ಮಾಜಿ ದೋಸ್ತಿಗಳ ಕಿತ್ತಾಟ: ಮೇಕ್ ಇನ್ ಇಂಡಿಯಾಕ್ಕೆ ಮಲ್ಯ ಅಂಬಾಸಿಡರ್!
ಒಂದು ಕಾಲದಲ್ಲಿ ಬಿಜೆಪಿಯ ಮಿತ್ರ ಪಕ್ಷವಾಗಿದ್ದ ಶಿವಸೇನೆ ಇದೀಗ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದೆ. ವಿಜಯ್ ಮಲ್ಯ ಸ್ಮಾರ್ಟ್ ಎಂದು ಕರೆದಿದ್ದ ಕೇಂದ್ರ ಸಚಿವ ಜುವಾಲ್ ಒರಾಮ್ ಮತ್ತು ಬಿಜೆಪಿ ವಿರುದ್ಧ ತನ್ನ ಮುಖವಾಣಿ ಸಮ್ನಾದಲ್ಲಿ ಕಟು ಟೀಕೆ ಮಾಡಿದೆ. ಬಿಜೆಪಿಯನ್ನು ಶಿವಸೇನೆ ಛೇಡಿಸಿದ ಬಗೆಯನ್ನು ನೀವೇ ನೋಡಿಕೊಂಡು ಬನ್ನಿ..
ನವದೆಹಲಿ(ಜು. 16) ವಿಜಯ್ ಮಲ್ಯರನ್ನು ಬಿಜೆಪಿಯು ತನ್ನ ಮೇಕ್ ಇನ್ ಇಂಡಿಯಾ ಮತ್ತು ಸ್ಟಾರ್ಟ್ಅಪ್ ಇಂಡಿಯಾ ಅಭಿಯಾನಕ್ಕೆ ವಿಜಯ್ ಮಲ್ಯರನ್ನು ರಾಯಭಾರಿಯನ್ನಾಗಿ ನೇಮಿಸಿಕೊಳ್ಳಬೇಕೆಂದು ವ್ಯಂಗ್ಯವಾಡಿದೆ.
ಶಿವಸೇನೆಯ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಈ ರೀತಿ ಬರೆದುಕೊಂಡಿದ್ದು, ಒಂದು ಕಡೆ ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದರ ಬಗ್ಗೆ ಮಾತನಾಡುತ್ತಾರೆ, ಇನ್ನೊಂದು ಕಡೆ ಅಕ್ರಮ ಹಣ ಸಂಗ್ರಹಣೆ, ವರ್ಗಾವಣೆ ವಿಚಾರದಲ್ಲಿ ತಲೆಮರೆಸಿಕೊಂಡವರನ್ನು ಬಿಜೆಪಿಯ ನಾಯಕರು ತಮ್ಮ ಆದರ್ಶವೆಂಬಂತೆ ಮಾತನಾಡುತ್ತಾರೆ. ಈ ಬಗೆಯ ಇಬ್ಬಗೆ ನೀತಿಗೆ ಕಾರಣ ಏನು? ಎಂದು ಪ್ರಶ್ನೆ ಮಾಡಿದೆ.
ಶುಕ್ರವಾರ ಹೈದರಾಬಾದಿನಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ಒರಾಮ್, ವಿಜಯ್ ಮಲ್ಯ ಅವರನ್ನು ಸ್ಮಾರ್ಟ್, ಬುದ್ಧಿವಂತ ಎಂದು ಹೇಳಿದ್ದರು. ಯಶಸ್ವಿ ಉದ್ಯಮಿಗಳಾಗಬೇಕಾದರೆ ವಿಜಯ್ ಮಲ್ಯರ ಹಾದಿಯನ್ನು ಅನುಸರಿಸಿ ಬ್ಯಾಂಕುಗಳಿಂದ ಸಾಲ ಪಡೆದುಕೊಳ್ಳಿ ಎಂದು ರಾಷ್ಟ್ರೀಯ ಬುಡಕಟ್ಟು ಉದ್ಯಮಿಗಳ ಸಮ್ಮೇಳನದಲ್ಲಿ ಹೇಳಿದ್ದರು. ಇದನ್ನು ಇಟ್ಟುಕೊಂಡೆ ಶಿವಸೇನೆ ಕಟು ಟೀಕೆ ಮಾಡಿದೆ.