ಬಾಕಿ ಕೇಳಲು ದಿಲ್ಲಿಗೆ ಹೋಗಲಿದ್ದಾರೆ ಕೃಷಿ ಸಚಿವರು
ರಾಜ್ಯ ಸರ್ಕಾರಕ್ಕೆ ನೀಡಬೇಕಾದ 250 ಕೋಟಿ ರು. ಪಾವತಿಸುವಂತೆ ಶೀಘ್ರದಲ್ಲಿ ದೆಹಲಿಗೆ ತೆರಳಿ ಕೇಂದ್ರ ಕೃಷಿ ಸಚಿವರಲ್ಲಿ ಮನವಿ ಮಾಡಲಾಗುವುದು ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ತಿಳಿಸಿದ್ದಾರೆ.
ವಿಧಾನಸಭೆ : ಬೆಂಬಲ ಬೆಲೆಯಲ್ಲಿ ಖರೀದಿ ಮಾಡಿರುವ ಕಡಲೆ ಬೇಳೆಗೆ ರಾಜ್ಯ ಸರ್ಕಾರಕ್ಕೆ ನೀಡಬೇಕಾದ 250 ಕೋಟಿ ರು. ಪಾವತಿಸುವಂತೆ ಶೀಘ್ರದಲ್ಲಿ ದೆಹಲಿಗೆ ತೆರಳಿ ಕೇಂದ್ರ ಕೃಷಿ ಸಚಿವರಲ್ಲಿ ಮನವಿ ಮಾಡಲಾಗುವುದು ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ತಿಳಿಸಿದ್ದಾರೆ.
ಬಜೆಟ್ ಮೇಲಿನ ಚರ್ಚೆ ವೇಳೆ ಮಂಗಳವಾರ ಬಿಜೆಪಿ ಸದಸ್ಯ ಜಗದೀಶ್ ಶೆಟ್ಟರ್, ಕಡಲೆ ಬೆಳೆಗಾರರಿಗೆ ಬಾಕಿ ಬರಬೇಕಿದ್ದು, ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಶಿವಶಂಕರ ರೆಡ್ಡಿ, ರಾಜ್ಯ ಸರ್ಕಾರವು 500 ಕೋಟಿ ರು. ಬೆಂಬಲ ಬೆಲೆಯಲ್ಲಿ ಕಡಲೆ ಬೇಳೆಗಳನ್ನು ಖರೀದಿ ಮಾಡಲಾಗಿದೆ.
ಈ ಪೈಕಿ ಕೇಂದ್ರವು 250 ಕೋಟಿ ರು. ಪಾವತಿಸಬೇಕಾಗಿದ್ದು, ಈವರೆಗೆ ಸಂದಾಯ ಮಾಡಿಲ್ಲ. ಹಣ ನೀಡಬೇಕಾದ ಜವಾಬ್ದಾರಿ ಕೇಂದ್ರ ಸರ್ಕಾರದ್ದಾಗಿದ್ದು, ಈ ಬಗ್ಗೆ ಕೇಂದ್ರ ಕೃಷಿ ಸಚಿವರಿಗೆ ಮಾಹಿತಿ ನೀಡಲಾಗಿದೆ ಎಂದರು.
ಪ್ರಸ್ತುತ ಮಾಹಿತಿ ಪ್ರಕಾರ ಕೇಂದ್ರವು 70 ಕೋಟಿ ರು. ಬಿಡುಗಡೆ ಮಾಡಿದೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ತಿಳಿದುಕೊಳ್ಳಬೇಕಾಗಿದ್ದು, ಉಳಿದ ಮೊತ್ತವನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಲು ಶೀಘ್ರದಲ್ಲಿಯೇ ದೆಹಲಿಗೆ ತೆರಳಲಿದ್ದು, ಬಿಜೆಪಿ ಸದಸ್ಯರ ಸಹಕಾರವೂ ಅಗತ್ಯ ಇದೆ ಎಂದು ಹೇಳಿದರು.