ಪಕೋಡಾ ಮಾರುವುದೂ ಉದ್ಯೋಗವಲ್ಲವೇ, ಎಂಬ ಪ್ರಧಾನಿ ಮೋದಿ ಹೇಳಿಕೆಯನ್ನು ರಾಜ್ಯಸಭೆಯಲ್ಲಿ ಮೊದಲ ಬಾರಿಗೆ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಮರ್ಥಿಸಿಕೊಂಡಿದ್ದಾರೆ.

ಹೊಸದಿಲ್ಲಿ: 'ಪಕೋಡಾ ಮಾರುವುದು ಒಂದು ಉದ್ಯೋಗವೇ,' ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಎಲ್ಲೆಡೆ ಕೆಲವು ಸಂಘಟನೆಗಳು ಪಕೋಡಾ ಮಾರುವ ಮೂಲಕ ಪ್ರತಿಭಟಿಸುತ್ತಿವೆ. ಈ ಬೆನ್ನಲ್ಲೇ ಮೋದಿ ಹೇಳಿಕೆಯನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಅಮಿತ್ ಶಾ ಸಮರ್ಥಿಸಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ರಾಜ್ಯಸಭಾ ಸದಸ್ಯರಾದ ನಂತರ ಇದೇ ಮೊದಲ ಬಾರಿಗೆ ಮಾತನಾಡಿದ ಶಾ, 'ಏನೂ ಕೆಲಸವಿಲ್ಲದೇ ಇರುವುದಕ್ಕಿಂತಲೂ, ಪಕೋಡಾ ಮಾರುವುದು ಒಳ್ಳೆಯದು. ಇದರಲ್ಲಿ ಯಾವ ಅವಮಾನವೂ ಇಲ್ಲ,' ಎಂದು ಹೇಳಿದ್ದಾರೆ.

ಮೋದಿ ನೇತೃತ್ವದ ಬಿಜೆಪಿ ಸರಕಾರ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ, ಎಂದು ಕಾಂಗ್ರೆಸ್ ನಿರಂತರವಾಗಿ ಟೀಕಿಸುತ್ತಲೇ ಇದ್ದು, ಇದಕ್ಕೆ ಪ್ರತಿಕ್ರಿಯೆ ನೀಡುವಾಗ ಪಕೋಡಾ ಮಾರೋ ಹೇಳಿಕೆ ನೀಡಿದ್ದರು ಪ್ರಧಾನಿ.

'ದೇಶದಲ್ಲಿ ನಿರುದ್ಯೋಗ ಸಮಸ್ಯೆ ಮುಂಚಿನಿಂದಲೂ ಇದ್ದು, 55 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಏನು ಮಾಡುತ್ತಿತ್ತು,' ಎಂದು ಶಾ ಪ್ರಶ್ನಿಸಿದ್ದಾರೆ. 

ಮೋದಿ ಸರಕಾರ ಜಾರಿಗೊಳಸಿದ ಜಿಎಸ್‌ಟಿ, ಜನ್ ಧನ್ ಯೋಜನೆ...ಮುಂತಾದ ಕಾರ್ಯಕ್ರಮಗಳನ್ನು ಉಲ್ಲೇಖಿಸಿದ ಶಾ, ಮೋದಿ ಸರಕಾರದ ಕಾರ್ಯವೈಖರಿಯನ್ನು ಶ್ಲಾಘಿಸಿದರು.