂಚಿಸಿದೆ. ಅಲ್ಲದೆ ಅದು ತನ್ನ ಹತಾಶ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ. ನಾವು ಒಗ್ಗಟ್ಟಾಗಿ ಕೆಲಸ ಮಾಡಲು ಬದ್ದವಾಗಿದ್ದೇವೆ. ಪ್ರಜಾಪ್ರಭುತ್ವವನ್ನು ರಕ್ಷಿಸುವ ಕೆಲಸಕ್ಕೆ ನಾವು ರಾಹುಲ್ ಅವರೊಂದಿಗೆ ಕೈಜೋಡಿಸುತ್ತೇವೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.