ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಸುದ್ದಿವಾಹಿನಿ ಜಂಟಿಯಾಗಿ ಸ್ಥಾಪಿಸಿರುವ ರೈತ ರತ್ನ ಪ್ರಶಸ್ತಿಗೆ ಸಮರ್ಥ 15 ಮಂದಿಯನ್ನು ಆಯ್ಕೆ ಮಾಡಿದ ತೀರ್ಪುಗಾರರು ಹೇಳಿದ್ದಿಷ್ಟು

ರೈತ ರತ್ನ ಪ್ರಶಸ್ತಿ ತೀರ್ಪುಗಾರರ ಮಾತುಗಳು

Add Asianetnews Kannada as a Preferred SourcegooglePreferred

ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಸುದ್ದಿವಾಹಿನಿ ಜಂಟಿಯಾಗಿ ಸ್ಥಾಪಿಸಿರುವ ರೈತ ರತ್ನ ಪ್ರಶಸ್ತಿಗೆ ಸಮರ್ಥ 15 ಮಂದಿಯನ್ನು ಆಯ್ಕೆ ಮಾಡಿದ್ದು ಕೃಷಿ- ಪರಿಸರ ತಜ್ಞ ಹಾಗೂ ಪತ್ರಕರ್ತ ಶಿವಾನಂದ ಕಳವೆ , ಕೃಷಿ ತಜ್ಞ-ಉದ್ಯಮಿ ಕೃಷ್ಣ ಪ್ರಸಾದ ಹಾಗೂ ನಿರ್ದೇಶಕಿ, ನಿರ್ದೇಶಕಿ, ನಟಿ ಶ್ರುನಾಯ್ಡು. ಅವರು ಪ್ರಶಸ್ತಿ ಕುರಿತಂತೆ ಆಡಿರುವ ಮಾತುಗಳು ಇಲ್ಲಿವೆ.

ರೈತರಿಗೆ ಪ್ರೋತ್ಸಾಹ ಸಿಗುವುದು ಮುಖ್ಯ

ಪ್ರತೀ ಜಿಲ್ಲೆಯ ವರದಿಗಾರರು ರೈತ ರತ್ನ ಪ್ರಶಸ್ತಿಯ ಸಲುವಾಗಿ ಅವರ ಜಿಲ್ಲೆಯ 45 ಮಂದಿ ರೈತರ ಬಗ್ಗೆ ತಿಳಿದುಕೊಂಡು ಅವರ ಕುರಿತು ಮಾಹಿತಿ ಸಲ್ಲಿಸಿದ್ದಾರೆ ಅಂತ ಗೊತ್ತಾಯಿತು. ಆ ವರದಿಗಾರರು ಅಷ್ಟು ಮಂದಿ ರೈತರ ಬಗ್ಗೆ ತಿಳಿದುಕೊಂಡಿರುವುದು ಮಾಧ್ಯಮ ದೃಷ್ಟಿಯಿಂದ ಒಳ್ಳೆಯ ವಿಚಾರ. ಈ ಪ್ರಶಸ್ತಿ ರಾಜ್ಯದ ದೃಷ್ಟಿ ರೈತರ ಮೇಲೆ ಬೀಳುವಂತೆ ಮಾಡುತ್ತದೆ. ಕೃಷಿ ಕೆಲಸದ ಮೇಲೆ ಬೆಳಕು ಬೀರುತ್ತದೆ. ಇವೆಲ್ಲಾ ಆಗಿ ರೈತರಿಗೆ ಕೃಷಿ ಕೆಲಸ ಮಾಡಲು ಮತ್ತಷ್ಟು ಉತ್ಸಾಹ ಸಿಗುತ್ತದೆ. ಅದಕ್ಕಾಗಿ ಈ ಪ್ರಶಸ್ತಿ ಮುಖ್ಯವಾದುದು ಎಂದಿದ್ದಾರೆ ಕೃಷಿ, ಪರಿಸರ ತಜ್ಞ ಶಿವಾನಂದ ಕಳವೆ.

ರೈತ ರತ್ನ ಪ್ರಶಸ್ತಿ ವಿಜೇತ ಸಾಧಕರ ಪರಿಚಯ ಓದಲು ಇಲ್ಲಿ ಕ್ಲಿಕ್ಕಿಸಿ

ಪ್ರತಿಯೊಬ್ಬ ರೈತನೂ ರೈತ ರತ್ನ

ಒಬ್ಬ ತಾಯಿ ತನ್ನ ಮಗುವನ್ನು ಹೇಗೆ ಸಾಕಿ ಪೋಷಿಸಿ ಬೆಳೆಸುತ್ತಾಳೋ ಅದೇ ಥರ ಒಬ್ಬ ರೈತ ಬೀಜ ನೆಟ್ಟು ಪೋಷಿಸಿ ಪಾಲಿಸಿ ಸಸಿಯಾಗಿ ಬೆಳೆಸಿ ಬೆಳೆ ತೆಗೆಯುತ್ತಾನೆ. ಅಂಥಾ ಬೆಳೆ ಪ್ರಾಣಿಯಿಂದ, ನೈಸರ್ಗಿಕ ವಿಕೋಪದಿಂದ ಹಾಳಾಗಬಹುದು. ಅವೆಲ್ಲವನ್ನೂ ಎದುರಿಸಿ ಗಟ್ಟಿಯಾಗಿ ನಿಲ್ಲುತ್ತಾನೆ. ಅಂಥಾ ಸಾಧಕನ ಶ್ರಮವನ್ನು ಗೌರವಿಸುವ ಕೆಲಸ ಮಾಡಿದ್ದಕ್ಕೆ ಕನ್ನಡಪ್ರಭ-ಸುವರ್ಣ ನ್ಯೂಸ್ ಸಂಸ್ಥೆಯನ್ನು ಅಭಿನಂದಿಸುತ್ತೇನೆ. ರೈತರತ್ನ ಪ್ರಶಸ್ತಿಯಲ್ಲಿ ಕಾಣಿಸಿಕೊಂಡ ಪ್ರತಿಯೊಬ್ಬ ರೈತನೂ ರೈತ ರತ್ನ ಎಂದಿದ್ದಾರೆ ನಟಿ, ನಿರ್ದೇಶಕಿ, ನಿರ್ಮಾಪಕಿ ಶ್ರುತಿ ನಾಯ್ಡು.

ರೈತರಿಗೆ ಧೈರ್ಯ ತುಂಬುವ ಮಾದರಿ ಕೆಲಸ

ಕೃಷಿ ಕ್ಷೇತ್ರ ಸಂಕಷ್ಟದಲ್ಲಿರುವಂತಹ ದಿನಗಳಿವು. ಕೋವಿಡ್‌ನಿಂದ ಆ ಸಂಕಷ್ಟ ಮತ್ತಷ್ಟು ಜಾಸ್ತಿಯಾಗಿದೆ. ಪರಿಸ್ಥಿತಿ ಹೀಗಿರುವಾಗ ರೈತರ ಸಾಧನೆಗಳನ್ನು ಸಮಾಜಕ್ಕೆ ತಿಳಿಸುವ ಮೂಲಕ ಅವರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ರೈತ ರತ್ನ ಪ್ರಶಸ್ತಿ. ರೈತರ ಸಾಧನೆಗಳನ್ನು ಸಮಾಜಕ್ಕೆ ತಿಳಿಸಿ ನಿಶ್ಚೇತನಗೊಂಡಿರುವಂತಹ ವಲಯಕ್ಕೆ ಪುನಶ್ಚೇತನ ನೀಡುವ ಮತ್ತು ರೈತ ಸಂಕುಲಕ್ಕೆ ಧೈರ್ಯ ತುಂಬುವಂತಹ ಕೆಲಸ ಇದು. ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ರೈತರಿಗೆ ಪ್ರಶಸ್ತಿ ಸಂದಿರುವುದು ಮತ್ತಷ್ಟು ಮಂದಿಗೆ ಸ್ಫೂರ್ತಿ ನೀಡಲಿದೆ ಎಂದಿದ್ದಾರೆ ಕೃಷಿ ತಜ್ಞ, ಉದ್ಯಮಿ ಕೃಷ್ಣಪ್ರಸಾದ್.