Asianet Suvarna News Asianet Suvarna News

ಲಘು ವಾಹನಗಳ ಸಂಚಾರಕ್ಕೆ ಶಿರಾಡಿ ಘಾಟ್ ಮುಕ್ತ

ಶಿರಾಡಿ ಘಾಟ್ ರಸ್ತೆಯನ್ನು ಲಘು ವಾಹ‌ನಗಳ ಸಂಚಾರಕ್ಕೆ ತಕ್ಷಣದಿಂದಲೇ ಮುಕ್ತ ಮಾಡಿ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.

Shiradi Ghat May Open For Light Vehicle
Author
Bengaluru, First Published Sep 5, 2018, 11:50 AM IST

ಮಂಗಳೂರು[ಸೆ.5] ಶಿರಾಡಿ ಘಾಟ್ ರಸ್ತೆಯನ್ನು ಲಘು ವಾಹ‌ನಗಳ ಸಂಚಾರಕ್ಕೆ ತಕ್ಷಣದಿಂದಲೇ ಮುಕ್ತ ಮಾಡಿ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.

ಇತ್ತೀಚೆಗೆ ಶಿರಾಡಿ ಘಾಟಿ ರಸ್ತೆಯಲ್ಲಿ ಭೂಕುಸಿತ ಹಿನ್ನೆಲೆಯಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಪ್ರಸಕ್ತ ಭೂ ಕುಸಿತ ಸ್ಥಳಗಳನ್ನು ದುರಸ್ತಿ ಮಾಡಲಾಗಿದ್ದು, ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಹುದು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ವರದಿ ನೀಡಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳು ಸ್ಥಳ ತನಿಖೆ ನಡೆಸಿ , ವರದಿ ನೀಡಲು ರಾಷ್ಟ್ರೀಯ ಹೆದ್ದಾರಿ ಕಾರ್ಯಕಾರಿ ಅಭಿಯಂತರರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಹಾಗೂ ಪುತ್ತೂರು ಉಪವಿಭಾಗಾಧಿಕಾರಿಗಳ ತಂಡ ನೇಮಿಸಿದ್ದರು.

ಈ ತಂಡವು ನೀಡಿದ ವರದಿಯನ್ವಯ ಜಿಲ್ಲಾಧಿಕಾರಿಗಳು, ಶಿರಾಡಿ ಘಾಟಿ ರಸ್ತೆಯಲ್ಲಿ ಕೆಲವು ಸ್ಥಳಗಳಲ್ಲಿ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ನೀಡಿ ಕಾರು, ಜೀಪು, ದ್ವಿಚಕ್ರ ವಾಹನಗಳು, ಟೆಂಪೋ ಟ್ರಾವೆಲರ್, ಮ್ಯಾಕ್ಸಿಕ್ಯಾಬ್ ವಾಹನಗಳ ಸಂಚಾರಕ್ಕೆ ಅನುವು ಮಾಡಿದ್ದಾರೆ. ಆದರೆ, ಶಿರಾಡಿ ಘಾಟಿ ರಸ್ತೆ ಇನ್ನೂ ಸಂಪೂರ್ಣ ಯಥಾಸ್ಥಿತಿ ಗೆ ಬಾರದಿರುವುದರಿಂದ ಎಲ್ಲಾ ವಿಧದ ಬಸ್ಸುಗಳು, ಲಾರಿ, ಟ್ಯಾಂಕರ್, ಕಂಟೈನರ್ ಗಳು ಸೇರಿದಂತೆ ಭಾರೀ ವಾಹನಗಳ ಸಂಚಾರವನ್ನು ಮುಂದಿನ ಆದೇಶದವರೆಗೆ ನಿರ್ಬಂಧಿಸಲಾಗಿದೆ.

ಶಿರಾಡಿಘಾಟ್ ರಸ್ತೆ ಸಂಚಾರದ ಬಗ್ಗೆ ಬುಧವಾರ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧಿಕೃತ ಘೋಷಣೆ ಹೊರಡಿಸಲಿದ್ದಾರೆ. ಕೆಲ ದಿನಗಳ ಹಿಂದೆ ಭಾರೀ ಪ್ರಮಾಣದಲ್ಲಿ ಮಳೆ ಸುರಿದ ಹಿನ್ನೆಲೆಯಲ್ಲಿ ಹಾನಿಗೆ ಒಳಗಾಗಿದ್ದ ಘಾಟ್ ನಲ್ಲಿ ಇದೀಗ ಮತ್ತೆ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಬಹುದೆಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ವರದಿ ನೀಡಿದ್ದು ಈ ನಿಟ್ಟಿನಲ್ಲಿ ಘೋಷಣೆ ಹೊರಡಿಸಲಿದ್ದಾರೆ ಎನ್ನಲಾಗಿತ್ತು.

ಮಂಗಳವಾರ ನಡೆದ ಜಿಲ್ಲಾ ಸಮನ್ವಯ ಮತ್ತು‌ ಉಸ್ತುವಾರಿ ಸಮಿತಿ ಸಭೆಯಲ್ಲೂ ಈ ವಿಚಾರದ ಬಗ್ಗೆ ಚರ್ಚೆ ನಡೆಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವರದಿ ಆದರಿಸಿ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದರು. 

ಮಂಗಳೂರು-ಬೆಂಗಳೂರು ನಡುವೆ ನೇರ ರೈಲು,ರಸ್ತೆ ಸಂಪರ್ಕವಿಲ್ಲದೆ‌ ಜನತೆ ಸಮಸ್ಯೆ ಎದುರಿಸುತ್ತಿದ್ದು,  ಜನರ ಒತ್ತಾಯ ಕ್ಕೆ ಮಣಿದು ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆ. 

Follow Us:
Download App:
  • android
  • ios