ಶಿರೂರು ಶ್ರೀಗಳ ರಾಜಕೀಯ ಪ್ರವೇಶದ ಹಿಂದೆ ನಾನಿಲ್ಲ : ಪ್ರಮೋದ್ ಮಧ್ವರಾಜ್
ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರು ಉಡುಪಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರದ ಹಿಂದೆ ತನ್ನ ಕೈವಾಡ ಇಲ್ಲ ಎಂದು ಸಚಿವ ಪ್ರಮೋದ್ ಮಧ್ವರಾಜ್ ಸ್ಪಷ್ಟಪಡಿಸಿದ್ದಾರೆ.
ಉಡುಪಿ: ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರು ಉಡುಪಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರದ ಹಿಂದೆ ತನ್ನ ಕೈವಾಡ ಇಲ್ಲ ಎಂದು ಸಚಿವ ಪ್ರಮೋದ್ ಮಧ್ವರಾಜ್ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಶಿರೂರು ಮಠದ ಸ್ವಾಮೀಜಿ ತಾವು ಬಿಜೆಪಿ ವಿರುದ್ಧ ಉಡುಪಿಯಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಗಳನ್ನು ಸಚಿವ ಪ್ರಮೋದ್ ಅವರೇ ಬಿಜೆಪಿಯನ್ನು ಸೋಲಿಸುವುದಕ್ಕಾಗಿ ಛೂ ಬಿಟ್ಟಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು.
ಆದರೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದ್, ಶ್ರೀಗಳು ಚುನಾವಣೆಗೆ ನಿಲ್ಲುವ ವಿಷಯ ಶನಿವಾರ ವಾಟ್ಸಾಪ್ ಮೂಲಕ ತನಗೆ ತಿಳಿಯಿತು.
ತಕ್ಷಣ ಅವರಿಗೆ ಕರೆ ಮಾಡಿ, ಸ್ವಾಮೀಜಿ ಅವರೇ ಇದೇನೂ ಹೊಸ ಬಾಂಬ್ ಹಾಕಿದ್ದೀರಿ ಎಂದು ಕೇಳಿದೆ. ಅದಕ್ಕೆ ಸ್ವಾಮೀಜಿ ಅವರು, ‘ನನಗೆ ಮುಖ್ಯಪ್ರಾಣ (ಹನುಮಂತ) ದೇವರ ಪ್ರೇರಣೆಯಾಗಿದೆ. ಅದಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ನಿರ್ಧರಿಸಿದ್ದೇನೆ’ ಎಂದರು. ಹಿಂದಿನ ಬಾರಿ ಅವರು ನನ್ನ ಪರವಾಗಿ ಪ್ರಚಾರ ಮಾಡಿದ್ದರು. ಈಗ ನನ್ನ ಎದುರು ಸ್ಪರ್ಧಿಸಿ ಎಂದು ಅವರಲ್ಲಿ ಹೇಳುವ ಮೂರ್ಖ ನಾನಲ್ಲ ಎಂದರು.