ಬಿಎಸ್'ವೈ ಬದಲಾದರೆ ಬಿಜೆಪಿಗೆ ಯಾರು ?
- ಬಿಜೆಪಿಗೆ ನೂತನ ಸಾರಥಿಯಾಗಿ ಒಕ್ಕಲಿಗರ ನೇಮಕ ಸಾಧ್ಯತೆ ?
- ಬಿಎಸ್ವೈಗೆ ದಲಿತ ಎಡ ವರ್ಗದವರ ಮೇಲೆ ಒಲವು
ರಾಜ್ಯಾಧ್ಯಕ್ಷ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬದಲಿಸುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಿಲ್ಲ. ಆಗಲೇ ಅವರ ಜಾಗಕ್ಕೆ ಈ ಬಾರಿ ಒಕ್ಕಲಿಗರನ್ನು ನೇಮಿಸಬಹುದು ಎಂಬ ಲೆಕ್ಕಾಚಾರದೊಂದಿಗೆ ಆರ್ ಅಶೋಕ್ ಮತ್ತು ಸಿ ಟಿ ರವಿ ಮಧ್ಯೆ ಪ್ರಬಲ ಪೈಪೋಟಿ ಶುರುವಾಗಿದೆ. ಸಂತೋಷ್ ಜಿ ಬೆಂಬಲದ ಕಾರಣದಿಂದ ಮಂಗಳೂರು ಸಂಸದ ನಳಿನ್ ಕುಮಾರ ಕಟೀಲು ಕೂಡ ಸ್ಪರ್ಧೆಯಲ್ಲಿದ್ದಾರೆ.
ಒಂದು ವೇಳೆ ಅನಿವಾರ್ಯವಾಗಿ ತಾನು ಕೆಳಗೆ ಇಳಿಯಲೇಬೇಕಾದಲ್ಲಿ ಯಡಿಯೂರಪ್ಪನವರು ದಲಿತ ಬೋವಿ ಸಮುದಾಯಕ್ಕೆ ಸೇರಿದ ಅರವಿಂದ ಲಿಂಬಾವಳಿ ಹೆಸರು ಹೇಳಬಹುದು. ಆದರೆ ಕಪ್ಪು ಕುದುರೆಯಾಗಿ ಕೊನೆಯ ಗಳಿಗೆಯಲ್ಲಿ ದಲಿತ ಎಡ ವರ್ಗಕ್ಕೆ ಸೇರಿರುವ ಗೋವಿಂದ ಕಾರಜೋಳ ಹೆಸರು ಪ್ರತ್ಯಕ್ಷವಾದರೂ ಆಶ್ಚರ್ಯವಿಲ್ಲ. ಇದಕ್ಕಾಗಿ ಸಿ ಟಿ ರವಿ ಮತ್ತು ಗೋವಿಂದ ಕಾರಜೋಳ ಈಗಾಗಲೇ ಒಂದೆರಡು ಸುತ್ತು ದಿಲ್ಲಿ ರೌಂಡ್ಸ್ ಮುಗಿಸಿದ್ದಾರೆಂಬ ಮಾತುಗಳೂ ಇವೆ.
[ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ]