ರಾಜ್ಯದ ಪ್ರಮುಖ ಹ್ದೆದಾರಿಯೊಂದು ರಾಷ್ಟ್ರೀಯ ಹೆದ್ದಾರಿಯಾಗಿ ಬದಲಾಗುತ್ತಿದೆ. ಇದೇ ಕಾರಣಕ್ಕೆ 18 ತಿಂಗಳು ಬಂದ್ ಆಗಲಿದೆ. ಆದರೆ ಇದಕ್ಕೆ ಪರ್ಯಾಯ ಮಾರ್ಗ ಇದೆಯೇ? ಇದೆ ಎನ್ನುತ್ತಾರೆ ಸ್ಥಳೀಯರು. ಹಾಗಾದರೆ ಸರಕಾರ ಅಥವಾ ಆಡಳೀತ ಏನು ಸಮಸ್ಯೆಯಾಗದಂತೆ ಏನು ಮಾಡಬಹುದು? ಇಲ್ಲಿದೆ ಉತ್ತರ

ಕಾರವಾರ[ಸೆ.25]  ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯಿತಿ ಮೂಲಕ ವಡ್ಡಿ, ದೇವನಹಳ್ಳಿ, ಶಿರಸಿ ಸಂಪರ್ಕ ರಸ್ತೆಯನ್ನು ದುರಸ್ತಿ ಮಾಡುವಂತೆ ಒತ್ತಾಯಿಸಿ ಶಿರಸಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣ ವೈದ್ಯ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿದ್ದಾರೆ.

Add Asianetnews Kannada as a Preferred SourcegooglePreferred

18 ತಿಂಗಳ ಕಾಲ ಕುಮಟಾ ಶಿರಸಿ ತಡಸ್ ರಾಜ್ಯ ಹೆದ್ದಾರಿ ಕಾಮಗಾರಿ ನಡೆಯುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುಮತಿ ಕೋರಿದ್ದು, ಈ ರಸ್ತೆ ಬಂದ್ ಆದರೆ ಅಂಕೋಲಾ, ಕಾರವಾರ ಭಾಗದಿಂದ ಶಿರಸಿಗೆ ತೆರಳುವವರು 45ರಿಂದ 50 ಕಿ.ಮೀ. ಸುತ್ತುವರಿದು ಬರಬೇಕು. ಯಲ್ಲಾಪುರ ವಾರ್ಗವಾಗಿ ಶಿರಸಿಗೆ ತೆರಳುವುದಾದರೆ 150 ಕಿ.ಮೀ. ಆಗುತ್ತದೆ. ವಡ್ಡಿ ಮೇಲೆ ಶಿರಸಿಗೆ ತೆರಳಿದರೆ 110 ಕಿ.ಮೀ. ಆಗುತ್ತದೆ. ವಡ್ಡಿ ರಸ್ತೆ ದುರಸ್ತಿ ಆದರೆ ಸುತ್ತುಬಳಸಿ ಸಂಚರಿಸುವುದು ತಪ್ಪುತ್ತದೆ. ಹೀಗಾಗಿ ಆದ್ಯತೆಯ ಮೇಲೆ ಈ ರಸ್ತೆ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ವಡ್ಡಿ ರಸ್ತೆ ಕುಮಟಾಕ್ಕೂ ಸಂಪರ್ಕ ಕಲ್ಪಿಸುತ್ತದೆ. ವಡ್ಡಿ ಮೂಲಕ ಮಾದನಗೇರಿಯಿಂದ ಕುಮಟಾಕ್ಕೆ ತಲುಪಲು ಸಾಧ್ಯ. ಭಾರಿ ಮಳೆಯಿಂದಾಗಿ ಈ ರಸ್ತೆ ಅಲ್ಲಲ್ಲಿ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನಗಳು ಓಡಾಡುವ ಸ್ಥಿತಿಯಲ್ಲಿ ಇಲ್ಲ. ಕುಮಟಾ ತಡಸ್ ರಾಜ್ಯ ಹೆದ್ದಾರಿ 2 ವರ್ಷ ಬಂದ್ ಆಗುವ ಸಾಧ್ಯತೆ ಇದ್ದು, ವಡ್ಡಿ ರಸ್ತೆ ಲಘು ವಾಹನಗಳಿಗೆ ಸಹಾಯವಾಗಲಿದೆ ಎಂದರು.

ಜಿಪಂ ಮಾಜಿ ಸದಸ್ಯ ಜಿ.ಎಂ. ಶೆಟ್ಟಿ, ಚಂದ್ರು ಸಿದ್ದಿ, ನಾಗೇಶ ಕಮಾಣಿ, ರಾಮಚಂದ್ರ ಕಮಾಣಿ, ಕಮಲಾಕರ ಕಮಾಣಿ, ಲಕ್ಷ್ಮಣ ಸಿದ್ದಿ ಮನವಿ ಸಲ್ಲಿಕೆ ವೇಳೆ ಇದ್ದರು.