ಜೆಡಿಎಸ್ ನೊಂದಿಗೆ ಅನೇಕ ಆಂತರಿಕ ಷರತ್ತುಗಳನ್ನು ಹಾಕಿಯೇ ಸರ್ಕಾರ ರಚನೆ ಮಾಡಿಕೊಂಡಿದ್ದೇವೆ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿದ್ದಾರೆ. 

ಚಿಕ್ಕನಾಯಕನಹಳ್ಳಿ : ಈ ಹಿಂದೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಮುಂದುವರೆಸುವಂತೆ ಜೆಡಿಎಸ್‌ಗೆ ಆಂತರಿಕ ಷರತ್ತು ಹಾಕಿಯೇ ಅಧಿಕಾರ ಬಿಟ್ಟುಕೊಟ್ಟಿದ್ದೇವೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್‌ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ನಗರದ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕ್ವಿಟ್‌ ಇಂಡಿಯಾ ಚಳವಳಿಯ 76ನೇ ವಾರ್ಷಿಕೋತ್ಸವ ಹಾಗೂ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಐದು ವರ್ಷಗಳ ಅಧಿಕಾರಾವಧಿಯಲ್ಲಿ ಎಲ್ಲ ಸವಲತ್ತು ಕೊಟ್ಟರೂ ಮತದಾರ ನಮ್ಮ ಕೈಹಿಡಿಯಲಿಲ್ಲ. ಅನ್ನಭಾಗ್ಯ ಯೋಜನೆ ಮೂಲಕ .4500 ಕೋಟಿ ವೆಚ್ಚದಲ್ಲಿ 7 ಕೆ.ಜಿ.ಅಕ್ಕಿ, ಜನರಿಗೆ .1.5ಲಕ್ಷ ವೆಚ್ಚದಲ್ಲಿ 13 ಲಕ್ಷ ಮನೆ, 22.5ಲಕ್ಷ ರೈತರ ಸಾಲಮನ್ನಾ, ಮಹಿಳೆಯರಿಗಾಗಿ ಮತ್ತು ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೆವು. ಈ ಯೋಜನೆಗಳ ಮೂಲಕ 120ರಿಂದ 130 ಸ್ಥಾನ ಗೆಲ್ಲಬಹುದೆನ್ನಲ್ಲುವ ನಮ್ಮ ಯೋಜನೆ ತಲೆಕೆಳಗಾಯಿತು ಎಂದರು.

ಕಳೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಹಿನ್ನೆಲೆಯಲ್ಲಿ ಸಮಾನ ಮನಸ್ಕ ಹಾಗೂ ಜಾತ್ಯತೀತ ತತ್ವಸಿದ್ಧಾಂತ ಅನುಷ್ಠಾನಗೊಳಿಸುವ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ವರಿಷ್ಠರು ನಿರ್ಧರಿಸಿದ್ದರು. ಅದರಂತೆ ಜೆಡಿಎಸ್‌ ಜತೆ ಸೇರಿ ಸಮ್ಮಿಶ್ರ ಸರ್ಕಾರ ನಡೆಸಲಾಗುತ್ತಿದೆ. ಈ ವೇಳೆ ಹಿಂದೆ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿದ ಎಲ್ಲ ಜನಪರ ಕಾರ್ಯಕ್ರಮಗಳನ್ನು ಮುಂದುವರೆಸುವಂತೆ ಆಂತರಿಕವಾಗಿ ಜೆಡಿಎಸ್‌ಗೆ ಷರತ್ತು ಹಾಕಿದ್ದೇವೆ. 80 ಶಾಸಕರಿದ್ದರೂ 37 ಮಂದಿ ಶಾಸಕರಿರುವ ಪಕ್ಷಕ್ಕೆ ಅಧಿಕಾರ ಬಿಟ್ಟುಕೊಟ್ಟಿದ್ದೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾರ ವಿರುದ್ಧ ಹೋರಾಟ-ಗುದ್ದಾಟ ಮಾಡಿದ್ದೆವೋ ಅವರ ಜೊತೆಯೇ ಕೈಕೈ ಹಿಡಿದು ಸರ್ಕಾರ ಮಾಡುವ ಅನಿವಾರ್ಯತೆ ಬಂದದ್ದು ಪರಿಸ್ಥಿತಿಯ ದೌರ್ಭಾಗ್ಯ ಎಂದು ಪರಮೇಶ್ವರ್‌ ಹೇಳಿದರು.

ಹೊಂದಾಣಿಕೆ ಇಲ್ಲ: ರಾಜ್ಯದಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾಂಗ್ರೆಸ್‌ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಇದೇ ವೇಳೆ ಪರಮೇಶ್ವರ್‌ ಸ್ಪಷ್ಟಪಡಿಸಿದರು.