ಕಾಂಗ್ರೆಸ್ ಸೋಲಿಗೆ ಕಾರಣವೇನು ? ಸಿದ್ದು ಬಿಚ್ಚಿಟ್ಟರು ಸತ್ಯ
- ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ನಮ್ಮ ಸೋಲಿಗೆ ಕಾರಣವಲ್ಲ ಎಂದ ಮಾಜಿ ಸಿಎಂ
- ಸದಾಶಿವ ಆಯೋಗದ ವರದಿಯಿಂದ ಪಕ್ಷಕ್ಕೆ ಬಹುಮತ ಸಿಗಲಿಲ್ಲ ಎಂದು ಒಪ್ಪಿಕೊಂಡ ಸಿದ್ದು
ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯ ಎತ್ತಿದ್ದೇ ಕಾಂಗ್ರೆಸ್ ಸೋಲಲು ಕಾರಣ ಎನ್ನುವುದನ್ನು ಸುತರಾಂ ಒಪ್ಪಿಕೊಳ್ಳದ ಸಿದ್ದು, ಅದು ನಮ್ಮ ಸೋಲಿಗೆ ಕಾರಣ ಅಲ್ಲ ಎಂದು ಹೇಳಿಕೊಂಡರು.
ಹಾಗಿದ್ದಲ್ಲಿ ಸೋಲಿನ ಕಾರಣ ಏನು ಎಂದು ಪತ್ರಕರ್ತರು ಕೆದಕಿದಾಗ, ಸದಾಶಿವ ಆಯೋಗದ ವರದಿ ಬಗ್ಗೆ ನಿರ್ಧಾರ ತೆಗೆದುಕೊಳ್ಳದೆ ಇರುವುದೇ ನಮ್ಮ ಸೋಲಿಗೆ ಮುಖ್ಯ ಕಾರಣ. ಇದರಿಂದ ನಾವು ನಂಬಿಕೊಂಡ ಮತಗಳು ದೂರ ಹೋದವು ಎಂದು ಹೇಳಿಕೊಂಡರು. ಸದಾಶಿವ ಆಯೋಗದ ವರದಿ ಬಗ್ಗೆ ಏನೇ ನಿರ್ಣಯ ತೆಗೆದುಕೊಂಡರೂ ನಷ್ಟ ನಮಗೇ ಆಗುತ್ತಿತ್ತು. ಮೇಲಾಗಿ ರಾಮುಲು ಅವರನ್ನು ಮುಂದಿಟ್ಟುಕೊಂಡು ಬಿಜೆಪಿಯವರು ನಾಯಕರನ್ನು ಸೆಳೆದು, ದಲಿತ ಎಡ ವರ್ಗಕ್ಕೆ ಹೆಚ್ಚು ಸೀಟು ಕೊಟ್ಟರು.
ಇದರಿಂದ ಅಹಿಂದ ವೋಟ್ ಬ್ಯಾಂಕ್ ಛಿದ್ರಛಿದ್ರವಾಯಿತು. ಆದರೆ ನಮ್ಮ ಜೊತೆ 95 ಪರ್ಸೆಂಟ್ ವರೆಗೆ ನಿಂತವರೆಂದರೆ ಮುಸ್ಲಿಮರು. ಈಗ ಆದ ತಪ್ಪನ್ನು
ಲೋಕಸಭೆಯಲ್ಲಿ ಸರಿಪಡಿಸುತ್ತೇವೆ ಬಿಡಿ ಎಂದರು. ಸಿದ್ದು ಮಾತನಾಡುವಾಗ ಮಾತಿಗೊಮ್ಮೆ ಆಫ್ ದಿ ರೆಕಾರ್ಡ್ ಎನ್ನುತ್ತಿದ್ದರು. ಪತ್ರಕರ್ತರು ಯಾಕೆ ಮೊದಲೆಲ್ಲ ಹಾಗೆ ಹೇಳುತ್ತಿರಲಿಲ್ಲ, ಬರ್ಕೊಳಿ ಎನ್ನುತ್ತಿದ್ದಿರಿ ಎಂದಾಗ, ನಾನು ಹೇಳಿ ನೀವು ಬರೆದು ಚುನಾವಣೆಯಲ್ಲಿ ಜನ ಪಾಠ ಕಲಿಸಿದ್ದಾರೆ ಅಲ್ವಾ ಎಂದು ಮಾರ್ಮಿಕವಾಗಿ ಹೇಳಿದರು.
(ಪ್ರಶಾಂತ್ ನಾತು ಅಂಕಣದ ಆಯ್ದ ಭಾಗ)