ಪತ್ನಿಯೊಂದಿಗೆ ವೈಮನಸ್ಸು ಉಂಟಾಗಿ ಪತ್ನಿಯ ನಡತೆ ಸರಿ ಇಲ್ಲ ಎಂದು ಬಿಂಬಿಸಲು ಮೊಬೈಲ್ ಸಂಖ್ಯೆ ಮತ್ತು ಫೋಟೋಗಳನ್ನು ಡೇಟಿಂಗ್ ವೆಬ್‌ಸೈಟ್‌ಗಳಿಗೆ ಅಪ್‌ಲೋಡ್ ಮಾಡಿದ್ದ ಸಾಫ್ಟ್‌ವೇರ್ ಎಂಜಿನಿಯರ್‌ನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಪತ್ನಿಯೊಂದಿಗೆ ವೈಮನಸ್ಸು ಉಂಟಾಗಿ ಪತ್ನಿಯ ನಡತೆ ಸರಿ ಇಲ್ಲ ಎಂದು ಬಿಂಬಿಸಲು ಮೊಬೈಲ್ ಸಂಖ್ಯೆ ಮತ್ತು ಫೋಟೋಗಳನ್ನು ಡೇಟಿಂಗ್ ವೆಬ್‌ಸೈಟ್‌ಗಳಿಗೆ ಅಪ್‌ಲೋಡ್ ಮಾಡಿದ್ದ ಸಾಫ್ಟ್‌ವೇರ್ ಎಂಜಿನಿಯರ್‌ನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಾಫ್ಟ್‌ವೇರ್ ಎಂಜಿನಿಯರ್ ಹರ್ಷವರ್ಧನ್ ಭಟ್ ಬಂಧಿತ ಆರೋಪಿ. ಮೂಲತಃ ಶಿವಮೊಗ್ಗ ಜಿಲ್ಲೆಯ ಹರಿಶಿಗ್ರಾಮದ ಹರ್ಷವರ್ಧನ್ ನಗರದ ಕಾರ್ಲ್’ಜಿಸ್ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ.

ಹರ್ಷ, ಕಳೆದ ಆರು ವರ್ಷಗಳ ಹಿಂದೆ ಸಾಫ್ಟ್’ವೇರ್ ಎಂಜಿನಿಯರ್ ಆಗಿರುವ ರಮ್ಯಾ ರಾಮಚಂದ್ರಭಟ್ ಎಂಬುವರನ್ನು ವಿವಾಹವಾಗಿದ್ದ. ಟೆಕ್ಕಿ ದಂಪತಿ ನಡುವೆ ಇತ್ತೀಚೆಗೆ ವೈಮನಸ್ಸು ಉಂಟಾಗಿತ್ತು. ಕೌಟುಂಬಿಕ ಕಾರಣಗಳಿಂದ ಮತ್ತು ವೈಯಕ್ತಿಕ ಸಮಸ್ಯೆಗಳಿಂದ ಇಬ್ಬರ ನಡುವೆ ಸೃಷ್ಟಿಯಾದ ಕಲಹ ನ್ಯಾಯಾಲಯದ ಮೆಟ್ಟಿಲೇರಿವೆ.

ಈ ಪ್ರಕರಣ ಕೌಟುಂಬಿಕ ನ್ಯಾಯಾಲಯದಲ್ಲಿ ಇನ್ನು ಕೂಡ ವಿಚಾರಣೆ ಹಂತದಲ್ಲಿದೆ. ಪತ್ನಿಯ ನಡತೆ ಸರಿ ಇಲ್ಲ ಎಂದು ಬಿಂಬಿಸಲು ಆಕೆಯ ಮೇಲಿನ ತೀವ್ರ ವೈಮನಸ್ಸಿನಿಂದ ಪತ್ನಿಯ ಮೊಬೈಲ್ ಸಂಖ್ಯೆ ಮತ್ತು ಫೋಟೋಗಳನ್ನು ಡೇಟಿಂಗ್ ವೆಬ್’ಸೈಟ್‌ಗಳಿಗೆ ಅಪ್‌ಲೋಡ್ ಮಾಡಿದ್ದ.

ಈ ಸಂಬಂಧ ರಮ್ಯಾ ರಾಮಚಂದ್ರಭಟ್ ಅವರು ಸೈಬರ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪತಿಯನ್ನು ವಶಕ್ಕೆ ಪಡೆದು ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದೆವು. ಈ ವೇಳೆ ಪತಿ ಕೃತ್ಯ ಎಸಗಿರುವುದು ಪ್ರಾಥಮಿಕ ಹಂತದಲ್ಲೇ ಸಾಬೀತಾಗಿದ್ದರಿಂದ ಆತನನ್ನು ಬಂಧಿಸಿದ್ದೇವೆ. ಆತನನ್ನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸೈಬರ್ ಕ್ರೈಂ ಪೊಲೀಸರು ಮಾಹಿತಿ ನೀಡಿದರು.