ಮಠದ ಸಿಸಿ ಟಿವಿ ವಿಡಿಯೋ ರೆಕಾರ್ಡರ್ ನದಿಯಲ್ಲಿ ಪತ್ತೆ : ಅದರಲ್ಲಿದ್ದದ್ದೇನು..?
ಶಿರೂರು ಶ್ರೀಗಳ ಸಾವಿನ ಸಂಬಂಧ ಮಹತ್ವದ ಸಾಕ್ಷ್ಯವಾಗಿದ್ದ ಮೂಲಮಠದ ಸಿ.ಸಿ.ಕ್ಯಾಮೆರಾ ಡಿವಿಆರ್ ನಾಪತ್ತೆಯಾಗಿತ್ತು. ನಾಪತ್ತೆಯಾಗಿದ್ದ ಡಿವಿಆರ್ ಇದೀಗ (ಡಿಜಿಟಲ್ ವಿಡಿಯೋ ರೆಕಾರ್ಡರ್) ಸಮೀಪದ ಸುವರ್ಣ ನದಿಯಲ್ಲಿ ಪತ್ತೆಯಾಗಿದೆ.
ಉಡುಪಿ: ಶಿರೂರು ಸ್ವಾಮೀಜಿ ನಿಧನಕ್ಕೆ ಸಂಬಂಧಪಟ್ಟು ಪೊಲೀಸರ ತನಿಖೆಗೆ ಹಲವು ಮಹತ್ವದ ಸಾಕ್ಷ್ಯಗಳನ್ನು ಒದಗಿಸಬಹುದಾಗಿದ್ದ ಶಿರೂರು ಮೂಲಮಠದ ಸಿ.ಸಿ.ಕ್ಯಾಮೆರಾ ಡಿವಿಆರ್ (ಡಿಜಿಟಲ್ ವಿಡಿಯೋ ರೆಕಾರ್ಡರ್) ಅನ್ನು ಎಗರಿಸಿರುವ ಆರೋಪಿಗಳು ಅದನ್ನು ಸಮೀಪದ ಸುವರ್ಣ ನದಿಗೆ ಎಸೆದಿರುವುದು ಖಚಿತವಾಗಿದೆ. ಹೀಗಾಗಿ ಮಂಗಳವಾರ ಇಡೀದಿನ ದೋಣಿ ಬಳಸಿ ನದಿಯಲ್ಲಿ ಹುಡುಕಾಡಲಾಗಿದೆ. ಆದರೆ ಮಳೆಯಿಂದಾಗಿ ನದಿ ತುಂಬಿ ಹರಿಯುತ್ತಿ ರುವುದರಿಂದ ಪತ್ತೆಕಾರ್ಯ ಯಶಸ್ವಿಯಾಗಿಲ್ಲ ಎನ್ನಲಾಗಿದೆ.
ತನಿಖೆಗೆ 5 ತಂಡ : ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ನಿಗೂಢ ಸಾವಿನ ತನಿಖೆಗೆ ೫ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ತನಿಖೆ ಒಂದು ಹಂತವನ್ನು ತಲುಪಿದೆ ಎಂದು ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ತಿಳಿಸಿದ್ದಾರೆ. ಮಂಗಳವಾರ ಎಸ್ಪಿ ಲಕ್ಷ್ಮಣ ನಿಂಬರ್ಗಿ ಮತ್ತು ಇತರ ಅಧಿಕಾರಿಗಳೊಂದಿಗೆ ತನಿಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದವರು ಸ್ವಷ್ಟಪಡಿಸಿದರು. ಮಠದಲ್ಲಿರುವ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳೂ ಸೇರಿ ಎಲ್ಲವೂ ತನಿಖೆ ಹಂತದಲ್ಲಿದೆ ಎಂದರು.