ಸಿದ್ದರಾಮಯ್ಯ ನನ್ನ ಮೂಲಕ ರಾಜಕಾರಣ ಮಾಡಲ್ಲ : ಚಲುವರಾಯಸ್ವಾಮಿ
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯಗೆ ನನ್ನ ಮೂಲಕ ರಾಜಕಾರಣ ಮಾಡುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಹೇಳಿದ್ದಾರೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರಮಟ್ಟದ ನಾಯಕರು. ರಾಷ್ಟ್ರಮಟ್ಟದಲ್ಲಿ ನಾಯಕನಾಗುವ ಗುಣ ಹೊಂದಿರುವ ಅವರಿಗೆ ನನ್ನ ಮೂಲಕ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ ಎಂದು ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಮ್ಮಿಶ್ರ ಸರ್ಕಾರದ ಬಗ್ಗೆ ಚಲುವರಾಯಸ್ವಾಮಿ ನೀಡುತ್ತಿರುವ ಹೇಳಿಕೆಗಳ ಹಿಂದೆ ಸಿದ್ದರಾಮಯ್ಯ ಇದ್ದಾರೆ ಎಂಬ ಆರೋಪಗಳ ಬಗ್ಗೆ ಅವರು ಸ್ಪಷ್ಟನೆ ನೀಡಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚೆಲುವರಾಯಸ್ವಾಮಿ ಅವರು, ಸಿದ್ದರಾಮಯ್ಯ ಅವರಿಗೆ ನನ್ನ ಮೂಲಕ ರಾಜಕಾರಣ ನಡೆಸುವ ಅವಶ್ಯಕತೆ ಇಲ್ಲ. ರಾಷ್ಟ್ರಮಟ್ಟದಲ್ಲಿ ಪ್ರಭಾವ ಹೊಂದಿರುವ ಹಾಗೂ ರಾಷ್ಟ್ರಮಟ್ಟದ ನಾಯಕರಾಗಬಲ್ಲ ಸಾಮರ್ಥ್ಯವುಳ್ಳ ರಾಜ್ಯದ
ಬೆರಳೆಣಿಕೆ ನಾಯಕರಲ್ಲಿ ಸಿದ್ದರಾಮಯ್ಯ ಅವರೂ ಒಬ್ಬರು. ಅವರು ರಾಜ್ಯ ಮಟ್ಟದ ನಾಯಕರು ಅಲ್ಲ. ಹೀಗಾಗಿ ಇಂತಹ ಆರೋಪಗಳಿಗೆ ಅರ್ಥವಿಲ್ಲ ಎಂದು ಹೇಳಿದರು.
ಕರ್ನಾಟಕದಲ್ಲಿ ಐದು ವರ್ಷ ಸಮ್ಮಿಶ್ರ ಸರ್ಕಾರ ಇರಲಿ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿದೆ. ನಮ್ಮ ಪಕ್ಷದ ನಾಯಕರೂ ಹೇಳಿದ್ದಾರೆ. ಈಗ ಬೇಡ ಎನ್ನಲು ನಾನು ಯಾರು ಸರ್? ಪಕ್ಷದ ತೀರ್ಮಾನವೇ ಅಂತಿಮ. ಹೀಗಾಗಿ ಐದು ವರ್ಷ ಅವಧಿಯನ್ನು ಮೈತ್ರಿ ಸರ್ಕಾರ ಪೂರೈಸಲಿ ಎಂಬುದೇ ನಮ್ಮ ಅಭಿಲಾಷೆ ಎಂದು ಚೆಲುವರಾಯಸ್ವಾಮಿ ಹೇಳಿದರು.