13 ತಿಂಗಳ ಹಿಂದೆಯೇ ಸಮಾಯಾವಕಾಶ ಕೋರಿದ್ದೆ. ಆದರೆ ಈವರೆಗೂ ಅವಕಾಶ ಸಿಕ್ಕಿಲ್ಲ: ಸಿನ್ಹಾ ಅಡ್ವಾಣಿಯವರನ್ನು ಪಕ್ಷವು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆಯೂ ಸಿನ್ಹಾ ಖೇದ

ನವದೆಹಲಿ: ಪ್ರಧಾನಿ ಮೋದಿಗೆ ಭೇಟಿಯಾಗಲು ಸಮಯಾವಕಾಶ ಕೋರಿ 13 ತಿಂಗಳುಗಳಾದರೂ ಈವರೆಗೆ ಅವಕಾಶ ಸಿಕ್ಕಿಲ್ಲ ಎಂದು ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಹಣಕಾಸು ಸಚಿವ ಯಶವಂತ್ ಸಿನ್ಹಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಬೇರೆ ಬೇರೆ ಮಹತ್ವದ ವಿಷಯಗಳನ್ನು ಚರ್ಚಿಸುವ ಉದ್ದೇಶದಿಂದ 13 ತಿಂಗಳ ಹಿಂದೆಯೇ ಸಮಾಯಾವಕಾಶ ಕೋರಿದ್ದೆ. ಆದರೆ ಈವರೆಗೂ ಅವಕಾಶ ಸಿಕ್ಕಿಲ್ಲ. ಆದುದರಿಂದ ಇನ್ಮುಂದೆ ಸರ್ಕಾರದ ಯಾರ ಜೊತೆಯೂ ಮಾತನಾಡದಿರಲು ನಿರ್ಧರಿಸಿದ್ದೇನೆ. ಏನೆಲ್ಲಾ ಹೇಳಬೇಕೋ ಅದನ್ನು ಸಾರ್ವಜನಿಕವಾಗಿ ಹೇಳುತ್ತೇನೆ ಎಂದು ಯಶವಂತ್ ಸಿನ್ಹಾ ಹೇಳಿದ್ದಾರೆ.

ಇಂದು ಬಿಜೆಪಿಯು, ಅಟಲ್, ಅಡ್ವಾಣಜೀಯವರ ಅವಧಿಯಲ್ಲಿದ್ದ ಬಿಜೆಪಿಯಂತೆ ಇಲ್ಲ. ಆಗ ಪಕ್ಷದ ಸಾಮಾನ್ಯ ಕಾರ್ಯಕರ್ತನೂ ಕೂಡಾ ಪಕ್ಷದ ಪ್ರಧಾನ ಕಚೇರಿಗೆ ಹೋಗಿ ಅಧ್ಯಕ್ಷರನ್ನು ನೇರವಾಗಿ ಭೇಟಿಯಾಗಬಹುದಿತ್ತು; ಆದರೆ ಈಗ ಹಿರಿಯ ನಾಯಕರಿಗೂ ಕೂಡಾ ಅಧ್ಯಕ್ಷರನ್ನು ಭೇಟಿಯಾಗಲು ಸಾಧ್ಯವಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಅಡ್ವಾಣಿಯವರನ್ನು ಪಕ್ಷವು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆಯೂ ಯಶವಂತ್ ಸಿನ್ಹಾ ಖೇದ ವ್ಯಕ್ತಪಡಿಸಿದ್ದಾರೆ.

ಅಮಿತ್ ಶಾ ಪ್ರಧಾನಿ ಮೋದಿಯವರಿಗೆ ಲಾಡು ತಿನ್ನಿಸುತ್ತಿರುವ ಫೋಟೋವೊಂದನ್ನು ಉಲ್ಲೇಖಿಸುತ್ತಾ, ಎಲ್ಲಾ ನಾಯಕರು ಅದರಲ್ಲಿ ಕಾಣಿಸಿಕೊಳ್ಳುತ್ತಾರೆ, ಆದರೆ ಅಡ್ವಾಣಿಜಿಯವರು ಕಾಣುವುದಿಲ್ಲವೆಂದಿದ್ದಾರೆ.