ಸಿದ್ದರಾಮಯ್ಯ ವಿರುದ್ಧ ಶಾಮನೂರು ಗರಂ
ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಹಲವರಿಂದ ಅಸಮಾಧಾನ ವ್ಯಕ್ತವಾಗಿದ್ದು ಈ ಸಾಲಿಗೆ ಇದೀಗ ಶಾಮನೂರು ಶಿವಶಂಕರಪ್ಪ ಕೂಡ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ದಾವಣಗೆರೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರ ಬಾಲಬಡುಕರಿಗಷ್ಟೇ ಸಚಿವ ಸ್ಥಾನ ನೀಡಲಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನಗೆ ಸಚಿವ ಸ್ಥಾನವೇ ಬೇಡ, ಅದರ ಅಪ್ಪನಂತೆಯೇ ನಾನಿದ್ದೇನೆ ಎಂದು ಇದೇ ವೇಳೆ ಗುಡುಗಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಸಿದ್ದರಾಮಯ್ಯ ಅಥವಾ ವೇಣುಗೋಪಾಲ್ ಬಾಲಬಡುಕನಲ್ಲ. ಈ ಕಾರಣಕ್ಕೆ ನನ್ನನ್ನು ಸಚಿವ ಸ್ಥಾನಕ್ಕೆ ಪರಿಗಣಿಸಿಲ್ಲ. ರಾಮಲಿಂಗಾರೆಡ್ಡಿ, ಬಿ.ಸಿ.ಪಾಟೀಲ್ಗೆ ಸಚಿವ ಸ್ಥಾನ ನೀಡದಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಸಂಪುಟ ಪುನಾರಚನೆ ವೇಳೆ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಮಾತನ್ನೂ ಕಡೆಗಣಿಸಲಾಗಿದೆ. ದುಡ್ಡಿದ್ದವರಿಗಷ್ಟೇ ಸಚಿವ ಸ್ಥಾನ ಸಿಕ್ಕಿದೆ. ಸದ್ಯದಲ್ಲೇ ರಾಮಲಿಂಗಾರೆಡ್ಡಿ ಸೇರಿ ಅನೇಕ ಪ್ರಮುಖ ನಾಯಕರು ಬೆಂಗಳೂರಿನಲ್ಲಿ ಸಭೆ ನಡೆಸಿ ಅನ್ಯಾಯ ಖಂಡಿಸುತ್ತೇವೆ. ಅವಕಾಶ ವಂಚಿತ ಶಾಸಕರಾರಯರೂ ನನ್ನನ್ನು ಸಂಪರ್ಕಿಸಿಲ್ಲ. ಸಂಪುಟ ವಿಸ್ತರಣೆಯಲ್ಲಿ ಆಗಿರುವ ಅನ್ಯಾಯದ ಬಗ್ಗೆ ನಾವೆಲ್ಲರೂ ಧ್ವನಿಯನ್ನಂತೂ ಎತ್ತುತ್ತೇವೆ ಎಂದರು.
ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮರುಜೀವ ಯತ್ನ:
ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಮುಕ್ತಾಯವಾಯಿತು ಅಂದುಕೊಂಡಿದ್ದೆ. ಆದರೆ, ಅದಕ್ಕೆ ಮರುಜೀವ ನೀಡುವ ಕೆಲಸವೂ ನಡೆದಿದೆ. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಆಪ್ತನೆಂದೇ ಗುರುತಿಸಿಕೊಂಡ ಎಂ.ಬಿ. ಪಾಟೀಲ್ಗೆ ಸಚಿವ ಸ್ಥಾನ ನೀಡುವ ಮೂಲಕ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವನ್ನು ಜೀವಂತವಾಗಿಡುವ ಹುನ್ನಾರ ನಡೆದಿದೆ. ಮತ್ತೆ ಇದು ವೀರಶೈವ ಲಿಂಗಾಯತ ಧರ್ಮದಲ್ಲಿ ಸಂಘರ್ಷಕ್ಕೆ ನಾಂದಿ ಹಾಡಿದಂತಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರೂ ಆದ ಶಾಮನೂರು ಆತಂಕ ವ್ಯಕ್ತಪಡಿಸಿದರು.