ಕುವೆಂಪು ಇದ್ದಿದ್ದರೆ ಶಾರನ್ನು ಕುಪ್ಪಳ್ಳಿಗೆ ಬರಲು ಬಿಡುತ್ತಿರಲಿಲ್ಲ
ಅನಂತಮೂರ್ತಿ, ಕುವೆಂಪು ಅವರು ಸಾಹಿತ್ಯದ ಮೂಲಕ ನಮ್ಮ ನಾಡು, ನಮ್ಮ ಸಮಾಜ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಸಂದೇಶವನ್ನು ಕೊಟ್ಟಿದ್ದಾರೆ. ಆದರೆ ಬಿಜೆಪಿ ಜನರ ನಡುವೆ ಬೆಂಕಿ ಇಡುವ ಪಕ್ಷ. ಶಿವಮೊಗ್ಗದಲ್ಲಿ ಬಿಜೆಪಿ ಹಿಂದೂ-ಮುಸ್ಲಿಮರ ನಡುವೆ ಬೆಂಕಿ ಇಡುವ ಕೆಲಸ ಬಿಟ್ಟು ಬೇರೇನೂ ಮಾಡಿಲ್ಲ
ಶಿವಮೊಗ್ಗ(ಏ.04): ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಕುವೆಂಪು ಅವರ ಕುಪ್ಪಳಿಗೆ ಹೋಗಿ ಬಂದಿದ್ದಾರೆ. ಒಂದು ವೇಳೆ ಕುವೆಂಪು ಬದುಕಿದ್ದರೆ ಅಮಿತ್ ಶಾ ಅವರನ್ನು ಆ ಜಾಗಕ್ಕೆ ಬರಲು ಬಿಡುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.
ಜನಾಶೀರ್ವಾದ ಯಾತ್ರೆಯ ಪ್ರಯುಕ್ತ ಬುಧವಾರ ನಗರದ ಗೋಪಿ ವೃತ್ತದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ, ಅನಂತಮೂರ್ತಿ, ಕುವೆಂಪು ಅವರು ಸಾಹಿತ್ಯದ ಮೂಲಕ ನಮ್ಮ ನಾಡು, ನಮ್ಮ ಸಮಾಜ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಸಂದೇಶವನ್ನು ಕೊಟ್ಟಿದ್ದಾರೆ. ಆದರೆ ಬಿಜೆಪಿ ಜನರ ನಡುವೆ ಬೆಂಕಿ ಇಡುವ ಪಕ್ಷ. ಶಿವಮೊಗ್ಗದಲ್ಲಿ ಬಿಜೆಪಿ ಹಿಂದೂ-ಮುಸ್ಲಿಮರ ನಡುವೆ ಬೆಂಕಿ ಇಡುವ ಕೆಲಸ ಬಿಟ್ಟು ಬೇರೇನೂ ಮಾಡಿಲ್ಲ. ಧರ್ಮ, ಜಾತಿಗಳ ನಡುವೆ ವಿಷಬೀಜ ಬಿತ್ತುವ, ಬೆಂಕಿ ಹಚ್ಚುವ ಬಿಜೆಪಿಯವರು ಅಧಿಕಾರಕ್ಕೆ ಬರಲು ಬಿಡಬಾರದು ಎಂದರು.
ಶಿವಮೊಗ್ಗ ಜಿಲ್ಲೆ ಇಬ್ಬರು ಕಾಂಗ್ರೆಸ್ ಮುಖ್ಯಮಂತ್ರಿಗಳನ್ನು ಕಂಡಿದೆ. ಕಡಿದಾಳ್ ಮಂಜಪ್ಪ, ಎಸ್.ಬಂಗಾರಪ್ಪ ಅವರು ಜಿಲ್ಲೆಗೆ ಒಳ್ಳೆಯ ಹೆಸರು ತಂದುಕೊಟ್ಟರು. ಜನತಾ ಪರಿವಾರದ ಜೆ.ಎಚ್. ಪಟೇಲ್ ಅವರೂ ಮುಖ್ಯಮಂತ್ರಿಯಾಗಿದ್ದರು. ಆದರೆ ಬಿ.ಎಸ್.ಯಡಿಯೂರಪ್ಪ ಈ ಮೂವರು ಮುಖ್ಯಮಂತ್ರಿಗಳಿಂದ ಜಿಲ್ಲೆಗೆ ಬಂದಿದ್ದ ಖ್ಯಾತಿಯನ್ನು ಹಾಳು ಮಾಡಿದರು ಎಂದರು.