ನಗರದಲ್ಲಿ ಫ್ಲೆಕ್ಸ್ ನಿಷೇಧದಿಂದ ಕನ್ನಡ ಸಿನಿಮಾ ಪ್ರಚಾರಕ್ಕೆ ಹಿನ್ನಡೆಯಾಗುತ್ತಿದೆ ಅನ್ನೋ ಕಾರಣ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಮನವಿ ಸಲ್ಲಿಸಿದ್ದಾರೆ. 

ಬೆಂಗಳೂರು(ಅ.12): ರಾಜಧಾನಿಯಲ್ಲಿ ಫ್ಲೆಕ್ಸ್‌ ನಿಷೇಧ ಹಿನ್ನೆಲೆಯಲ್ಲಿ ಚಲನಚಿತ್ರಗಳ ಪ್ರಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಮುಖ್ಯಮಂತ್ರಿಗಳಿಗೆ ನಟ ಶಿವರಾಜ್‌ ಕುಮಾರ್‌ ನೇತೃತ್ವದಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ನಿಯೋಗವು ಗುರುವಾರ ಮನವಿ ಸಲ್ಲಿಸಿತು.

Add Asianetnews Kannada as a Preferred SourcegooglePreferred

ನಗರದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾದ ವಾಣಿಜ್ಯ ಮಂಡಳಿ ನಿಯೋಗವು, ನಗರದಲ್ಲಿ ಫ್ಲೆಕ್ಸ್‌ ಬಳಕೆ ನಿಷೇಧ ಬಳಿಕ ಚಲನಚಿತ್ರ ಪ್ರಚಾರಕ್ಕೆ ಉಂಟಾಗಿರುವ ಸಮಸ್ಯೆ ಕುರಿತು ವಿವರಿಸಿತು. ಈ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಅಧಿಕಾರಿಗಳ ಜತೆ ಸಮಾಲೋಚಿಸಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ಕನ್ನಡ ಚಲನಚಿತ್ರಗಳ ಪ್ರಚಾರಕ್ಕೆ ಪೋಸ್ಟರ್‌ಗಳು ಹಾಗೂ ಬ್ಯಾನರ್‌ಗಳು ಅತ್ಯಗತ್ಯವಾಗಿವೆ. ಆದರೆ ಅವುಗಳನ್ನು ಹಾಕದಂತೆ ನ್ಯಾಯಾಲಯವು ಆದೇಶ ನೀಡಿದೆ. ಹೀಗಾಗಿ ಚಿತ್ರಮಂದಿರದ ಮುಂದೆ ಹಾಗೂ ಕೆಲವು ನಿಗದಿತ ಸ್ಥಳಗಳಲ್ಲಿ ಚಲನಚಿತ್ರಗಳ ಪೋಸ್ಟರ್‌ ಮತ್ತು ಬ್ಯಾನರ್‌ ಅಳವಡಿಕೆಗೆ ಅವಕಾಶ ಕಲ್ಪಿಸುವಂತೆ ಮುಖ್ಯಮಂತ್ರಿಗಳಿಗೆ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ.ಚಿನ್ನೇಗೌಡರು ವಿನಂತಿಸಿದರು.

ಸ್ವತಃ ನಿರ್ಮಾಪಕರಾಗಿರುವ ತಮಗೆ ನಿರ್ಮಾಪಕರ ಕಷ್ಟಗಳ ಬಗ್ಗೆ ಅರಿವಿದೆ. ಆದ್ದರಿಂದ ನ್ಯಾಯಾಲಯದ ಆದೇಶಕ್ಕೆ ಯಾವುದೇ ರೀತಿ ಧಕ್ಕೆ ಉಂಟಾಗದಂತೆ ಚಲನಚಿತ್ರಗಳ ಪ್ರಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಕೋರಿದರು.