ಯಡಿಯೂರಪ್ಪ ಭೇಟಿಯಾಗಿ ಟಿಕೆಟ್ ವಿಚಾರ ಚರ್ಚಿಸಿದ ಶ್ರೀನಿವಾಸ್ ಪ್ರಸಾದ್
ವಿಧಾನಸಭಾ ಚುನಾವಣೆ ವಿಚಾರದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೇನೆ. ಆದರೆ ನಾನು ಚುನಾವಣೆಗೆ ನಿಲ್ಲುತ್ತಿಲ್ಲ. ನನ್ನ ಅಳಿಯ ಹರ್ಷವರ್ಧನ ಕೂಡಾ ನಂಜನಗೂಡು ಕ್ಷೇತ್ರಕ್ಕೆ ಆಕಾಂಕ್ಷಿಯಾಗಿದ್ದಾರೆ.
ಬೆಂಗಳೂರು : ವಿಧಾನಸಭಾ ಚುನಾವಣೆ ವಿಚಾರದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೇನೆ. ಆದರೆ ನಾನು ಚುನಾವಣೆಗೆ ನಿಲ್ಲುತ್ತಿಲ್ಲ. ನನ್ನ ಅಳಿಯ ಹರ್ಷವರ್ಧನ ಕೂಡಾ ನಂಜನಗೂಡು ಕ್ಷೇತ್ರಕ್ಕೆ ಆಕಾಂಕ್ಷಿಯಾಗಿದ್ದಾರೆ. ಯಾರು ಸೂಕ್ತ ಎಂದು ಇದ್ದಾರೋ ಅವರಿಗೆ ಟಿಕೆಟ್ ಕೊಡಿ ಅಂತಾ ಹೇಳಿದ್ದೇನೆ ಎಂದು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ಬೇರೆಯವರನ್ನು ಅಭ್ಯರ್ಥಿ ಮಾಡಿದರೂ ನಾನು ಸಹಕಾರ ಕೊಡುತ್ತೇನೆ. ಹತಾಶೆ ಆದಾಗ ಸಿದ್ದರಾಮಯ್ಯ ಕಾರಣಗಳನ್ನು ಹುಡುಕುತ್ತಾರೆ . ಆರಂಭದಲ್ಲಿ ಇದ್ದ ವೀರಾವೇಶ ಈಗ ಇಳಿದಿದೆ. ಆರಂಭದಲ್ಲಿ ಎರಡು ದಿನ ಮಾತ್ರ ಕ್ಷೇತ್ರಕ್ಕೆ ಹೋಗುತ್ತೇನೆ ಅಂತಾ ಹೇಳಿದ್ದ ಸಿದ್ದರಾಮಯ್ಯ ಈಗ ಅಲ್ಲೇ ಇರುತ್ತಿದ್ದಾರೆ. ಇವತ್ತೂ ಕೂಡಾ ಮೈಸೂರಿಗೆ ಹೋಗಿದ್ದಾರೆ. ಅವರಿಗೆ ದಿಗಿಲಾಗಿದ್ದು, ನಮಗೂ ಕೂಡಾ ಅವರನ್ನು ಸೋಲಿಸಲು ಗೊತ್ತಿದೆ ಎಂದು ಹೇಳಿದ್ದಾರೆ.
ಅವರೊಬ್ಬರಿಗೆ ಮಾತ್ರ ಸೋಲಿಸಲು ಗೊತ್ತಿರುವುದಲ್ಲ. ನಾವು ಅವರಿಗಿಂತ ರಾಜಕೀಯದಲ್ಲಿ ಹಿರಿಯರು. ವರುಣಾದಲ್ಲಿ ವಿಜಯೇಂದ್ರ ಬರುತ್ತಾರೆ ಅಂದಾಗ ಸಿದ್ದರಾಮಯ್ಯ ಗಾಬರಿಯಾಗಿದ್ದಾರೆ. 2006 ಉಪಚುನಾವಣೆಯ ಪರಿಸ್ಥಿತಿ ಈಗ ಇಲ್ಲ. ಕ್ಷೇತ್ರ ಪುನರ್ವಿಂಗಡಣೆ ಆಗಿದೆ, ಅಂದು ಜೊತೆ ಇದ್ದವರು ಕೂಡಾ ಇವತ್ತು ಅವರ ಜೊತೆ ಇಲ್ಲ. ಸಿದ್ದರಾಮಯ್ಯ ಅವರಿಗೆ ಉಪಕಾರ ಸ್ಮರಣೆ ಇಲ್ಲ ಎಂದು ಮಾಜಿ ಸಚಿವ ಶ್ರೀನಿವಾಸಪ್ರಸಾದ್ ಹೇಳಿದ್ದಾರೆ.