ರಾಜ್ಯಕ್ಕೆ ಗಾಯದ ಮೇಲೆ ಬರೆ: ನಾಳೆ ಸರ್ವಪಕ್ಷ ಸಭೆ ಕರೆದ ಸರ್ಕಾರ
ಬೆಂಗಳೂರು(ಸೆ.27): ರಾಜ್ಯದಲ್ಲಿ ಕಾವೇರಿ ಕಣಿವೆ ಪ್ರದೇಶದ ಸಂಕಷ್ಟವನ್ನು ಹರಿಯದೇ ತಮಿಳುನಾಡಿಗೆ 3 ದಿನ ಒಟ್ಟು 18 ಸಾವಿರ ಕ್ಯೂಸೆಕ್ ನೀರು ಬಿಡಲು ಸುಪ್ರೀಂ ಆದೇಶ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಾಳೆ ಸರ್ವಪಕ್ಷ ಸಭೆ ಕರೆದಿದೆ. ಸರ್ವಪಕ್ಷ ಸಭೆಯಲ್ಲಿ ನೀರು ಬಿಡದಂತೆ ವಿಧಾನಸಭೆಯಲ್ಲಿ ಕೈಗೊಂಡಿದ್ದ ನಿರ್ಣಯ ಹಾಗೂ ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಕೆಆರ್'ಎಸ್'ನಲ್ಲಿ ನೀರಿಲ್ಲ ಎಂಬ ವಾದಕ್ಕೆ ಮನ್ನಣೆ ನೀಡದ ಸುಪ್ರೀಂಕೋರ್ಟ್ ಕರ್ನಾಟಕದ ಯಾವುದೇ ವಾದಕ್ಕೂ ಕಿಮ್ಮತ್ತು ನೀಡಿಲ್ಲ.
ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಲ್ಲಿ ಮಾತುಕತೆ
ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಲ್ಲಿ ಕೇಂದ್ರ ಜಲಸಂಪನ್ಮೂಲ ಕಾರ್ಯದರ್ಶಿ ಶಶಿಶೇಖರ್ ನೇತೃತ್ವದಲ್ಲಿ ದೆಹಲಿಯಲ್ಲಿ 2 ದಿನಗಳ ಕಾಲ ಕರ್ನಾಟಕ-ತಮಿಳುನಾಡು ಅಧಿಕಾರಿಗಳ ಜತೆ ಸಭೆ ನಡೆಯಲಿದೆ. ಸಭೆಯಲ್ಲಿ 2 ರಾಜ್ಯಗಳ ನಡುವೆ ನೀರು ಹಂಚಿಕೆ ಕುರಿತು ಸಮಾಲೋಚನೆ ನಡೆಯಲಿದೆ. ಸಭೆ ಬಳಿಕ ಶುಕ್ರವಾರ ಸುಪ್ರೀಂಕೋರ್ಟ್ಗೆ ನೀರು ಹಂಚಿಕೆ ಬಗ್ಗೆ ಕೈಗೊಂಡ ನಿರ್ಧಾರದ ಬಗ್ಗೆ ಸುಪ್ರೀಂ ಕೋರ್ಟ್'ಗೆ ಮಾಹಿತಿ ನೀಡಲಾಗುತ್ತದೆ.
52.49 ಟಿಎಂಸಿ ನೀರು ತಮಿಳುನಾಡಿಗೆ ಹರಿದಿದೆ
ತಮಿಳುನಾಡಿಗೆ ಈ ವರ್ಷ 52.49 ಟಿಎಂಸಿ ನೀರು ಹರಿದಿದೆ. ಮೆಟ್ಟೂರು ಜಲಾಶಯದಲ್ಲಿ ಈಗ 40 ಟಿಎಂಸಿ ನೀರು ಸಂಗ್ರಹವಿದ್ದು, ಸಾಂಬಾ ಬೆಳೆಗೆ ಕಾವೇರಿ ನೀರೇ ಹರಿದು ಹೋಗಿದೆ. ಈಗ ರಾಜ್ಯದ 4 ಜಲಾಶಯಗಳಲ್ಲಿ 29 ಟಿಎಂಸಿ ನೀರು ಮಾತ್ರ ಇದೆ. ಕಾವೇರಿ ಕೊಳ್ಳದ ಭಾಗದ ರೈತರ ಬೆಳೆಗಳಿಗೆ ಈ ಹಂಗಾಮಿಗೆ ನೀರು ಬಿಟ್ಟಿಲ್ಲ. ಇದು ಮುಂದಿನ ಜೂನ್ವರೆಗೂ ಕುಡಿಯುವ ನೀರಿಗೆ ಅಗತ್ಯವಿದ್ದು, ಹಿಂಗಾರು ಮಳೆ ಕೈಕೊಟ್ಟರೆ ಕಾವೇರಿ ಕೊಳ್ಳದ ಭಾಗದಲ್ಲಿ ಜಲಕ್ಷಾಮ ಆವರಿಸಲಿದೆ.
ಕಿಕ್ಕಿರಿದು ತುಂಬಿರುವ ಸುಪ್ರೀಂಕೋರ್ಟ್ ಹಾಲ್
ಇಂದು ತೀರ್ಪು ಪ್ರಕಟವಾಗುವ ಕಾರಣದಿಂದ ಹಲವು ಜನಪ್ರತಿನಿಧಿಗಳು ಸುಪ್ರೀಂಕೋರ್ಟ್ ಹಾಲ್-3ನಲ್ಲಿ ತುಂಬಿದ್ದರು.
ಸಂಸದರಾದ ಪ್ರಕಾಶ್ ಹುಕ್ಕೇರಿ, ಡಿ.ಕೆ.ಸುರೇಶ್, ಮುದ್ದಹನುಮೇಗೌಡ, ಮಾಜಿ ಸಂಸದೆ ನಟಿ ರಮ್ಯಾ ಸೇರಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಜರಿದ್ದರು.
ಕರ್ನಾಟಕ-ತಮಿಳುನಾಡು ವಕೀಲರ ನಡುವೆ ವಾದ- ಪ್ರತಿವಾದ: ವಿಧಾನಸಭೆ ನಿರ್ಣಯ ಕೈಗೊಂಡಿರುವ ಕಾರಣದಿಂದ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ. ನಾವು ದ್ವಂದ್ವದಲ್ಲಿದ್ದೇವೆ ಎಂದು ವಕೀಲ ನಾರಿಮನ್ ವಾದ ಮಂಡಿಸಿದ್ದಾರೆ. ವಿಧಾನಸಭೆ ನಿರ್ಣಯದ ಹೊರತಾಗಿಯೂ ನೀರು ಬಿಡಿ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.
ರಾಜ್ಯ ಸರ್ಕಾರದ ಮುಂದಿನ ನಡೆ ಏನು?
ವಿಧಾನಸಭೆ ನಿರ್ಣಯವನ್ನು ಒಪ್ಪದ ಸುಪ್ರೀಂಕೋರ್ಟ್ ‘ವಿಧಾನಸಭೆ ನಿರ್ಣಯ ಸುಪ್ರೀಂ ಆದೇಶ ಅನುಷ್ಠಾನಕ್ಕೆ ಅಡ್ಡಿ ಬರುವುದಿಲ್ಲ’. ವಿಧಾನಸಭೆ ನಿರ್ಣಯವೇ ಬೇರೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.ಮತ್ತೆ ನೀರು ಬಿಡುವುದು ಅಸಾಧ್ಯ ಎಂದಿರುವ ರಾಜ್ಯ ವಕೀಲ ನಾರಿಮನ್ ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೈಗೊಳ್ಳುವ ನಿರ್ಧಾರದತ್ತ ಎಲ್ಲರ ಚಿತ್ತ ಹರಿದಿದೆ.