Published : Apr 07 2017, 05:39 AM IST| Updated : Apr 11 2018, 01:10 PM IST
Share this Article
FB
TW
Linkdin
Whatsapp
ತೀವ್ರ ಬರಗಾಲದಿಂದ ರಾಜ್ಯಾದ್ಯಂತ ಜಲಾಶಯಗಳು ಖಾಲಿಯಾಗಿದ್ದು, ಕುಡಿಯುವ ನೀರಿಗೆ ಕಾವೇರಿ ನದಿಯನ್ನೇ ಆಶ್ರಯಿಸಿರುವ ಬೆಂಗಳೂರಿನಲ್ಲಿ ಸದ್ಯದಲ್ಲೇ ಕುಡಿಯುವ ನೀರಿಗೂ ‘ಪಡಿತರ ವ್ಯವಸ್ಥೆ' ಜಾರಿಯಾಗಲಿದೆ.
ಬೆಂಗಳೂರು(ಎ.07): ತೀವ್ರ ಬರಗಾಲದಿಂದ ರಾಜ್ಯಾದ್ಯಂತ ಜಲಾಶಯಗಳು ಖಾಲಿಯಾಗಿದ್ದು, ಕುಡಿಯುವ ನೀರಿಗೆ ಕಾವೇರಿ ನದಿಯನ್ನೇ ಆಶ್ರಯಿಸಿರುವ ಬೆಂಗಳೂರಿನಲ್ಲಿ ಸದ್ಯದಲ್ಲೇ ಕುಡಿಯುವ ನೀರಿಗೂ ‘ಪಡಿತರ ವ್ಯವಸ್ಥೆ' ಜಾರಿಯಾಗಲಿದೆ.
ಹೌದು, ಕಾವೇರಿ ಮೂಲದಿಂದ ಮೇ ತಿಂಗಳ ಅಂತ್ಯದವರೆಗೆ ಸರಬರಾಜು ಮಾಡುವಷ್ಟುಮಾತ್ರ ನೀರು ಲಭ್ಯವಿದೆ ಎಂದು ಕಾವೇರಿ ನೀರಾವರಿ ನಿಗಮ ಸ್ಪಷ್ಟಪಡಿಸಿರುವುದರಿಂದ ನಗರದಲ್ಲಿ ಇನ್ನು ಮುಂದೆ ಮೂರು ದಿನಗಳಿಗೆ ಒಮ್ಮೆ ಅಥವಾ ವಾರಕ್ಕೆ ಎರಡು ಬಾರಿ ಮಾತ್ರ ನೀರು ಪೂರೈಕೆ ಮಾಡುವ ಚಿಂತನೆ ನಡೆಸಿದೆ. ತನ್ಮೂಲಕ ಲಭ್ಯ ನೀರನ್ನು ಲಭ್ಯ ನೀರನ್ನು ಜೂನ್ 15ರವರೆಗೂ ಪೂರೈಕೆ ಮಾಡಲು ಮುಂದಾಗುತ್ತಿರುವುದಾಗಿ ಜಲಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಕಾವೇರಿ ನೀರಾವರಿ ನಿಗಮವು ತನ್ನ ಅಂಕಿ ಅಂಶಗಳÜ ಆಧಾರದ ಮೇಲೆ ಮೇ ತಿಂಗಳ ಅಂತ್ಯದವರೆಗೂ ನೀರು ಕೊಡುವುದಾಗಿ ಹೇಳಿದೆ. ಆದರೆ, ವಾಸ್ತವವಾಗಿ ಮೇ ತಿಂಗಳ ಮಧ್ಯದಲ್ಲಿಯೇ ಕೆಆರ್ಎಸ್ನ ನೀರಿನ ಸಂಗ್ರಹ ಖಾಲಿಯಾಗಲಿದೆ. ಹೀಗಾಗಿ ನೀರು ಪಡಿತರ ಮಾಡುವುದು ಅನಿವಾರ್ಯ ಎಂಬುದು ಅವರ ಅಂಬೋಣ.
ರಾಜ್ಯದಲ್ಲಿನ ಬರಗಾಲದಿಂದ ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಆಗುವ ಬಗ್ಗೆ ಜನವರಿ ತಿಂಗಳಲ್ಲೇ ಸ್ಪಷ್ಟವಾಗಿತ್ತು. ಹೀಗಾಗಿ ಫೆಬ್ರವರಿಯಲ್ಲಿ ಸಭೆ ನಡೆಸಿದ್ದ ಜಲಸಂಪನ್ಮೂಲ ಇಲಾಖೆ, ನಗರಾ ಭಿವೃದ್ಧಿ ಇಲಾಖೆ, ಕಾವೇರಿ ನೀರಾವರಿ ನಿಗಮ ಹಾಗೂ ಬೆಂಗಳೂರು ಜಲಮಂಡಳಿ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿಗೆ ಪಡಿತರ ವ್ಯವಸ್ಥೆ ಜಾರಿ ಮಾಡುವ ಕುರಿತು ಚರ್ಚಿಸಿದ್ದರು.
ಇದೀಗ ನೀರಿನ ಮಟ್ಟತೀವ್ರ ಕುಸಿದಿರುವ ಹಿನ್ನೆಲೆಯಲ್ಲಿ ಬುಧವಾರ ಶಿವ ಬ್ಯಾಲೆನ್ಸಿಂಗ್ ಜಲಾ ಶಯ, ಕೆಆರ್ಎಸ್ ಜಲಾಶಯ ಮತ್ತಿತರ ಕಡೆ ಪರಿ ಶೀಲನೆ ನಡೆಸಿರುವ ಜಲಮಂಡಳಿ ಹಿರಿಯ ಅಧಿಕಾ ರಿಗಳ ತಂಡ ನೀರಿನ ಮಿತ ಪೂರೈಕೆ ಬಗ್ಗೆ ಜಲಮಂಡಳಿ ಅಧ್ಯಕ್ಷರಿಗೆ ಶಿಫಾರಸು ಮಾಡಿದೆ. ಮೇ ಅಂತ್ಯದೊಳಗಾಗಿ ನೀರಿನ ಸಂಗ್ರಹ ಮಟ್ಟಹೆಚ್ಚಾಗದಿದ್ದರೆ ಪಡಿತರ ವ್ಯವಸ್ಥೆ ಜಾರಿ ಅಗತ್ಯ ಎಂದು ಹೇಳಿದೆ.
ಪುಷ್ಠೀಕರಿಸಿದಅಧಿಕಾರಿಗಳು: ಜಲಮಂಡಳಿ ಚಿಂತನೆಯನ್ನು ಪುಷ್ಠೀಕರಿಸಿರುವ ಜಲಮಂಡಳಿ ಪ್ರಧಾನ ಇಂಜಿನಿಯರ್ ಕೆಂಪರಾಮಯ್ಯ, ಕಾವೇರಿ ನೀರಾವರಿ ನಿಗಮವು ಮೇ ಅಂತ್ಯದವರೆಗೆ ನೀರು ಪೂರೈಸುವುದಾಗಿ ಹೇಳಿದೆ. ಅವರು ಅಂಕಿ ಅಂಶಗಳ ಆಧಾರದ ಮೇಲೆ ಹೇಳಿದ್ದು, ನೀರು ಅಭಾವ ಉಂಟಾದರೆ ನಾವು ಏನೂ ಮಾಡಲು ಸಾಧ್ಯವಿಲ್ಲ. ಇದೀಗ ತುಮಕೂರಿನಲ್ಲಿ ಹೇಮಾವತಿ ನೀರು ಸರಬರಾಜು ನಿಂತಿರುವುದರಿಂದ ಮೂರು ದಿನಕ್ಕೊಮ್ಮೆ ಸಹ ನೀರು ನೀಡುತ್ತಿಲ್ಲ. ನೀರಿನ ಸಂಗ್ರಹ ಕಡಿಮೆಯಾದರೆ ನಾವೂ ಸಹ ಹೀಗೆಯೇ ಮಾಡಬೇಕಾಗುತ್ತದೆ ಎಂದು ಹೇಳುವ ಮೂಲಕ ನಗರದಲ್ಲಿ ನೀರು ಪಡಿತರ ಆರಂಭವಾಗುವ ಮುನ್ಸೂಚನೆ ನೀಡಿದ್ದಾರೆ.
ಈವರೆಗೂ ನೀರಿನ ಪೂರೈಕೆ ಪ್ರಮಾಣ ಕಡಿಮೆ ಮಾಡಿಲ್ಲ. ಪ್ರತಿ ನಿತ್ಯ ನಗರಕ್ಕೆ 1,350 ದಶಲಕ್ಷ ಲೀಟರ್ ನೀರು ಪೂರೈಸಲಾಗುತ್ತಿದೆ. ಮುಂದಿನ ನೀರು ಖಾಲಿಯಾದರೆ ಮೂರ್ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಸಬೇಕಾಗಬಹುದು. ಮಳೆ ಸುರಿದು ನೀರಿನ ಸಂಗ್ರಹಣೆ ಹೆಚ್ಚಾದರೆ ನೀರಿನ ಹಾಹಾಕಾರ ತಪ್ಪಬಹುದು ಎಂದೂ ಅವರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಜೂ.15ರ ವರೆಗೂ ನೀರಿನ ಬಳಕೆ: ಈ ಬಗ್ಗೆ ‘ಕನ್ನಡಪ್ರಭ' ಜತೆ ಮಾತನಾಡಿದ ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್, ಮೇ ಕೊನೆಯವರೆಗೂ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಆದರೆ, ಮುಂಗಾರು ಕೈ ಕೊಟ್ಟರೆ ಜನ ಪರದಾಡಬಾರದು ಎಂಬ ಉದ್ದೇಶದಿಂದ ಜೂನ್ 15ರವರೆಗೂ ನೀರು ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಯಾವ ರೀತಿಯಲ್ಲಿ ಮಾಡಬೇಕು ಎಂಬುದರ ಬಗ್ಗೆ ನೀರಾವರಿ ಇಲಾಖೆ ಹಾಗೂ ಕಾವೇರಿ ನೀರಾವರಿ ನಿಗಮದ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗುವುದು ಎಂದರು.
ವರದಿ: ಕನ್ನಡಪ್ರಭ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.